ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಮುದಾಯವಾದ ಕುರುಬರನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರಿಸಲು ತಯಾರಿ ನಡೆಸುತ್ತಿರುವ ಸುದ್ದಿ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಕುರಿತಾಗಿ ಸೆಪ್ಟೆಂಬರ್ 16ರಂದು, ಬೆಂಗಳೂರಿನಲ್ಲಿ ಮಹತ್ವದ ಸಭೆ ಕೂಡ ಆಯೋಜಿಸಲಾಗಿದೆ.
ಏನು ನಡೆಯಲಿದೆ ನಾಳೆಯ ಸಭೆಯಲ್ಲಿ?
ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಡೆಸಲಿರುವ ಈ ಸಭೆಗೆ ಸಂಬಂಧಿಸಿದಂತೆ ಈಗಾಗಲೇ ಸೂಚನೆ ಪತ್ರ ಕಳುಹಿಸಲಾಗಿದೆ. ಸಭೆಯ ಪ್ರಮುಖ 2 ಅಜೆಂಡಾಗಳು ಹೀಗಿವೆ:
- ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಬಗ್ಗೆ ಚರ್ಚೆ
- ಬೀದರ್, ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಕುರುಬ ಸಮುದಾಯಕ್ಕೆ ಗೊಂಡ ಸಮುದಾಯದ ಜೊತೆ ಸಾಮ್ಯತೆ ಪರಿಶೀಲನೆ
ಹಿನ್ನಲೆ: ಜಾತಿ ಆಧಾರದ ಮೀಸಲಾತಿ ಪೈಪೋಟಿ
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ, ಪರಿಶಿಷ್ಟ ಜಾತಿಯ 101 ಜಾತಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಒಳ ಮೀಸಲಾತಿ ನೀಡಿದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರೆ, ಅಲೆಮಾರಿ ಜನಾಂಗಗಳು ತಮ್ಮ ಮೀಸಲಾತಿಗೆ ನ್ಯಾಯ ಬೇಕೆಂದು ಆಗ್ರಹಿಸುತ್ತಿವೆ.
ಈ ನಡುವೆ ಈಗ ಕುರುಬ ಸಮುದಾಯದ ಎಸ್ಟಿ ಸೇರಿಕೆ ಇನ್ನೊಂದು ತೀವ್ರ ರಾಜಕೀಯ ಚರ್ಚೆಯ ಕೇಂದ್ರವಾಗಿದೆ.
ಬಿಜೆಪಿ ಶಾಸಕ ಶ್ರೀವತ್ಸ ಕಿಡಿ – “ಪುತ್ರ ಯತೀಂದ್ರಗೆ ಮೀಸಲು ಕ್ಷೇತ್ರ ತಂತ್ರ”
ಸಿಎಂ ಸಿದ್ದರಾಮಯ್ಯನವರ ತಂತ್ರವನ್ನು ಬಿಜೆಪಿ ಶಾಸಕ ಶ್ರೀವತ್ಸ ಭಾರಿಯಾಗಿ ಟೀಕಿಸಿದ್ದಾರೆ:
“ಪುತ್ರ ಯತೀಂದ್ರಗೆ ಮೀಸಲು ಕ್ಷೇತ್ರ ಕೊಡಿಸಲು ಕುರುಬರನ್ನು ಎಸ್ಟಿಗೆ ಸೇರಿಸುತ್ತಿದ್ದಾರೆ. ಇದು ಸ್ವಜನಪಕ್ಷಪಾತ ಮತ್ತು ಧೃತರಾಷ್ಟ್ರ ಪ್ರೇಮ,” ಎಂದು ಅವರು ಕಿಡಿಕಾರಿದ್ದಾರೆ.
ಹಿನ್ನಾಲೆ: ಆಗಿನ ಪಾದಯಾತ್ರೆ, ಇಂದಿನ ತೀರ್ಮಾನ
ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಆಗಾಗಲೆ ಈ ಬೇಡಿಕೆಗೆ ಪಾದಯಾತ್ರೆಗಳು ನಡೆದಿದ್ದರೂ, ಆಗ ಸಿದ್ದರಾಮಯ್ಯ ಬೆಂಬಲ ತೋರಿರಲಿಲ್ಲ. ಆದರೆ ಇದೀಗ ರಾಜಕೀಯ ಗಣಿತ ಬದಲಾಗಿದ್ದು, ತಮ್ಮ ಸಮುದಾಯದ ಹಿತಕ್ಕಾಗಿ ತಾವು ಕಣಕ್ಕಿಳಿದಿರುವಂತೆ ತೋರುತ್ತಿದೆ.
ಸಮುದಾಯದ ನೆಮ್ಮದಿ – ವಿರೋಧ ಪಕ್ಷಗಳ ಕಿಡಿ – ಸರ್ಕಾರದ ಸವಾಲು
ಒತ್ತಡ, ಒಲವಿನ ರಾಜಕೀಯ ನಡುವೆ ಸರ್ಕಾರ ಇಂತಹ ಹೆಜ್ಜೆ ಇಡುತ್ತಿದೆ. ಶಾಶ್ವತ ಹಿಂದುಳಿದ ವರ್ಗ ಆಯೋಗ ಹಾಗೂ ಕೇಂದ್ರ ಎಸ್ಟಿ ಆಯೋಗಕ್ಕೆ ಶಿಫಾರಸ್ಸು ನೀಡಲು ಮುನ್ನುಡಿಯಾಗುವಂತೆ ಈ ಸಭೆ ನಡೆಯಲಿದ್ದು, ಅದರ ತೀರ್ಮಾನಗಳಿಗೆ ಎಲ್ಲರೂ ಕಣ್ಣುಹಾಯಿಸಿದ್ದಾರೆ.
For More Updates Join our WhatsApp Group :




