ಅಕ್ಕಿರಾಂಪುರದಲ್ಲಿ 69 ಲಕ್ಷ ವೆಚ್ಚದಲ್ಲಿ ನಿರ್ಮಿತ ಕಸ್ತೂರಿಬಾ ಬಾಲಿಕಿಯರ ನಿಲಯ ಅಭಿವೃದ್ಧಿ ಕಾಣದೇ ಪಾಳು ಬಿದ್ದಿದೆ
ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ಬಾಲಕಿಯರ ವಸತಿ ನಿಲಯ ಅಭಿವೃದ್ಧಿ ಕಾಣದೆ ಪಾಳು ಬಿದ್ದಿದೆ. ಗ್ರಾಮದಲ್ಲಿ ಇರುವ ಪಾರಂಪರಿಕ ನಂಬಿಕೆಯನ್ನು ನೆಪ ಮಾಡಿಕೊಂಡು ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ತೋರಿಸುತ್ತಿದೆಯೇ ಎಂಬ ಪ್ರಶ್ನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಸುಮಾರು 69 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಸ್ತೂರಿಬಾ ಬಾಲಿಕಿಯರ ವಿದ್ಯಾರ್ಥಿನಿಲಯ ಕಳೆದ ಎಂಟು ವರ್ಷಗಳಿಂದ ಖಾಲಿ ಬಿದ್ದಿದ್ದು, ಇದು ಇದೀಗ ವಿವಾದಕ್ಕೆ ಕಾರಣವಾಗಿದೆ.
ನಿರ್ಮಾಣವಾದ ಒಂದು ತಿಂಗಳಲ್ಲೇ ಖಾಲಿಯಾದ ಕಟ್ಟಡ
2015ರಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲವಾಗಲೆಂದು ಈ ಬಾಲಕೀಯರ ನಿಲಯ ನಿರ್ಮಿಸಲಾಗಿತ್ತು. ಆದರೆ ನಿರ್ಮಾಣವಾದ ಕೇವಲ ಒಂದು ತಿಂಗಳಲ್ಲೇ ವಿದ್ಯಾರ್ಥಿನಿಯರ ಕೊರತೆಯಿಂದ ನಿಲಯವನ್ನು ಬಂದ್ ಮಾಡಲಾಗಿದೆ. ಅದಾದ ಬಳಿಕ ಇಂದಿಗೂ ಈ ವಿದ್ಯಾರ್ಥಿನಿಲಯ ಬಳಸಲಾಗದೇ ಖಾಲಿಯಾಗಿಯೇ ಉಳಿದಿದೆ.
ಗ್ರಾಮಸ್ಥರ ಪಾರಂಪರಿಕ ನಂಬಿಕೆ
ವಿದ್ಯಾರ್ಥಿನಿಲಯದ ಸಮೀಪದಲ್ಲಿರುವ ಏಳುಮಂದೆಮ್ಮ ದೇವಾಲಯದ ಕಾರಣದಿಂದಾಗಿ ಈ ಪ್ರದೇಶದಲ್ಲಿ ಮಹಿಳೆಯರು ಸಂಚರಿಸುವುದು ಅಪವಿತ್ರ ಎಂದು ಗ್ರಾಮಸ್ಥರು ನಂಬುತ್ತಾರೆ. ಮುಟ್ಟಾದ ಮಹಿಳೆಯರು ಅಥವಾ ಬಾಣಂತಿಯರು ಈ ಜಾಗದಲ್ಲಿ ಸಂಚರಿಸಿದರೆ ದೇವಿ ಮುನಿಸಿಕೊಳ್ಳುತ್ತಾಳೆ ಎಂಬ ಭಯ ಗ್ರಾಮಸ್ಥರಲ್ಲಿ ಇದೆ. ಈ ಕಾರಣದಿಂದ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಈ ವಿದ್ಯಾರ್ಥಿನಿಲಯಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕೆಲ ಗ್ರಾಮಸ್ಥರು ಹೇಳಿದ್ದಾರೆ.
ಇದರ ನಡುವೆ ದೇವಸ್ಥಾನದ ಅರ್ಚಕರು ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿನಿಲಯವು ದೇವಾಲಯದ ಗಡಿಯ ಹೊರಗಿದ್ದು ದೇವಸ್ಥಾನಕ್ಕೂ ಹಾಸ್ಟೆಲ್ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮೌಢ್ಯ ನಂಬಿಕೆ, ಆಡಳಿತಾತ್ಮಕ ನಿರ್ಲಕ್ಷ್ಯ ಮತ್ತು ಅಭಿವೃದ್ಧಿಯ ಕೊರತೆ ನಡುವೆ 8 ವರ್ಷಗಳಿಂದ ಬಾಲಕೀಯರ ನಿಲಯ ಖಾಲಿ ಬಿದ್ದಿರುವುದು ಶಿಕ್ಷಣ ಇಲಾಖೆಗೆ ತಲೆನೋವಾಗಿಯೇ ಪರಿಣಮಿಸಿದೆ.
For More Updates Join our WhatsApp Group :




