ಬಾಗಲಕೋಟೆ: ಜನರು ಕುಡಿಯಲು ಉಪಯೋಗಿಸುವ ಕರ್ನಾಟಕದ 12 ನದಿಗಳ ನೀರಿನ ಗುಣಮಟ್ಟದ ಕುರಿತು ಆಘಾತಕಾರಿ ವರದಿ ಹೊರಬಿದ್ದಿದೆ. ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ವರದಿ ಬೆಚ್ಚಿ ಬೀಳಿಸುವಂತಿದೆ. ಜೀವನದಿ ಕಾವೇರಿ ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿ ನೀರು ಸೇರಿದಂತೆ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ತಿಳಿಸಿದೆ. ವರದಿಯಲ್ಲಿ ಕೃಷ್ಣಾ ನದಿ ಸಿ ದರ್ಜೆಯಲ್ಲಿ ಗುರುತಿಸಿಕೊಂಡಿರುವುದು ಉತ್ತರಕರ್ನಾಟಕ, ಹೈದರಾಬಾದ್ ಕರ್ನಾಟಕದ ಕೃಷ್ಣಾ ತೀರದ ಜನರಿಗೆ ಆತಂಕ ಮೂಡಿಸಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಕಲ್ಮಶ ನೀರು, ಜನರು ಬಳಸಿ ಬಿಡುವ ಮಲಿನ ನೀರು, ಚರಂಡಿ ನೀರು ಹಳ್ಳ ಕೊಳ್ಳಗಳ ಮೂಲಕ ಕೃಷ್ಣಾ ನದಿಗೆ ಸೇರ್ಪಡೆಯಾಗುತ್ತಿದೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ, ರಾಯಚೂರು, ಯಾದಗಿರಿ ಜನರ ಜೀವನಾಡಿ ಕೃಷ್ಣಾ ನದಿಯೂ ಕಲುಷಿತವಾಗಿದೆ. ಸ್ವಚ್ಛತೆಯಲ್ಲಿ ಕೃಷ್ಣಾ ನದಿ ಸಿ ದರ್ಜೆಗೆ ಸೇರಿದ್ದು , ಶುದ್ದೀಕರಣ ಮಾಡಿಯೇ ನೀರು ಕುಡಿಯಬೇಕು. ಇಲ್ಲದಿದ್ದರೆ ಅಪಾಯ ಖಚಿತ ಎಂಬುದು ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷಾ ವರದಿಯಿಂದ ಗೊತ್ತಾಗಿದೆ.
ಬಾಗಲಕೋಟೆ ಜಿಲ್ಲೆಯ 205 ಹಳ್ಳಿಹಳಿಗೆ ಕೃಷ್ಣಾ ನದಿನೀರು ಜೀವಜಲವಾಗಿದೆ. ಈ ಹಳ್ಳಿಗಳ ಜನರ ದಾಹ ನೀಗಿಸುವ ಕೃಷ್ಣಾ ನದಿ ಕಲ್ಮಶವಾಗುತ್ತಿದೆ. ನೋಡಲು ತಿಳಿಯಾಗಿ ಕಂಡರೂ ಅಗೋಚರವಾಗಿರುವ ಕಲ್ಮಶ ಜನರ ದೇಹ ಸೇರುತ್ತಿದೆ ಎಂಬ ಸಂಶಯ ಶುರುವಾಗಿದೆ.
For More Updates Join our WhatsApp Group :
