ಬೆಂಗಳೂರು: ವಿವಾದಗಳಿಗೂ, ಲಾಯರ್ ಜಗದೀಶ್ ಅವರಿಗೂ ಎಲ್ಲಿಲ್ಲದ ನಂಟು. ಸದಾ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸದಾ ಕಾಲ ಸದ್ದು ಮಾಡುತ್ತಾರೆ. ಇತ್ತೀಚೆಗೆ ಅವರ ವಿರುದ್ಧ ಜಾತಿ ನಿಂದನೆ ಆರೋಪ ಎದುರಾಗಿತ್ತು. ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗಿತ್ತು. ಬೆಂಗಳೂರಿನಲ್ಲಿ ಲಾಯರ್ ಜಗದೀಶ್ ಅವರನ್ನು ಬಂಧಿಸಲಾಗಿದೆ.
ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆ ಪೊಲೀಸರಿಂದ ವಕೀಲ ಜಗದೀಶ್ ಅವರ ಬಂಧನ ಆಗಿದೆ. ಅವರನ್ನು ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲಾಯರ್ ಜಗದೀಶ್ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಇದೆ. ಗುರುವಾರ (ಆಗಸ್ಟ್ 21) ಅವರಿಗೆ ನೋಟಿಸ್ ನೀಡಲು ತೆರಳಿದ್ದಾಗ ಮನೆಯ ಬಾಗಿಲು ತೆರೆಯದೇ ಹೈಡ್ರಾಮಾ ಮಾಡಿದ್ದರು.
ಪೊಲೀಸರಿಂದ ಬಂಧನಕ್ಕೆ ಒಳಗಾಗುವಾಗ ಜಗದೀಶ್ ಅವರು ಫೇಸ್ಬುಕ್ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದರು. ‘ಯಾರೂ ಅಶಾಂತಿ ಮಾಡಬೇಡಿ. ಇದು ಸಾಮಾನ್ಯ ಪ್ರಕ್ರಿಯೆ’ ಎಂದು ಅವರು ಹೇಳಿದ್ದಾರೆ. ಅಲ್ಲದೇ ಈ ವಿಡಿಯೋದಲ್ಲಿನ ಕ್ಯಾಪ್ಷನ್ನಲ್ಲಿ ತಮ್ಮ ನಿಲುವು ಏನು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
‘ನಮಸ್ಕಾರ ಕರ್ನಾಟಕ. ಇಂದು ಕೊಡಿಗೆಹಳ್ಳಿ ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದಾರೆ. ನಾನು ಧರ್ಮಸ್ಥಳ ಅತ್ಯಾಖಂಡ ವಿರುದ್ಧ ಸತ್ಯವನ್ನು ಹೇಳಿದ್ದೇ ತಪ್ಪೇ ಸಮಾಜದಲ್ಲಿ ತಪ್ಪು ನಡೆದಾಗ ಧ್ವನಿ ಎತ್ತುವುದು ನಮ್ಮ ಸಂವಿಧಾನಿಕ ಹಕ್ಕು. ನ್ಯಾಯಕ್ಕಾಗಿ ಹೋರಾಡುವುದು ಅಪರಾಧವಲ್ಲ’ ಎಂದು ಅವರು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
ಫೇಸ್ಬುಕ್ನಲ್ಲಿ ಜಗದೀಶ್ ಅವರು ಸರಣಿ ಪೋಸ್ಟ್ ಮಾಡಿದ್ದಾರೆ. ‘ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಾನು ಸಾಕಿದ ನಾಯಿಗಳಿಗೆ ವಿಷ ಹಾಕಿ ಕೊಂದಿದ್ದಾರೆ. ಇದು ಕೇವಲ ಪ್ರಾಣಿಗಳ ಮೇಲೆ ನಡೆದ ದೌರ್ಜನ್ಯವಲ್ಲ. ನನ್ನ ಕುಟುಂಬದ ಮೇಲಿನ ಕ್ರೂರ ದಾಳಿ’ ಎಂದು ಪೋಸ್ಟ್ ಮಾಡಿದ್ದಾರೆ. ಬಳಿಕ, ಇನ್ನೊಂದು ನಾಯಿಗೂ ಹಿಂಸೆ ನೀಡಿರುವ ಬಗ್ಗೆ ತಿಳಿಸಿದ್ದಾರೆ.
‘ನಮ್ಮ ಮನೆಯ ಮತ್ತೊಂದು ನಾಯಿಯ ಕಾಲಿಗೆ ಬಲವಾಗಿ ಹೊಡೆದು ಭಾರಿ ನೋವುಂಟು ಮಾಡಿದ್ದಾರೆ. ನಿರಪರಾಧ ಪ್ರಾಣಿಗೆ ಇಂತಹ ಕ್ರೂರ ಕೃತ್ಯ ಮಾಡಿದವರ ವಿರುದ್ಧ ನ್ಯಾಯ ದೊರಕಬೇಕೆಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಪ್ರಾಣಿಗಳನ್ನು ಪ್ರೀತಿಸಿ. ಅವುಗಳಿಗೂ ಜೀವ, ಭಾವನೆ ಇದೆ. ಕ್ರೂರತೆಗೆ ನಾವು ಮೌನವಾಗಬಾರದು’ ಎಂದು ಅವರು ಬರೆದುಕೊಂಡಿದ್ದಾರೆ.
For More Updates Join our WhatsApp Group :




