ಹುಬ್ಬಳ್ಳಿ: ನಿಶ್ಚಿತಾರ್ಥ ಹಾಗೂ ಮನೆ ಗೃಹ ಪ್ರವೇಶ ಮುಗಿಸಿಕೊಂಡು ಬಾಗಲಕೋಟೆಯ ಕುಳಗೇರ ಕ್ರಾಸ್ಗೆ ಹೊರಟ್ಟಿದ್ದ ಸಾಗರ ತಾಲ್ಲೂಕಿನ ಮೂರಕೈ ಗ್ರಾಮದ ಕುಟುಂಬ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆಯು ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ ನಡೆದಿದೆ.

ಹುಬ್ಬಳ್ಳಿ ಕಡೆಯಿಂದ ಬಾಗಲಕೋಟೆ ಕಡೆ ಹೊರಟ್ಟಿದ್ದ ಕಾರು ನಿಯಂತ್ರಣ ತಪ್ಪಿ ಮುಂದೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಮೂವರು ಮಹಿಳೆ ಹಾಗೂ ಇಬ್ಬರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಸಾಗರ ತಾಲ್ಲೂಕಿನ ಮೂರಕೈ ಗ್ರಾಮದ ವಿಠಲ್ ಶೆಟ್ಟಿ(55) ಶಶಿಕಲಾ ಶೆಟ್ಟಿ( 44), ಸಂದೀಪ್ ಶೆಟ್ಟಿ ( 26) ಶ್ವೇತಾ ಶೆಟ್ಟಿ (29), ಅಂಜಲಿ ಶೆಟ್ಟಿ (26) ಎಂದು ಗುರುತಿಸಲಾಗಿದೆ.
ಸಾಗರದ ಮೂರಕೈ ಗ್ರಾಮದ ವಿಠಲ್ ಶೆಟ್ಟಿ ಕುಳಗೇರಿ ಕ್ರಾಸ್ನಲ್ಲಿ ಹೋಟೆಲ್ ವ್ಯಾಪಾರ ಮಾಡುತ್ತಿದ್ದರು. ನಿನ್ನೆ ಶ್ವೇತಾ ಅನ್ನೋ ಯುವತಿ ಎಂಗೇಜಮೆಂಟ್ ಸಾಗರದಲ್ಲಿ ಮಾಡಿಕೊಂಡಿದ್ದರು. ಎಂಗೇಜಮೆಂಟ್ ಮುಗಿಸಿಕೊಂಡು ಮರಳಿ ಕುಳಗೇರಿ ಇಂದು ಬೆಳಿಗ್ಗೆ ಸಾಗರದಿಂದ ಹೊರಟಿದ್ದರು. ಆದರೆ, ಹುಬ್ಬಳ್ಳಿಯ ಹೊರವಲಯದಲ್ಲಿ ಈ ಅವಘಡ ಸಂಭವಿಸಿದೆ. ಇನ್ನು ಕಾರಿನಲ್ಲಿದ್ದ ಅಂಜಲಿ ಎಂಬ ಯುವತಿ ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದರು ಎನ್ನಲಾಗಿದೆ. ಈ ಕುರಿತಂತೆ ಅವರ ಸಂಬಂಧಿ ಮಾತನಾಡಿ ಸತೀಶ್ ಶೆಟ್ಟಿ ಪ್ರತಿಕ್ರಿಯಿಸಿ, ಮೃತರು ಸಾಗರ ಬಳಿಯ ಸಾಗರ ಬಳಿಯ ಮೂರಕೈ ಗ್ರಾಮದವರು. ಕುಳಗೇರಿ ಕ್ರಾಸ್ ನಲ್ಲಿ ಹೊಟೆಲ್ ಹೊಂದಿದ್ದಾರೆ. ನಾನು ಅವರ ಸಂಬಂಧಿಯಾಗಿದ್ದು, ಈಗ ಹುಬ್ಬಳ್ಳಿಯಲ್ಲಿ ವಾಸವಿದ್ದೇನೆ. ಮಗಳ ನಿಶ್ಚಿತಾರ್ಥ ಹಾಗೂ ಮನೆ ಗೃಹ ಪ್ರವೇಶಕ್ಕೆ ಸಾಗರಕ್ಕೆ ತೆರಳಿದ್ದರು. ನಿಶ್ಚಿತಾರ್ಥ ಮುಗಿಸಿಕೊಂಡು ಮರಳಿ ಹೋಗುವಾಗ ಈ ಅವಘಡ ಸಂಭವಿಸಿದೆ ಎಂದು ಮಾಹಿತಿ ನೀಡಿದರು.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್ ಮಾತನಾಡಿ, ಹುಬ್ಬಳ್ಳಿ ಮತ್ತು ಮನವಗುಂದ ಮಧ್ಯೆ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ, ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರು ಸಾಗರದಿಂದ ಕುಳಗೇರಿ ಕ್ರಾಸ್ ಕಡೆಗೆ ಹೊರಟ್ಟಿದ್ದರು. ಘಟನೆಗೆ ಕಾರಣ ಏನು ಎಂಬ ಬಗ್ಗೆ ಈಗಲೇ ಹೇಳಲು ಬರುವದಿಲ್ಲ. ತನಿಖೆಯ ನಂತರ ಅಪಘಾತಕ್ಕೆ ಕಾರಣ ತಿಳಿಯಲಿದೆ ಎಂದು ಮಾಹಿತಿ ನೀಡಿದರು.
ಹುಬ್ಬಳ್ಳಿಯಲ್ಲಿ ಹೆಚ್ಚುತ್ತಿರುವ ಅಪಘಾತ: ಇನ್ನು ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತ ಹೆಚ್ಚಳವಾಗುತ್ತಿದೆ. ಹೊರ ವಲಯ ಹಾಗೂ ಹೆದ್ದಾರಿ ಭಾಗದಲ್ಲಿ ಒಂದಿಲ್ಲೊಂದು ಭೀಕರ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಈ ಭಾಗದಲ್ಲಿ ಅಪಘಾತಗಳನ್ನು ತಪ್ಪಿಸಬೇಕು ಹಾಗೂ ಅಪಘಾತಗಳನ್ನು ತಡೆಯುವುದಕ್ಕೆ ಜಾಗೃತಿ ಮೂಡಿಸಬೇಕು ಎನ್ನುವ ಆಗ್ರಹವು ಹೆಚ್ಚಾಗಿದೆ.