ಬೆಂಗಳೂರು: ಬೆಂಗಳೂರಿನಲ್ಲಿ ಸುರಿದ ಪೂರ್ವ ಮುಂಗಾರು ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಅದರಲ್ಲೂ ಎರಡು ದಿನ ಸುರಿದ ಭಾರೀ ಮಳೆ ಬೆಂಗಳೂರಿಗರನ್ನು ನಲುಗಿಸಿದೆ. ಕಳೆದ ವಾರ ಸುರಿದ ಮಳೆಯ ಆರ್ಭಟಕ್ಕೆ ಸಂಭವಿಸಿದ ಮೂಲಸೌಕರ್ಯ ಹಾನಿ ವರದಿ ಇಲ್ಲಿದೆ.

ಕಳೆದ ವಾರ ಸುರಿದ ಭಾರೀ ಮಳೆಗೆ ಬೆಂಗಳೂರಿಗರು ತತ್ತರಿಸಿ ಹೋಗಿದ್ದು, ಮಳೆಯ ಅಬ್ಬರಕ್ಕೆ ನಗರದ ಬಹುತೇಕ ಸ್ಥಳಗಳು ಜಲಾವೃತಗೊಂಡಿದ್ದವು. ಮಹದೇವಪುರದ ಸಾಯಿ ಲೇಔಟ್, ಯಲಹಂಕದ ಕೆಂಪೇಗೌಡ ವಾರ್ಡ್, ಹೆಚ್ಎಸ್ಆರ್ ಲೇಔಟ್, ಆರ್.ಆರ್ ನಗರ ಲೇಔಟ್ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ತೀವ್ರ ಮಳೆ ಹಾನಿ ಸಂಭವಿಸಿತ್ತು. ಆ ಮೂಲಕ ಮಳೆಯ ಅವಾಂತರದಿಂದ ಬೆಂಗಳೂರಿನ ಕೆಟ್ಟ ಮೂಲಸೌಕರ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಜನಾಕ್ರೋಶ ಕಾರಣ ಸಿಎಂ ಹಾಗೂ ಡಿಸಿಎಂ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದರು. ರಣಮಳೆಗೆ ಬೆಂಗಳೂರಲ್ಲಿ ಮಳೆ ಹಾನಿಯೂ ವ್ಯಾಪಕವಾಗಿ ಉಂಟಾಗಿದೆ.
188 ಕೋಟಿ ವೆಚ್ಚದ ರಸ್ತೆ ಹಾನಿ: ಡಿಸಿಎಂ ಡಿ.ಕೆ. ಶಿವಕುಮಾರ್ ಕಳೆದ ಶನಿವಾರ ಅಧಿಕಾರಿಗಳ ಜೊತೆ ನಡೆಸಿದ ಬೆಂಗಳೂರು ಮಳೆ ಹಾನಿ ಸಂಬಂಧದ ಸಭೆಯಲ್ಲಿ ಬಿಬಿಎಂಪಿ ನೀಡಿದ ಅಂಕಿ – ಅಂಶದ ಪ್ರಕಾರ ಮಳೆಯ ಅಬ್ಬರಕ್ಕೆ ಬೆಂಗಳೂರಿನ ಒಟ್ಟು ಸುಮಾರು 343 ಕಿ.ಮೀ. ರಸ್ತೆಗಳು ಹಾನಿಗೊಳಗಾಗಿವೆ. ಅಂದಾಜು ಸುಮಾರು 188 ಕೋಟಿ ರೂ. ವೆಚ್ಚದ ರಸ್ತೆಗಳು ಹಾನಿಗೊಳಗಾಗಿವೆ. ಸುಮಾರು 878 ರಸ್ತೆಗಳು ಮಳೆಗೆ ಹಾನಿಗೀಡಾಗಿವೆ.
ಈ ಪೈಕಿ ಬೊಮ್ಮನಹಳ್ಳಿ ವಲಯದಲ್ಲಿ 147 ಕಿ.ಮೀ ವಾರ್ಡ್ ರಸ್ತೆಗಳು ಮಳೆಗೆ ಹಾನಿಗೀಡಾಗಿದ್ದು, ಅಂದಾಜು 71 ಕೋಟಿ ರೂ. ನಷ್ಟವಾಗಿದೆ. ಯಲಹಂಕ ವಲಯದಲ್ಲಿ 37.80 ಕಿ.ಮೀ ರಸ್ತೆಗಳು ಹಾನಿಗೀಡಾಗಿದ್ದು, 15.81 ಕೋಟಿ ರೂ. ರಸ್ತೆ ಹಾನಿಯಾಗಿದೆ. ಇನ್ನು ಆರ್.ಆರ್ ನಗರ ವಲಯದಲ್ಲಿ ಮಳೆಗೆ ಸುಮಾರು 30.24 ಕಿ.ಮೀ. ರಸ್ತೆ ಹಾಳಾಗಿದ್ದು, ಅಂದಾಜು ಸುಮಾರು 49.71 ಕೋಟಿ ರೂ. ರಸ್ತೆ ಹಾನಿಯಾಗಿದೆ. ದಾಸರಹಳ್ಳಿ ವಲಯದಲ್ಲಿ ಸುಮಾರು 34.35 ಕಿ.ಮೀ ರಸ್ತೆಗಳು ಮಳೆಗೆ ಕೊಚ್ಚಿ ಹೋಗಿದ್ದು, ಅಂದಾಜು 18 ಕೋಟಿ ರೂ. ರಸ್ತೆ ಹಾನಿಗೀಡಾಗಿದೆ.