ಬೆಂಗಳೂರು : ಮೆಟ್ರೋ ರೈಲು ಪ್ರಯಾಣ ದರ ಏರಿಕೆ ಖಂಡಿಸಿ , ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದರ ಮೂಲಕ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಪಕ್ಷದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ
ಬೆಂಗಳೂರು ಮಹಾನಗರ ಸಾರಿಗೆ ಸೇರಿದಂತೆ ಇತ್ತೀಚೆಗಷ್ಟೆ ರಾಜ್ಯ ಸರ್ಕಾರದ ಬಸ್ ಪ್ರಯಾಣದರ ಹೆಚ್ಚಿಸಿದ ಬೆನ್ನಲ್ಲೇ ಇದೀಗ ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಿಸಿವುದನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾವು (ಆರ್.ಪಿ.ಐ) ಖಂಡಿಸುತ್ತದೆ. ಮೆಟ್ರೋ ರೈಲು ಪ್ರಯಾಣದ ದರವನ್ನು ಶೇಕಡ 46ರಷ್ಟು ಹೆಚ್ಚಿಸಿರುವುದು ಯಾವ ಕಾರಣಕ್ಕೂ ಸಮರ್ಥನೀಯವಲ್ಲ, ದೂರದ ಮೆಟ್ರೋ ಠಾಣೆಗಳಿಗೆ ಹೋಗುವ ದರವು ನೂರಕ್ಕೆ ನೂರರಷ್ಟು ಹೆಚ್ಚಿಸಿರುವುದು ಬೆಂಗಳೂರಿಗರಿಗೆ ಆಘಾತ ತಂದಿದೆ. ಇದೊಂದು ಅವೈಜ್ಞಾನಿಕ ಪ್ರಯಾಣದರ ಹೆಚ್ಚಳ. ಈ ದರ ಏರಿಕೆಯ ನಿರ್ಧಾರವನ್ನು ಕೇಂದ್ರ ಸರ್ಕರವು ತೆಗೆದುಕೊಂಡಿದ್ದರೂ ರಾಜ್ಯ ಸರ್ಕಾರವು ಇದಕ್ಕೆ ಸಮ್ಮತಿಸಬಾರದು ಇದೊಂದು ಜನವಿರೋಧಿ ಏರಿಕೆ ಎಂದು ಮೆಟ್ರೋ ಆಡಳಿತ ಮಂಡಳಿಗೆ ತಿಳಿಹೇಳುವ ಜವಾಬ್ದಾರಿಯನ್ನು ಮಾನ್ಯ ಮುಖ್ಯಮಂತ್ರಿಗಳು ನಿರ್ವಹಿಸಬೇಕೆಂದು ನಾವು ಈ ಮೂಲಕ ಒತ್ತಾಯಿಸುತ್ತೇವೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಖಜಾಂಚಿ ಮತ್ತು ಬೆಂಗಳೂರು ನಗರ ಉಸ್ತುವಾರಿ ಡಾ. ಆರ್.ಚಂದ್ರಶೇಖರ್ ತಿಳಿಸಿದ್ದಾರೆ.

ಈ ಏರಿಕೆಯು ಬೆಂಗಳೂರಿನ ಸಾರ್ವಜನಿಕರಿಗೆ ಎಸಗಿರುವ ಅನ್ಯಾಯದ ಪರಮಾವಧಿ, ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ದರವನ್ನು ದುಪ್ಪಟ್ಟು ಮಾಡಿರುವುದು ಸರಿಯಲ್ಲ. ದರ ಪರಿಷ್ಕರಣೆ ಹೆಸರಲ್ಲಿ ಮೆಟ್ರೋ ಮಾಡಿರುವ ಈ ಹಗಲು ದರೋಡೆಯನ್ನು ಸಾರ್ವಜನಿಕರು ಬೀದಿಗಿಳಿದು ಪ್ರತಿಭಟಿಸಬೇಕೆಂದು ಆರ್.ಪಿ.ಐ. ಕರೆ ನೀಡುತ್ತದೆ. ಮೆಟ್ರೋ ರೈಲು ವ್ಯಾಪ್ತಿಯಲ್ಲಿನ ಅಭಿವೃದ್ಧಿ ಮತ್ತು ವಿಸ್ತರಣೆಗಾಗಿ ಈ ಪ್ರಯಾಣದ ದರದ ಹೆಚ್ಚಳ ಎಂಬ ಕಾರಣ ನೀಡಿರುವುದು ತಿಳಿಗೇಡಿತನದ ಪರಮಾವದಿ. ಅಭಿವೃದ್ಧಿ ಹೂಡಿಕೆಯ ಹಣ ಸಂಗ್ರಹಣೆಗಾಗಿ ಸಾಮಾನ್ಯ ಜನರನ್ನು ಗುರಿಪಡಿಸುವುದು ಸರಿಯಲ್ಲ. ಇಲಾಖೆಯ ಯೋಜನೆಗಳ ನಷ್ಟದಿಂದಾಗಿ ಈ ದರ ಹೆಚ್ಚಳ ಎಂದು ಕಾರಣ ಹೇಳಿರುವುದು ಮತ್ತು ತಮ್ಮ ಮೆಟ್ರೋ ಯೋಜನೆಯ ವಿಸ್ತರಣೆ ಮತ್ತು ಅಭಿವೃದ್ಧಿ ವೆಚ್ಚವನ್ನು ಭರಿಸಲು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ನಿರ್ಧರಿಸುವುದು ಖಂಡನಾರ್ಹ. ಆದ್ದರಿಂದ ಈ ಕೂಡಲೇ ಈ ಪ್ರಯಾಣ ದರವನ್ನು ಹಿಂಪಡೆಯಬೇಕು. ಇಲ್ಲವಾದರೆ ನಮ್ಮ ಪಕ್ಷವು ಪ್ರತಿ ಮೆಟ್ರೋ ಠಾಣೆಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಎಚ್ಚರಿಕೆ ನೀಡುತ್ತಿದ್ದೇವೆ. ಪೂರಕವಾಗಿ 14.02.2025ರಂದು ನಮ್ಮ ಮೆಟ್ರೋ ಆಡಳಿತ ಕಛೇರಿಯ ವರಿಷ್ಠಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದೇ ದಿನ ದರ ಏರಿಕೆ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಬೆಂಗಳೂರು ನಗರದಾದ್ಯಂತ ಚಾಲನೆ ನೀಡಲಾಗುವುದು ಎಂದು ಆಕ್ರೋಶ ಹಾಕಿದರು.