ಬೆಂಗಳೂರು: ಏಳು ಸರ್ಕಾರಿ ಅಧಿಕಾರಿಗಳ ವಿರುದ್ಧದ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರ ಆರೋಪ ಸಂಬಂಧ ರಾಜ್ಯದ ವಿವಿಧೆಡೆ ಲೋಕಾಯುಕ್ತ ಪೊಲೀಸರು ಇಂದು (ಗುರುವಾರ) ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಆರೋಪಿ ಅಧಿಕಾರಿಗಳಿಗೆ ಸಂಬಂಧಿಸಿದ 40 ಸ್ಥಳಗಳಲ್ಲಿ ಸಂಘಟಿತ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳ ಪ್ರಕಾರ, ತುಮಕೂರಿನ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜಶೇಖರ್, ದಕ್ಷಿಣ ಕನ್ನಡ ಜಿಲ್ಲೆಯ ಸರ್ವೆ ಮೇಲ್ವಿಚಾರಕ ಮಂಜುನಾಥ್, ವಿಜಯಪುರದ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ರೇಣುಕಾ ಸಾತರ್ಲೆ, ಬೆಂಗಳೂರಿನ ನಗರ ಮತ್ತು ಗ್ರಾಮೀಣ ಯೋಜನಾ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಮುರಳಿ ಟಿವಿ, ಬೆಂಗಳೂರು ಕಾನೂನು ಮಾಪನಶಾಸ್ತ್ರದ ಇನ್ಸ್ಪೆಕ್ಟರ್ ಎಚ್ಆರ್ ನಟರಾಜ್, ಹೊಸಕೋಟೆ ತಾಲ್ಲೂಕು ಕಚೇರಿಯ ಎರಡನೇ ದರ್ಜೆಯ ಸಹಾಯ ಅನಂತ್ ಕುಮಾರ್ ಮತ್ತು ಶಹಾಪುರ ತಾಲ್ಲೂಕು ಕಚೇರಿಯ ಉಮಾಕಾಂತ ಎಂಬುವವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.
ಸ್ಥಿರಾಸ್ತಿಗಳು ಮತ್ತು ಲೆಕ್ಕಕ್ಕೆ ಸಿಗದ ನಗದು, ಆಭರಣಗಳು, ದುಬಾರಿ ಬೆಲೆಯ ವಾಹನಗಳು ಮತ್ತು ನಗದು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.