ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಂದಿನಿಯ ಬದಲಾಗಿ ಅಮೂಲ್ಗೆ ಅವಕಾಶ ನೀಡುತ್ತಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಆಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಸ್ತಾವನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರು ಯಾಕೆ ಈಗ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ನಂದಿನಿ ಉಳಿಸಿ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಅನ್ಯ ರಾಜ್ಯದಿಂದ ಒತ್ತಡ ಹಾಗೂ ನಂದಿನಿ ಅಸ್ಮಿತೆ ಪ್ರಶ್ನೆ ಎಂದು ಹೇಳಲಾಗುತ್ತಿತ್ತು. ಈಗ ಕರ್ನಾಟಕವೇ ಅಮೂಲ್ ಹಾಗೂ ಅಮೂಲ್ ಉತ್ಪನ್ನವನ್ನು ಶಾರ್ಟ್ ಲಿಸ್ಟ್ ಮಾಡಿರುವುದೇಕೆ ಎನ್ನುವ ಪ್ರಶ್ನೆ ಎದುರಾಗಿದೆ.

ನಮ್ಮದೇ ಆದ ನಂದಿನಿಯನ್ನು ಪ್ರಚಾರ ಮಾಡುವ ಬದಲು ಬಿಎಂಆರ್ಸಿಎಲ್ ನಂದಿನಿಯನ್ನು ಬಿಟ್ಟು ಅಮುಲ್ ಹಾಗೂ ಅಮೂಲ್ ಉತ್ಪನ್ನವನ್ನು ಆಯ್ಕೆ ಮಾಡಿಕೊಂಡಿದ್ದು ಅಥವಾ ಶಾರ್ಟ್ ಲಿಸ್ಟ್ ಮಾಡಿದೆ. ಯಾರ ಆದೇಶ ಅಥವಾ ಒತ್ತಡದ ಮೇರೆಗೆ ನಂದಿನಿಯನ್ನು ಬಿಟ್ಟು ಅಮೂಲ್ಗೆ ಅನುಮತಿ ನೀಡಲಾಗಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇನ್ನು ಬೆಂಗಳೂರಿನ ಪ್ರತಿಷ್ಠಿತ ಮೆಟ್ರೋ ನಿಲ್ದಾಣಗಳ ಮಳಿಗೆಗಳಲ್ಲೇ ಅಮೂಲ್ಗೆ ಮಣೆಯಾಕಲಾಗಿದೆ. ಕರ್ನಾಟಕದ ನಂದಿನಿ ಉತ್ಪನ್ನಗಳಿಗೆ ಇಲ್ಲಿ ಅವಕಾಶ ನೀಡಬಹುದಾಗಿತ್ತು. ಆದರೆ ಅಮೂಲ್ಗೆ ನೀಡುವ ಮೂಲಕ ಕರ್ನಾಟಕ ಕಾಂಗ್ರೆಸ್ ಪಕ್ಷವು ಇಬ್ಭಗೆಯ ನೀತಿಯನ್ನು ಅನುಸರಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ.