ಬೆಂಗಳೂರು: ಸರ್ಕಾರದ ಸೌರ ಯೋಜನೆಗಳಲ್ಲಿ ಒಂದಾದ ಪಿಎಂ ಕುಸುಮ್ ಸ್ಕೀಮ್ ಕೃಷಿಕರಿಗೆ ಸೌರವಿದ್ಯುತ್ ಒದಗಿಸುವುದರ ಜೊತೆಗೆ ಆದಾಯ ಪಡೆಯಲೂ ಸಹಾಯವಾಗುತ್ತದೆ. ಈ ಸ್ಕೀಮ್ಗೆ ದೇಶದ ಹಲವು ರಾಜ್ಯಗಳಲ್ಲಿ ಉತ್ತಮ ಸ್ಪಂದನೆ ಸಿಕ್ಕುತ್ತಿದೆಯಾದರೂ, ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ಬಂದಿದೆಯಂತೆ. ಬಿಜೆಪಿ ಸಂಸದ ಡಾ. ಕೆ ಸುಧಾಕರ್ ಇತ್ತೀಚೆಗೆ ಸಂಸತ್ನಲ್ಲಿ ಎತ್ತಿದ ಪ್ರಶ್ನೆಗೆ ಉತ್ತರಿಸಿದ ನವೀಕರಣ ಇಂಧನ ಸಚಿವ ಶ್ರೀಪಾದ್ ನಾಯ್ಕ್ ಅವರು, ಕರ್ನಾಟಕದಲ್ಲಿ ಪಿಎಂ ಕುಸುಮ್ ಯೋಜನೆಗೆ ನಿರೀಕ್ಷಿತ ರೀತಿಯಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂದಿದ್ದಾರೆ.
2019ರಲ್ಲಿ ಆರಂಭವಾದ ಪಿಎಂ ಕುಸುಮ್ ಸ್ಕೀಮ್ ಗ್ರಾಮೀಣ ಭಾಗದಲ್ಲಿ ಸೌರ ವಿದ್ಯುತ್ ಅಳವಡಿಕೆಗೆ ಉತ್ತೇಜಿಸುವ ಯೋಜನೆಯಾಗಿದೆ. ಇದರಲ್ಲಿ ಎ, ಬಿ ಮತ್ತು ಸಿ ಎನ್ನುವ ಮೂರು ಭಾಗಗಳಿವೆ. ಈ ಪೈಕಿ ಪಿಎಂ ಕುಸುಮ್ನ ಬಿ ಮತ್ತು ಸಿ ಕಾಂಪೊನೆಂಟ್ಗಳು ಕರ್ನಾಟಕದಲ್ಲಿ ಬಹಳ ಕಡಿಮೆ ಅಳವಡಿಕೆ ಆಗಿವೆ. ಕುಸುಮ್-ಎ ಕಾಂಪೊನೆಂಟ್ಗಂತೂ ಒಂದೂ ಅರ್ಜಿ ಸಲ್ಲಿಕೆಯಾಗಿಲ್ಲ ಎನ್ನಲಾಗಿದೆ.
ಏನಿವು ಪಿಎಂ ಕುಸುಮ್ ಸ್ಕೀಮ್ನ ಮೂರು ಕಾಂಪೊನೆಂಟ್ಗಳು?
ಕಾಂಪೊನೆಂಟ್ ಎ: ವಿದ್ಯುತ್ ಸಬ್ಸ್ಟೆಷನ್ಗಳಿಂದ 5 ಕಿಮೀ ಪರಿಧಿಯೊಳಗೆ ಇರುವ ಬಂಜರು ಭೂಮಿಯಲ್ಲಿ 2 ಮೆ.ವ್ಯಾ.ವರೆಗೆ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಬಹುದು. ಇಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಡಿಸ್ಕಾಮ್ಗೆ ಮಾರುವ ಮೂಲಕ ಆದಾಯ ಪಡೆಯಬಹುದು.
ಕಾಂಪೊನೆಂಟ್ ಬಿ: ಸೌರ ಕೃಷಿಪಂಪ್ಸೆಟ್ಗಳ ಸ್ಥಾಪನೆಗೆ ಸರ್ಕಾರವು ನೆರವು ಒದಗಿಸುತ್ತದೆ. ಸೌರ ಪಂಪ್ಸೆಟ್ ಸ್ಥಾಪಿಸಲು ಕೇಂದ್ರದಿಂದ ಶೇ. 30, ರಾಜ್ಯದಿಂದ ಶೇ. 30 ನೆರವು ಸಿಗುತ್ತದೆ. ಉಳಿದ ಶೇ. 40ರಷ್ಟು ವೆಚ್ಚವನ್ನು ರೈತರು ಭರಿಸಬೇಕಾಗುತ್ತದೆ.
ಕಾಂಪೊನೆಂಟ್ ಸಿ: ಎಲೆಕ್ಟ್ರಿಸಿಟಿ ಗ್ರಿಡ್ಗೆ ಕನೆಕ್ಟ್ ಆಗಿರುವ ಕೃಷಿ ಪಂಪ್ಸೆಟ್ಗಳ ಸೌರೀಕರಣ ಮಾಡಲಾಗುವ ಸ್ಕೀಮ್ ಇದು. ಇದರಲ್ಲಿ ಹೆಚ್ಚುವರಿ ವಿದ್ಯುತ್ ಅನ್ನು ಡಿಸ್ಕಾಮ್ಗೆ ಮಾರಲು ಅವಕಾಶ ಇದೆ.
ನವೀಕರಣ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ನೀಡಿದ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ 2025ರ ಜುಲೈವರೆಗೆ ಪಿಎಂ ಕುಸುಮ್ ಕಾಂಪೊನೆಂಟ್ ಬಿ ಅಡಿಯಲ್ಲಿ 41,365 ಸೋಲಾರ್ ಪಂಪ್ಗಳನ್ನು ಮಂಜೂರು ಮಅಡಲಾಗಿದೆ. ಈ ಪೈಕಿ 2,388 ಪಂಪ್ಸೆಟ್ಗಳನ್ನು ಮಾತ್ರ ಅಳವಡಿಸಲಾಗಿದೆ. ಇನ್ನು, ಕಾಂಪೊನೆಂಟ್ ಸಿ ಅಡಿಯಲ್ಲಿ ಮಂಜೂರಾದ 6.28 ಲಕ್ಷ ಪಂಪ್ಗಳ ಪೈಕಿ 23,133 ಪಂಪ್ಗಳನ್ನು ಮಾತ್ರ ಸೋಲರೈಸ್ ಮಾಡಲಾಗಿದೆ. ಬೆಳಗಾವಿ, ಕಲಬುರ್ಗಿ, ಮೈಸೂರು ಇತ್ಯಾದಿ ಪ್ರಮುಖ ಕೃಷಿ ಪ್ರಾಧಾನ್ಯ ಜಿಲ್ಲೆಗಳಲ್ಲಿ ಬಹಳ ಕಡಿಮೆ ಅಳವಡಿಕೆ ಆಗಿರುವುದು ಗಮನಾರ್ಹ.
For More Updates Join our WhatsApp Group :