ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್

ಕೊಳತೂರು ಬಳಿಯ ಜಂಕ್ಷನ್ ಸರಿಯಿಲ್ಲವೆಂದು ಸ್ಥಳೀಯರ ಆರೋಪ

ಕಲಬುರಗಿ : ಹೋರಾಟ, ತ್ಯಾಗ, ಬಲಿದಾನಗಳಿಂದ ಕಲ್ಯಾಣ ಕರ್ನಾಟಕ ವಿಮೋಚನೆಯಾದ ದಿನ ಇದು. ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಇಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

2013 ರಲ್ಲಿ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯ ಸಮಿತಿ ನೀಡಿದ ವರದಿಯನ್ನು ನಾವು ಯಥಾವತ್ತಾಗಿ ಒಪ್ಪಿಕೊಂಡೆವು. ಪರಿಣಾಮ 371J ಜಾರಿಯಾಗಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ನೀಲ ನಕ್ಷೆ ಹಾಕಿಕೊಂಡು ಕೆಲಸಗಳು ಆರಂಭವಾದವು. ಇಂದಿನ ಸಂಪುಟ ಸಭೆಯಲ್ಲಿ ಒಟ್ಟು 56 ವಿಷಯಗಳು ಚರ್ಚೆಯಾಗಿ ಒಪ್ಪಿಗೆ ಪಡೆಯಲಾಗಿದೆ. ಇದರಲ್ಲಿ 46 ವಿಷಯಗಳು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಪಟ್ಟ ಸಂಗತಿಗಳನ್ನು ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದರು.

ಒಟ್ಟು 56 ವಿಷಯಗಳಿಂದ 12,692 ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದು,  ಇದರಲ್ಲಿ 46 ವಿಷಯಗಳ ಒಟ್ಟು ಮೊತ್ತ 11,770 ಕೋಟಿ ಆಗಿದೆ. ಇವುಗಳಲ್ಲಿ ಬಹಳ ಮುಖ್ಯವಾಗಿ ಬೀದರ್-ರಾಯಚೂರು ಪಟ್ಟಣಗಳನ್ನು ನಗರಪಾಲಿಕೆಗಳನ್ನಾಗಿ ಮಾಡುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಬೀದರ್- ಗುಲ್ಬರ್ಗದ ಎಲ್ಲಾ ಜನ ವಸತಿ ಪ್ರದೇಶಕ್ಕೆ 7200 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನ ಮಾಡಿದ್ದೇವೆ ಎಂದರು.

7200 ಕೋಟಿಯಲ್ಲಿ ಶೇ50 ರಷ್ಟು ಮೊತ್ತವನ್ನು ಕೊಡುವಂತೆ ಕೇಂದ್ರಕ್ಕೆ ಮನವಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಎಲ್ಲಾ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ್ನು ಒದಗಿಸಲು ತೀರ್ಮಾನ ಮಾಡಿದ್ದೇವೆ. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲು ತೀರ್ಮಾನ ಮಾಡಿದ್ದು ಇದರಿಂದ ಈ ಭಾಗದ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ತಿಳಿಸಿದರು.

371J ಜಾರಿಯಾದ ಬಳಿಕ ಇಲ್ಲಿಯವರೆಗೂ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಹೀಗಾಗಿ ಒಂದು ನಿರ್ಣಯ ಪಾಸ್ ಮಾಡಿದ್ದೇವೆ. ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರ ಕೊಟ್ಟಿರುವುಷ್ಟೆ ಪ್ರಮಾಣದ 5000 ಕೋಟಿ ಕೊಡಬೇಕು ಎನ್ನುವ ನಿರ್ಣಯ ಮಾಡಿದ್ದೇವೆ. 17,439 ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

11,770 ಕೋಟಿ ರೂಪಾಯಿಯಲ್ಲಿ ,  ಕೃಷಿ ಇಲಾಖೆಗೆ 100 ಕೋಟಿ, ಕೈಗಾರಿಕಾ ಇಲಾಖೆಗೆ 1550 ಕೋಟಿ , ಅರಣ್ಯ 32, ಆರೋಗ್ಯ 910 ಕೋಟಿ ಸೇರಿ ನಾನಾ ಇಲಾಖೆಗಳಿಗೆ ಹಣ ಹಂಚಿಕೆ ಮಾಡಲಾಗಿದೆ. ಮಿನಿ ವಿಧಾನಸೌಧಗಳಿಗೆ ಪ್ರಜಾಸೌಧ ಎಂದು ನಾಮಕರಣ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ನಂಜುಂಡಪ್ಪನವರ ಅಧ್ಯಕ್ಷತೆಯ ಸಮಿತಿ ವರದಿಯಲ್ಲಿನ ಹಿಂದುಳಿದ 119 ತಾಲ್ಲೂಕುಗಳಲ್ಲಿ ಇದುವರೆಗೂ ಏನೆಲ್ಲಾ ಪ್ರಗತಿ ಆಗಿದೆ ಎನ್ನುವುದನ್ನು ಅರಿಯಲು ಆರ್ಥಿಕ ತಜ್ಞ ಗೋವಂದರಾವ್ ಅಧ್ಯಕ್ಷತೆಯ ಸಮಿತಿ ಮಾಡಿದ್ದೇವೆ. 6 ತಿಂಗಳಲ್ಲಿ ಸಮಿತಿ ವರದಿ ನೀಡುತ್ತದೆ.

ಬಳಿಕ ನಮಗೆ ಕಲ್ಯಾಣ ಕರ್ನಾಟಕದಲ್ಲಿ ಹೊಸದಾಗಿ 45 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲು ನಿರ್ಣಯ, 31 ಸಮುದಾಯ ಆರೋಗ್ಯ ಕೇಂದ್ರಗಳನ್ನು ಮಾಡಲು ತೀರ್ಮಾನ ಮಾಡಿದ್ದೇವೆ. 9 ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಇದರಲ್ಲಿ ಎರಡನ್ನು ಜಿಲ್ಲಾ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಇದಕ್ಕೆ 892 ಕೋಟಿ ವೆಚ್ಚ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *