ರಾಮನಗರ: ಆಕ್ರಮ ಸಂಬಂಧಕ್ಕೆ ಕಟ್ಟಿಕೊಂಡ ಗಂಡ ಅಡ್ಡಿಯಾಗುತ್ತಾನೆ, ಜೊತೆಗೆ ಸೈಟ್ಗಳ ಮಾರಾಟ ಮಾಡುತ್ತಾನೆ ಎಂದು ಕಟ್ಟಿಕೊಂಡ ಗಂಡನನ್ನು ಪತ್ನಿಯೇ ಕೊಲೆ ಮಾಡಿಸಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಲೋಕೇಶ್ ಆಗಿದ್ದು, ವ್ಯವಸಾಯದ ಜೊತೆಗೆ ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದ. ಅಲ್ಲದೆ, ಬೆಂಗಳೂರಿನಲ್ಲಿ ಎರಡ್ಮೂರು ಕೋಳಿ ಅಂಗಡಿಗಳನ್ನು ಇಟ್ಟುಕೊಂಡು ಸಾಕಷ್ಟು ಸಿರಿವಂತನಾಗಿದ್ದ. ಜೊತೆಗೆ ಪತ್ನಿ ಚಂದ್ರಕಲಾಳನ್ನು ಕೂಡ ಎರಡು ಬಾರಿ ಮಾಕಳಿ ಗ್ರಾಮಪಂಚಾಯತಿ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದ. ಆದರೆ, ಸದ್ಯ ಮಾಕಳಿ ಗ್ರಾಪಂ ಸದಸ್ಯೆಯಾಗಿರುವ ಚಂದ್ರಕಲಾ, ಪರಸಂಘಕ್ಕಾಗಿ ಗಂಡನಿಗೆ ಮಹೂರ್ತ ಇಟ್ಟಿದ್ದಾಳೆ. ಅದು ಕೂಡ ತನ್ನ ಪ್ರಿಯಕರನಿಗೆ ಮೂರೂವರೆ ಲಕ್ಷಕ್ಕೆ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದಾಳೆ.

18 ವರ್ಷಗಳ ದಾಂಪತ್ಯಕ್ಕೆ ಕೊಳ್ಳಿ ಇಟ್ಟ ಪರಸಂಘ
ಲೋಕೇಶ್ ಹಾಗೂ ಚಂದ್ರಕಲಾ ವಿವಾಹವಾಗಿ 18 ವರ್ಷಗಳು ಕಳೆದಿವೆ. ಇಬ್ಬರು ಎದೆಯುದ್ದ ಬೆಳೆದ ಮಕ್ಕಳು ಕೂಡ ಇದ್ದಾರೆ. ಬೆಂಗಳೂರಿನ ಗೊಲ್ಲರಹಟ್ಟಿಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಚಂದ್ರಕಲಾಳಿಗೆ ಬೆಂಗಳೂರಿನ ಅಂಚೆ ಇಲಾಖೆ ನೌಕರ ಯೋಗೇಶ್ ಎಂಬಾತನ ಜೊತೆ ಆಕ್ರಮ ಸಂಬಂಧ ಬೆಳೆದಿದೆ. ಮತ್ತೊಂದೆಡೆಮ ಬೆಂಗಳೂರಿನಲ್ಲಿ ಇದ್ದ ಸೈಟ್ ಅನ್ನು ಮಾರಾಟ ಮಾಡಬೇಕು ಎಂದು ಲೋಕೇಶ್ ಯೋಚಿಸುತ್ತಿದ್ದ. ಈ ವಿಚಾರವಾಗಿ ಕಳೆದ ಹಲವು ತಿಂಗಳಿಂದ ಇಬ್ಬರ ನಡುವೆ ಸಾಕಷ್ಟು ಗಲಾಟೆ ನಡೆದಿತ್ತು. ಹೀಗಾಗಿ ಗಂಡನನ್ನೇ ಕೊಲೆ ಮಾಡಿಸಲು ಚಂದ್ರಕಲಾ ಮುಂದಾಗುತ್ತಾಳೆ.
7 ತಿಂಗಳ ಹಿಂದೆಯೇ ನಡೆದಿತ್ತು ಸಂಚು
ಏಳು ತಿಂಗಳ ಹಿಂದೆಯೇ ಸ್ಕೇಚ್ ಹಾಕಿ ಈ ಮೊದಲು ಎರಡು ಲಕ್ಷ ರೂಪಾಯಿಗೆ ಸುಪಾರಿ ನೀಡಿರುತ್ತಾಳೆ. ಆದರೆ ಅದು ಯಶಸ್ವಿ ಆಗಿರಿಲಿಲ್ಲ. ದುಡ್ಡು ಪಡೆದಿದ್ದ ಆರೋಪಿ ಪರಾರಿಯಾಗಿದ್ದಾನೆ. ಹೀಗಾಗಿ ಮತ್ತೆ ಏಳು ತಿಂಗಳ ನಂತರ ಎರಡನೇ ಬಾರಿಗೆ ಪ್ರಯತ್ನ ಮಾಡುತ್ತಾಳೆ. ಪ್ರಿಯಕರ ಯೋಗೇಶ್ಗೆ ಮೂರುವರೆ ಲಕ್ಷ ರೂಪಾಯಿಗೆ ಸುಪಾರಿ ನೀಡುತ್ತಾಳೆ. ಮೂಲತಃ ಮಂಡ್ಯ ಜಿಲ್ಲೆ ನವಿಲೆ ಗ್ರಾಮದ ಯೋಗೇಶ್, ಕ್ರಿಮಿನಲ್ ಹಿನ್ನೆಲೆಯುಳ್ಳ ಸೂರ್ಯ, ಶಿವಲಿಂಗ, ಚಂದನ್ ಹಾಗೂ ಶಾಂತರಾಜು ಎಂಬ ನಾಲ್ಕು ಜನರನ್ನ ಜೊತೆಗೆ ಕರೆದುಕೊಂಡು ಜೂನ್ 23 ರ ಸಂಜೆ ಬೆಂಗಳೂರಿನಿಂದ ಮಾಕಳಿ ಗ್ರಾಮಕ್ಕೆ ಬರುತ್ತಿದ್ದ ಲೋಕೇಶ್ನನ್ನು ಎಂಕೆ ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖ್ಯಾಸಪುರ ಗ್ರಾಮದ ಬಳಿ ಕಾರು ಅಡ್ಡಹಾಕಿ ಆನಂತರ ರಸ್ತೆಯಿಂದ ನಿರ್ಜನ ಪ್ರದೇಶಕ್ಕೆ ಕರೆದ್ಯೋಯ್ದು ಬಲವಂತವಾಗಿ ವಿಷಕುಡಿಸಿ, ಹತ್ಯೆ ಮಾಡಿ ಪರಾರಿಯಾಗಿದ್ದರು.
ಸುಪಾರಿ ನೀಡುವ ಮೊದಲೇ ಯೋಗೇಶ್ಗೆ ಚಂದ್ರಕಲಾ ಸೂಚನೆ ನೀಡಿರುತ್ತಾಳೆ. ಯಾವುದೇ ಸುಳಿವು ಸಿಗಬಾರದು, ಆತ್ಮಹತ್ಯೆ ರೀತಿ ಇರಬೇಕು ಎಂದೂ ತಿಳಿಸಿರುತ್ತಾಳೆ. ಹೀಗಾಗಿ ಲೋಕೇಶ್ನನ್ನ ಕೊಲೆಗೈದು ಕಾರಿನ ಪಕ್ಕದಲ್ಲಿ ಮೃತದೇಹವನ್ನು ಮಲಗಿಸಿ ವಿಷದ ಬಾಟಲ್ ಅನ್ನು ಕಾರಿನಲ್ಲಿ ಇಟ್ಟಿರುತ್ತಾರೆ. ಜೂನ್ 24ರಂದು ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿರುತ್ತದೆ. ಪ್ರಾರಂಭದಲ್ಲಿ ಅಸಹಜ ಸಅವು ಪ್ರಕರಣ ದಾಖಲಿಸಿಕೊಂಡಿದ್ದ ಎಂಕೆ ದೊಡ್ಡಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಚಂದ್ರಕಲಾ, ಯೋಗೇಶ್ ಸೇರಿದಂತೆ ಆರೋಪಿಗಳನ್ನು ಬಂಧಿಸಿದ್ದಾರೆ.