ಕನ್ನಡದ ಜನಪ್ರಿಯ ಯುವನಟರಲ್ಲಿ ಒಬ್ಬರು ಪೃಥ್ವಿ ಅಂಬರ್. ಕನ್ನಡ ಚಿತ್ರರಂಗದಲ್ಲಿ ಲವ್ವರ್ ಬಾಯ್ ಆಗಿ ಗುರುತಿಸಿಕೊಂಡಿದ್ದಾರೆ. ಪೃಥ್ವಿ ಅಂಬರ್ ನಾಯಕನಾಗಿ ಬ್ಯುಸಿ ಆಗಿರುವ ಹೊತ್ತಿನಲ್ಲೇ ನಿರ್ದೇಶಕನಾಗಿ ಹೆಜ್ಜೆ ಇಡಲು ಮುಂದಾಗಿದ್ದಾರೆ. ಪೃಥ್ವಿ ಅಂಬರ್ ತಮ್ಮ ಮೊದಲ ನಿರ್ದೇಶನದ ಸಿನಿಮಾ ಘೋಷಣೆ ಮಾಡಿದ್ದು, ಅವರ ಮಾತೃಭಾಷೆಯ ಮೂಲಕ ಹೊಸ ಪಯಣ ಆರಂಭಿಸಲಿದ್ದಾರೆ.

ನಟರಾಗಿ ಒಳ್ಳೆಯ ಹೆಸರು ಮಾಡಿದವರು ನಿರ್ದೇಶಕರಾಗಿ ಯಶಸ್ಸು ಕಂಡಿದ್ದಾರಾದರೂ ನಿರ್ದೇಶನವನ್ನು ವೃತ್ತಿಯಾಗಿ ನಿರ್ವಹಿಸಿಕೊಂಡು ಹೋಗಿರುವುದು ಬಹಳ ವಿರಳ. ಶಂಕರ್ ನಾಗ್, ಸುದೀಪ್, ಉಪೇಂದ್ರ, ರಕ್ಷಿತ್ ಶೆಟ್ಟಿ ಇನ್ನೂ ಕೆಲವರು ಜನಪ್ರಿಯ ನಟರಾಗಿದ್ದವರು ನಿರ್ದೇಶಕನಾಗಿಯೂ ಯಶಸ್ಸು ಕಂಡಿದ್ದಾರೆ. ಆದರೆ ಫುಲ್ಟೈಮ್ ನಿರ್ದೇಶಕರ ಹಾಗೆ ಒಂದರ ಹಿಂದೊಂದು ಸಿನಿಮಾಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ದುನಿಯಾ ವಿಜಯ್ ಮಾತ್ರ ಸದ್ಯಕ್ಕೆ ಎರಡನ್ನೂ ತೂಗಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಮತ್ತೊಬ್ಬ ಜನಪ್ರಿಯ ನಾಯಕ ನಟ ನಿರ್ದೇಶಕರಾಗುತ್ತಿದ್ದಾರೆ.
‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬರ್ ಅವರು ಇದೀಗ ಮೊದಲ ಬಾರಿ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಚಾಕಲೇಟ್ ಹೀರೋ ಆಗಿ ಕನ್ನಡ ಚಿತ್ರರಂಗದಲ್ಲಿ ಭದ್ರವಾದ ನೆಲೆಯೊಂದನ್ನು ಪೃಥ್ವಿ ಈಗಾಗಲೇ ಕಂಡುಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಾ ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಆದರೆ ಇದೀಗ ಒಮ್ಮೆಲೆ ಸಿನಿಮಾ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಹಾಗೆಂದು ಅವರು ನಟನೆಗೆ ವಿದಾಯವೇನೂ ಹೇಳಿಲ್ಲ. ಬಹುವರ್ಷಗಳ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ಪೃಥ್ವಿ ಇದ್ದಾರೆ.
ಪೃಥ್ವಿ ಅವರು ತಮ್ಮ ಮೊದಲ ಸಿನಿಮಾವನ್ನು ತಮ್ಮ ತಾಯ್ನುಡಿಯಾದ ತುಳು ಭಾಷೆಯಲ್ಲಿ ನಿರ್ದೇಶಿಸಲಿದ್ದಾರೆ. ಮೊದಲ ಸಿನಿಮಾವನ್ನು ತುಳುವಿನಲ್ಲೇ ನಿರ್ದೇಶನ ಮಾಡಬೇಕು ಎಂಬುದು ಅವರ ಆಸೆಯಾಗಿತ್ತಂತೆ. ನಾನು ಇಂದು ಇರುವ ಹಂತ ತಲುಪುವಲ್ಲಿ ತುಳು ಭಾಷೆ ಮತ್ತು ಅಲ್ಲಿನ ಸಂಸ್ಕೃತಿ, ಆಚರಣೆಗಳ ಪ್ರಭಾವ ಇದೆ. ಕರಾವಳಿ ಸಂಸ್ಕೃತಿ ಮತ್ತು ತುಳು ಭಾಷೆಯ ಮೇಲೆ ನನಗೆ ಅಪಾರ ಗೌರವ, ಪ್ರೀತಿ ಇದೆ. ಹಾಗಾಗಿ ನಾನು ನನ್ನ ಭಾಷೆಗೆ ಏನನ್ನಾದರು ಮರಳಿ ಕೊಡಬೇಕು ಎಂದು ಎಣಿಸಿದ್ದೆ. ಇದೇ ಕಾರಣಕ್ಕೆ ನಾನು ನನ್ನ ಮೊದಲ ಸಿನಿಮಾವನ್ನು ತುಳು ಭಾಷೆಯಲ್ಲೇ ನಿರ್ದೇಶಿಸುತ್ತಿದ್ದೀನಿ ಎಂದಿದ್ದಾರೆ.
ತಮ್ಮ ಮೊದಲ ಸಿನಿಮಾಕ್ಕೆ ‘ಡೊಂಬರ’ ಎಂದು ಪೃಥ್ವಿ ಅಂಬರ್ ಹೆಸರಿಟ್ಟಿದ್ದಾರೆ. ತುಳು ಭಾಷೆಯ ಈ ಸಿನಿಮಾ, ಕರಾವಳಿ ಪ್ರದೇಶದಲ್ಲಿ ವಾಸಿಸುವ ಒಂದು ಸಮುದಾಯದ ಕುಟುಂಬವೊಂದರ ಕತೆಯನ್ನು ಹೊಂದಿರಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯಾಗಿದ್ದು, ಸಮುದಾಯದ ಕುಟುಂಬದಲ್ಲಿ ನಡೆಯುವ ಘಟನೆಯೊಂದು ಅವರನ್ನು ಅನಿರೀಕ್ಷಿತ ಪರಿಸ್ಥಿತಿಗಳಿಗೆ ತಳ್ಳುತ್ತದೆ. ಆಗ ಆ ಕುಟುಂಬ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದೇ ಸಿನಿಮಾದ ಕತೆ.
ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ಸರಳವಾಗಿ ಮುಗಿದಿದೆ. ಸಿನಿಮಾದ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಪೃಥ್ವಿ ಅಂಬರ್ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ಇನ್ನು ಕೆಲವೇ ತಿಂಗಳಲ್ಲಿ ಪ್ರಾರಂಭ ಮಾಡುವ ಯೋಚನೆಯಲ್ಲಿದ್ದಾರೆ ಪೃಥ್ವಿ ಅಂಬರ್. ಪ್ರಸ್ತುತ ಅವರು ಯಶ್ ಅವರ ತಾಯಿ ನಿರ್ಮಿಸಿರುವ ‘ಕೊತ್ತಲವಾಡಿ’ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.