ಬಾಗಲಕೋಟೆ || ನೀವೂ ಬದಲಾಗಿ, ಎಲ್ಲರನ್ನೂ ‘ಇವ ನಮ್ಮವ’ ಎನ್ನಿ: ಸಿಎಂ

ಬಾಗಲಕೋಟೆ || ನೀವೂ ಬದಲಾಗಿ, ಎಲ್ಲರನ್ನೂ 'ಇವ ನಮ್ಮವ' ಎನ್ನಿ: CM

ಬಾಗಲಕೋಟೆ: ”ಇವನಾರವ ಇವನಾರವ ಎಂದು ವಚನ ಹೇಳುತ್ತಲೇ ಜಾತಿ ತಾರತಮ್ಯ ಮಾಡುವವರು ಇದ್ದಾರೆ. ಎಲ್ಲರನ್ನೂ ‘ಇವ ನಮ್ಮವ ಎನ್ನಿ” ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಜಿಲ್ಲೆಯ ಕೂಡಲಸಂಗಮದ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಅನುಭವ ಮಂಟಪ-ಬಸವಾದಿ ಶರಣರ ವೈಭವ ಸಮಾರಂಭವನ್ನು ಬುಧವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡುವ ಜೊತೆಗೆ ಬಸವಣ್ಣ ಅವರ ವಚನ ಪಠಣ ಮಾಡಿ, ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಬಸವಣ್ಣನವರ ಬಗ್ಗೆ ಸಂಶೋಧನೆ ಮಾಡಿದ 92 ವರ್ಷದ ಹಿರಿಯ ಜೀವಿ ಡಾ.ಎಸ್.ಆರ್.ಗುಜ್ಜಳ ಅವರಿಗೆ ರಾಷ್ಟ್ರೀಯ ಬಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, “ಇವನಾರವ ಇವನಾರವ ಎಂದು ವಚನ ಹೇಳುವುದು, ಈ ಕಡೆ ಬಂದು ಅವನು ಯಾವ ಜಾತಿ ಎಂದು ಕೇಳುವುದು ನಡೆಯುತ್ತಿದೆ. ಹೀಗಾದರೆ, ಬಸವಣ್ಣನವರ ಆಶಯದಂತೆ ಜಾತಿ ನಿರ್ಮೂಲನೆ ಆಗಲ್ಲ. ಜಾತಿಗೆ ಚಲನೆಯಿಲ್ಲ, ವರ್ಗಕ್ಕೆ ಚಲನೆ ಇದೆ. ಎಲ್ಲಾ ಜಾತಿಗಳಿಗೂ ಆರ್ಥಿಕ ಚಲನೆ ಸಿಕ್ಕಾಗ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ” ಎಂದು ಹೇಳಿದರು.

ಮುಂದುವರೆದು, “ಬಸವಣ್ಣನವರು ಮತ್ತು ಶರಣರು ಕರ್ಮ ಸಿದ್ಧಾಂತದ ವಿರುದ್ಧ ಹೋರಾಟ ನಡೆಸಿದರು. ಆದರೆ ಈಗ ಶಿಕ್ಷಣ ಪಡೆದವರೇ ಜನ್ಮ ಜನ್ಮಗಳಲ್ಲಿ ನಂಬಿಕೆ ಇಟ್ಟು ಕರ್ಮ ಸಿದ್ಧಾಂತ ಆಚರಿಸುತ್ತಿದ್ದಾರೆ. ಒಂದು ಕಡೆ ಬಸವ ಜಯಂತಿ ಆಚರಿಸುವುದು, ಮತ್ತೊಂದು ಕಡೆ ಕರ್ಮ ಸಿದ್ಧಾಂತ ಆಚರಿಸುವುದು ಮಾಡಿದರೆ, ಬಸವ ಜಯಂತಿಗೆ ಅರ್ಥ ಇಲ್ಲ” ಎಂದು ಸಿಎಂ ತಿಳಿಹೇಳಿದರು.

ಕಲ್ಯಾಣಮ್ಮ ಜನಸ್ಥಳವನ್ನು ಅಭಿವೃದ್ಧಿಪಡಿಸಲಾಗಿವುದು, ಬಸವಣ್ಣ ನೀಲಾಂಬಿಕೆಯ ವಿಗ್ರಹವನ್ನೂ ಮಾಡಿಸೋಣ. ಇವೆಲ್ಲವನ್ನೂ ನಾವು ಮಾಡುತ್ತೇವೆ. ಆದರೆ ನೀವೂ ಸ್ವಲ್ಪ ಬದಲಾಗಿ, ಎಲ್ಲರನ್ನೂ “ಇವ ನಮ್ಮವ ಎನ್ನಿ” ಎಂದು ಸಿಎಂ ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ಶಿವರಾಜ್ ತಂಗಡಗಿ, ಶಾಸಕರಾದ ವಿಜಯಾನಂದ ಕಾಶಪ್ಪನವರ ಸೇರಿ ಹಲವು ಪ್ರಮುಖರು ಹಾಗೂ ಜಿಲ್ಲೆಯ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *