ಬೆಂಗಳೂರು: ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಕಾಂಗ್ರೆಸ್ ಸರ್ಕಾರ ಸುರಂಗ ಮಾರ್ಗ ಯೋಜನೆಯನ್ನು ಪ್ರಸ್ತಾಪಿಸಿದೆ. ಹೆಬ್ಬಾಳ-ಸಿಲ್ಕ್ ಬೋರ್ಡ್ ನಡುವಿನ ಸುರಂಗ ಮಾರ್ಗ ಯೋಜನೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಾಗುತ್ತಿದೆ. 28 ಕಿ. ಮೀ. ಉದ್ದದ ಮತ್ತೊಂದು ಡಬಲ್ ಡೆಕ್ಕರ್ ಸುರಂಗ ಮಾರ್ಗ ಯೋಜನೆಗೆ ಈಗ ಹಿನ್ನಡೆಯಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೆ. ಆರ್. ಪುರ-ನಾಯಂಡಹಳ್ಳಿ ನಡುವೆ ಡಬಲ್ ಡೆಕ್ಕರ್ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾವನೆ ಮಾಡಿದೆ. ಈ ಕುರಿತು ಡಿಪಿಆರ್ ತಯಾರು ಮಾಡಲು ಕಂಪನಿಗಳಿಂದ ಟೆಂಡರ್ ಆಹ್ವಾನಿಸಿತ್ತು.
ಆದರೆ ಯಾವುದೇ ಕಂಪನಿ ಡಿಪಿಆರ್ ತಯಾರಿಸಲು ಟೆಂಡರ್ ಸಲ್ಲಿಕೆ ಮಾಡದ ಕಾರಣ ಟೆಂಡರ್ ಸಲ್ಲಿಕೆ ಗಡುವನ್ನು ಮಾರ್ಚ್ 11ರ ತನಕ ವಿಸ್ತರಣೆ ಮಾಡಲಾಗಿದೆ. ಇದು 28 ಕಿ. ಮೀ. ದೂರದ ಯೋಜನೆಯಾಗಿದ್ದು, ಜನವರಿ 25ರಂದು ಮೊದಲ ಬಾರಿಗೆ ಟೆಂಡರ್ ಕರೆಯಲಾಗಿತ್ತು.
ಟೆಂಡರ್ ಅವಧಿ ವಿಸ್ತರಣೆ: ಬಿಬಿಎಂಪಿ ದೆಹಲಿ ಮೂಲದ ಕಂಪನಿಗೆ ಹೆಬ್ಬಾಳ-ಸಿಲ್ಕ್ ಬೋರ್ಡ್ 18 ಕಿ. ಮೀ. ಸುರಂಗ ಮಾರ್ಗದ ಡಿಪಿಆರ್ ತಯಾರು ಮಾಡಲು 3 ತಿಂಗಳ ಸಮಯ ನೀಡಿತ್ತು. ಆದರೆ ಈ ಡಿಪಿಆರ್ ಸಾರಿಗೆ ತಜ್ಞರು, ಜನರು, ವಿವಿಧ ಸಂಘಟನೆಗಳಿಂದ ಭಾರೀ ವಿರೋಧಕ್ಕೆ ಕಾರಣವಾಗಿತ್ತು.
ಕೇವಲ ಕಾಪಿ ಪೇಸ್ಟ್ ಕೆಲಸ ಮಾಡಿ ಯಾವುದೇ ಸರಿಯಾದ ನಕ್ಷೆಯನ್ನು ರೂಪಿಸದೇ ಡಿಪಿಆರ್ ತಯಾರು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಸಂಚಾರ ಸಮಸ್ಯೆ ಬಗ್ಗೆ ಸರಿಯಾಗಿ ಗಮನ ಹರಿಸಿಲ್ಲ, ಪರಿಸರ ನಾಶಕ್ಕೆ ಕಾರಣವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ದೂರಿದ್ದರು.
ಬಿಬಿಎಂಪಿ ಈ ಡಿಪಿಆರ್ಗೆ 9.5 ಕೋಟಿ ರೂ. ನಿಗದಿ ಮಾಡಿತ್ತು. ಕಂಪನಿಯ ತಪ್ಪುಗಳ ಕಾರಣಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಕಂಪನಿಗೆ 5 ಲಕ್ಷ ರೂ. ದಂಡವನ್ನು ಸಹ ಹಾಕಿದ್ದರು. ಈಗ ಕಂಪನಿ ವರದಿ ತಯಾರು ಮಾಡಲು ಇನ್ನಷ್ಟು ಸಮಯ ಬೇಕು ಎಂದು ಕೇಳಿದೆ ಎಂಬ ಮಾಹಿತಿ ಇದೆ. ಬಿಬಿಎಂಪಿ ಸಿಲ್ಕ್ ಬೋರ್ಡ್ ಮತ್ತು ಹೆಬ್ಬಾಳ ಸಂಪರ್ಕಿಸುವ ಸುರಂಗ ಮಾರ್ಗ ಯೋಜನೆಗೆ ಸುಮಾರು 14,981 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಿದೆ. ಹುಡ್ಕೋ ಯೋಜನೆಗೆ ಅನುದಾನವನ್ನು ನೀಡಲು ಒಪ್ಪಿಗೆ ನೀಡಿದೆ. ಬಿಬಿಎಂಪಿಗೆ ಶೇಕಡಾ 8.9ರ ಬಡ್ಡಿದರದೊಂದಿಗೆ ಹಣಕಾಸು ನೆರವು ಒದಗಿಸುವ ನಿರೀಕ್ಷೆ ಇದೆ. ಆದರೆ ಕೆ. ಆರ್. ಪುರ-ನಾಯಂಡಹಳ್ಳಿ ನಡುವಿನ ಸುರಂಗ ಮಾರ್ಗ ನಿರ್ಮಾಣದ ಯೋಜನೆ ನಿರೀಕ್ಷಿತ ವೇಗ ಪಡೆದಿಲ್ಲ. ಬೆಂಗಳೂರು ಸಂಚಾರಿ ಪೊಲೀಸರು ತಯಾರು ಮಾಡಿದ್ದ ಕಾರ್ಯ ಸಾಧ್ಯತಾ ವರದಿ ಅನ್ವಯ ಬಿಬಿಎಂಪಿ ಈ ಯೋಜನೆಯ ಡಿಪಿಆರ್ಗೆ ಟೆಂಡರ್ ಕರೆದಿದೆ.
ಕಾರ್ಯಸಾಧ್ಯತಾ ವರದಿ ನಗರದಲ್ಲಿ 170 ಕಿ. ಮೀ. ಸಂಚಾರ ದಟ್ಟಣೆ ಕಡಿಮೆ ಮಾಡಲು ಸುರಂಗ ಮಾರ್ಗ, ಎಲಿವೇಟೆಡ್ ಕಾರಿಡಾರ್, ಅಂಡರ್ಪಾಸ್ಗಳ ಪ್ರಸ್ತಾವನೆಯನ್ನು ಒಳಗೊಂಡಿದೆ. ಆದರೆ ಡಿಪಿಆರ್ ತಯಾರು ಮಾಡಲು ಯಾವುದೇ ಕಂಪನಿ ಇನ್ನೂ ಸಹ ಮುಂದೆ ಬಂದಿಲ್ಲ.