ಬೆಂಗಳೂರು || ಈ ವಿಘ್ನದಿಂದ ಪಾರಾದರೆ ಮಾತ್ರ ಬೆಂಗಳೂರು ಎರಡನೇ ಏರ್ಪೋರ್ಟ್ ನಿರ್ಮಾಣ ಸುಗಮ

ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಈ ಭಾಗಕ್ಕೆ 5 ಭರ್ಜರಿ ಬಂಪರ್!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಂಗಳೂರಿನ ಭವಿಷ್ಯಕ್ಕಾಗಿ ಎರಡನೇ ಏರ್ಪೋರ್ಟ್ ನಿರ್ಮಿಸಲು ಸಜ್ಜಾಗಿದೆ. ಹಲವು ಲೆಕ್ಕಾಚಾರವನ್ನು ಮಾಡಿಕೊಂಡೇ ಮೂರು ಜಾಗಗಳನ್ನು ಗುರುತಿಸಿ, ಕೇಂದ್ರದ ಒಪ್ಪಿಗೆಗೆ ಕಾಯುತ್ತಿದೆ. ಇನ್ನೇನು ಮುಂದಿನ ವಾರದಲ್ಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ತಂಡ ಇಲ್ಲಿಗೆ ಬಂದು ಜಾಗ ಫೈನಲ್ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದೆ ರಾಜ್ಯ ಸರ್ಕಾರ. ಆದರೆ, ಇದಕ್ಕೂ ಮುನ್ನ ಮತ್ತೊಂದು ವಿಘ್ನ ಕೂಡ ಇದ್ದು, ಅದನ್ನು ದಾಟಿದರೆ ಮಾತ್ರವೇ ಎರಡನೇ ಏರ್ಪೋರ್ಟ್ ನಿರ್ಮಾಣ ಸುಗಮವಾಗಲಿದೆ. ಹಾಗಾದ್ರೆ ಏರ್ಪೋರ್ಟ್ ನಿರ್ಮಾಣಕ್ಕೆ ಇರುವ ತೊಡಕು ಏನು? ಎಂಬ ವಿವರ ಇಲ್ಲಿದೆ.

ಬೆಂಗಳೂರಿನ ದೇವನಹಳ್ಳಿ ಬಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎರಡು ಟರ್ಮಿನಲ್ಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ. ಇಲ್ಲಿ ದಟ್ಟಣೆ ಹೆಚ್ಚಾದ ಕಾರಣಕ್ಕೆ ಪರ್ಯಾಯವಾಗಿ ಎರಡನೇ ಏರ್ಪೋರ್ಟ್ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಇದಕ್ಕೂ ಮುನ್ನ ಬೆಂಗಳೂರಿನ ಏರ್ಪೋರ್ಟ್ ಆಗಿ ಕರೆಸಿಕೊಂಡಿದ್ದು, ಹೆಚ್ಎಎಲ್ ಏರ್ಪೋರ್ಟ್. ಹೌದು ಈ ಏರ್ಪೋರ್ಟ್ ನಗರದ ಒಳಗೆ ಇತ್ತು. ಇದೇ ಬೆಂಗಳೂರಿಗೆ ಮೊದಲನೇ ಏರ್ಪೋರ್ಟ್ ಆಗಿ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ, ಬೆಂಗಳೂರು ದಿಢೀರ್ ಬೆಳವಣಿಗೆ ಹೊಂದಿದ್ದರಿಂದ ಈ ಏರ್ಪೋರ್ಟ್ ಪ್ರಯಾಣಿಕರಿಗೆ ಸಾಕಾಗುತ್ತಿರಲಿಲ್ಲ.

ಈ ಕಾರಣಕ್ಕೆ ಹೆಚ್ಎಎಲ್ ಏರ್ಪೋರ್ಟ್ ಬದಲಿಗೆ ಹೊಸ ಹಾಗೂ ವಿಸ್ತಾರವಾದ ಏರ್ಪೋರ್ಟ್ ನಿರ್ಮಾಣ ಮಾಡಬೇಕು ಎಂಬ ದೃಷ್ಟಿಯಿಂದಲೇ ದೇವನಹಳ್ಳಿ ಬಳಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲಾಯಿತು. ಕೆಲ ವರ್ಷಗಳ ಇದಕ್ಕೆ ಕೆಂಪೇಗೌಡರ ಏರ್ಪೋರ್ಟ್ ಎಂದು ಮರುನಾಮರಕಣ ಮಾಡಲಾಯಿತು. ಆದರೆ ಈಗ ಇಲ್ಲಿಯೂ ದಟ್ಟಣೆ ತಗ್ಗಿಸಲು ಮತ್ತೊಂದು ಏರ್ಪೋರ್ಟ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

ಹೆಚ್ಎಎಲ್ ಪುನರಾರಂಭಕ್ಕೆ ಕೇಂದ್ರದ ಆಸಕ್ತಿ? ಎರಡನೇ ಏರ್ಪೋರ್ಟ್ ಬದಲಿಗೆ ಸದ್ಯ ಬಂದ್ ಆಗಿರುವ ಹೆಚ್ಎಎಲ್ ಏರ್ಪೋರ್ಟ್ ಅನ್ನೇ ಮತ್ತೆ ಕಾರ್ಯಾರಂಭ ಮಾಡಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಧ್ವನಿ ಎತ್ತಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರನ್ನೂ ಭೇಟಿಯಾಗಿ ಮನವಿಯೂ ಸಲ್ಲಿಸಿ ಬಂದಿದ್ದಾರೆ. ಬೆಂಗಳೂರಿಗಾಗಿ ಹೆಚ್ಎಎಲ್ ವಿಮಾನ ನಿಲ್ದಾಣದ ಪುನರಾರಂಭಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ದೆಹಲಿಯಲ್ಲಿ ಸಭೆ ಕೂಡ ನಡೆಯಲಿದೆ.

ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇರುವುದರಿಂದ ತೇಜಸ್ವಿ ಸೂರ್ಯ ಅವರ ಬೇಡಿಕೆಯಂತೆ ಹೆಚ್ಎಎಲ್ ಪುನರಾರಂಭವಾಗುವ ಸಾಧ್ಯತೆಯೂ ದಟ್ಟವಾಗಿದೆ. ಎರಡನೇ ಏರ್ಪೋರ್ಟ್ ನಿರ್ಮಾಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿರುವುದರಿಂದ ಆ ಮನವಿಯನ್ನು ತಿರಸ್ಕರಿಸಲೂಬಹುದು ಅಥವಾ ಮುಂದೂಡುವ ಸಾಧ್ಯತೆ ಇದೆ. ಇನ್ನೂ ಮುಖ್ಯವಾದ ವಿಚಾರವೆಂದರೆ ಹೆಚ್ಎಎಲ್ ಈಗಾಗಲೇ ಏರ್ಪೋರ್ಟ್ನ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಹಾಗಾಗಿ ಹೊಸ ಏರ್ಪೋರ್ಟ್ ಬದಲಿಗೆ ಹೆಚ್ಎಎಲ್ ಅನ್ನೇ ಅಭಿವೃದ್ಧಿಪಡಿಸುವುದು ಸುಲಭವಾದ ಕೆಲಸ. ಈಗ ಪರ್ಯಾಯ ಏರ್ಪೋರ್ಟ್ ಆಗಿರುವ ಕಾರಣ ಹೆಚ್ಎಎಲ್ ಅನ್ನೇ ಮತ್ತೆ ಆರಂಭಿಸುವುದು ಒಳಿತು ಎಂಬ ಸಲಹೆ ಕೂಡ ಸರಿಯಾಗಿದೆ. ಹೀಗಾಗಿ ಹೆಚ್ಎಎಲ್ಗೂ ಗ್ರೀನ್ ಸಿಗ್ನಲ್ ಕೊಡಬಹುದು. ಇದರಿಂದ ಬೆಂಗಳೂರು ಎರಡನೇ ಏರ್ಪೋರ್ಟ್ಗೆ ಹಿನ್ನಡೆಯಾಗಬಹುದು ಎಂದು ಹೇಳಲಾಗುತ್ತಿದೆ.

ಕರ್ನಾಟಕ ಸರ್ಕಾರ ಕೂಡ ಕೇಂದ್ರಕ್ಕೆ ಈಗಾಗಲೇ ಮೂರು ಜಾಗಗಳನ್ನು ಗುರುತಿಸಿ, ಸ್ಥಳ ಪರಿಶೀಲನೆಗೆ ಮನವಿ ಮಾಡಿದೆ. ಅತ್ತ ತೇಜಸ್ವಿ ಸೂರ್ಯ ಕೂಡ ಕೇಂದ್ರ ಸರ್ಕಾರಕ್ಕೆ ಹೆಚ್ಎಎಲ್ ಏರ್ಪೋರ್ಟ್ ಪುನರಾರಂಭಕ್ಕೆ ಮನವಿ ಮಾಡಿದ್ದಾರೆ. ಈಗ ಒಂದೇ ಊರಿನ ಒಂದೇ ವಿಚಾರದ ಎರಡು ಬೇಡಿಕೆಗಳು ಕೇಂದ್ರದ ಅಂಗಳದಲ್ಲಿದೆ. ಈ ಪೈಕಿ ಯಾವ ಬೇಡಿಕೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಡುತ್ತದೆಯೋ ಕಾದು ನೋಡಬೇಕಿದೆ. ಒಂದು ವೇಳೆ ಹೆಚ್ಎಎಲ್ ಏರ್ಪೋರ್ಟ್ಗೆ ಓಕೆ ಅಂದ್ರೆ ಎರಡನೇ ಏರ್ಪೋರ್ಟ್ ನಿರ್ಮಾಣ ಸದ್ಯಕ್ಕೆ ಕನಸಿನ ಮಾತಾಗಲಿದೆ. ಹೆಚ್ಎಎಲ್ ಏರ್ಪೋರ್ಟ್ ಬೇಡ ಎಂದರಷ್ಟೇ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಹಾದಿ ಸುಗಮವಾಗಲಿದೆ.

Leave a Reply

Your email address will not be published. Required fields are marked *