ಬೆಂಗಳೂರು : ಮಧುಬಲೆ ಪ್ರಕರಣದ ಬಗ್ಗೆ ಹೈಕಮಾಂಡ್ ನಾಯಕರಿಗೆ ವಿವರಣೆ ನೀಡಲು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು 3 ದಿನದಿಂದ ಇಲ್ಲಿ ಬೀಡುಬಿಟ್ಟಿದ್ದರು. ಆದರೆ, ರಾಷ್ಟ್ರೀಯ ನಾಯಕರು ಕಾಲಾವಕಾಶ ನೀಡಿಲ್ಲ.

ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದಕ್ಕೆ ರಾಜಣ್ಣ ವಿರುದ್ಧ ಹೈಕಮಾಂಡ್ ನಾಯಕರು ಗರಂ ಆಗಿದ್ದಾರೆ. ‘ರಾಜಣ್ಣ ಹೇಳಿಕೆಯಿಂದ ಪಕ್ಷ ರಾಷ್ಟ್ರ ಮಟ್ಟದಲ್ಲಿ ಮುಜುಗರ ಅನುಭವಿಸು ವಂತಾಗಿದೆ ಹಾಗೂ ಪಕ್ಷಕ್ಕೆ ಭಾರಿ ಹಾನಿಯಾಗಿದೆ. ಸದನದಲ್ಲಿ ಹೇಳಿಕೆ ನೀಡುವ ಅವಶ್ಯಕತೆಯೇ ಇರಲಿಲ್ಲ’ ಎಂದು ಹೈಕಮಾಂಡ್ ನಾಯಕರು ಅಸಮಾಧಾನಗೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ಖರ್ಗೆ ಮತ್ತು ರಾಹುಲ್ ಅವರಿಗೆ ಸಿದ್ದರಾಮಯ್ಯ ಅವರು ವಿವರಣೆ ನೀಡಿದ್ದಾರೆ. ಪಕ್ಷಕ್ಕೆ ಮುಜುಗರ ಉಂಟುಮಾಡುವ ಹೇಳಿಕೆ ನೀಡದಂತೆ ರಾಜಣ್ಣ ಅವರಿಗೆ ಎಚ್ಚರಿಕೆ ನೀಡುವಂತೆ ಸೂಚಿಸಿದ್ದಾರೆ.
ನಿರುದ್ಯೋಗಿಗಳಿಗೆ ಅವಕಾಶ ಬೇಡ: ಡಿಕೆಶಿ
ವಿಧಾನಪರಿಷತ್ ನಾಮನಿರ್ದೇಶನದ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಹಾಗೂ ಪಕ್ಷದ ಪರ ದನಿ ಎತ್ತುವವರಿಗೆ ನೀಡಬೇಕು ಎಂಬುದು ನನ್ನ ಅಭಿಲಾಷೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
‘ಸುಮ್ಮನೆ ಇರುವ ನಿರುದ್ಯೋಗಿಗಳಿಗೆ ಅವಕಾಶ ಕೊಟ್ಟಂತೆ ಆಗಬಾರದು. ಉತ್ತಮವಾಗಿ ಮಾತನಾಡುವರಿಗೆ ಸ್ನಾನ ನೀಡಬೇಕು. ಇದರ ಬಗ್ಗೆ ಹೈಕಮಾಂಡ್ ಜತೆಗೆ ನಾನು ಹಾಗೂ ಮುಖ್ಯಮಂತ್ರಿ ಚರ್ಚಿಸಿದ್ದೇವೆ. ಹೈಕಮಾಂಡ್ ಇಬ್ಬರನ್ನೂ ಸಂಪರ್ಕಿಸುತ್ತದೆ’ ಎಂದರು.
ಚರ್ಚೆಗೆ ಗ್ರಾಸವಾದ ಸಿ.ಎಂ ನಡೆ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿ ಯಲ್ಲಿದ್ದಾರೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಹೈಕಮಾಂಡ್ನ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಿದರು. ಶಿವಕುಮಾರ್ ಅವರು ಎಐಸಿಸಿ ಪ್ರಧಾನ
ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿದರು. ಮುಖ್ಯಮಂತ್ರಿ ಅವರ ಈ ನಡೆ ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ. ‘ಖರ್ಗೆ ಅವರನ್ನು ಕರ್ನಾಟಕ ಭವನದಲ್ಲಿಯೇ ನಾನು ಭೇಟಿ ಮಾಡಿದ್ದೇನೆ’ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.