ಬೆಂಗಳೂರು : ಬೆಂಗಳೂರು ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗುತ್ತಿದೆ. ಬೆಂಗಳೂರಿನ ವಿಸ್ತೀರ್ಣ ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದ್ದು, ಗ್ರೇಟರ್ ಬೆಂಗಳೂರು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ಪ್ರಸ್ತಾಪವನ್ನು ಕೈಬಿಡಲಾಗಿದೆ. ಇದೀಗ ತುಮಕೂರು ನಗರವನ್ನು ಬೆಂಗಳೂರಿಗೆ ಸೇರಿಸುವ ಬಗ್ಗೆ ಮಾತುಗಳು ಕೇಳಿಬಂದಿವೆ.

ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಮಾತನಾಡಿದ್ದಾರೆ. ಸಿಲಿಕಾನ್ ಸಿಟಿ, ಸ್ಮಾರ್ಟ್ ಹಬ್ ಎನಿಸಿಕೊಂಡಿರುವ ಬೆಂಗಳೂರಿನ ಬ್ರ್ಯಾಂಡ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹೂಡಿಕೆಯನ್ನು ಆಕರ್ಷಿಸಬಹುದು ಎಂದು ಹೇಳಿದ್ದಾರೆ. ವಿಜಯಕರ್ನಾಟಕ ಸಂವಾದದಲ್ಲಿ ಐಟಿಬಿಟಿ ಸಚಿವರು ರಾಮನಗರ ಮರುನಾಮಕರಣ, ಬೆಂಗಳೂರಿಗೆ ತುಮಕೂರು ಸೇರ್ಪಡೆ ಬಗ್ಗೆ ಮಾತನಾಡಿದ್ದಾರೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಣೆ ಮಾಡುವುದು ಬ್ರ್ಯಾಂಡ್ ಬೆಂಗಳೂರು ಮಾಡುವ ಪ್ರಯತ್ನ ಎಂದಿದ್ದಾರೆ. ಇದೀಗ ಬೆಂಗಳೂರು ಉತ್ತರ ಎಂದು ಗುರುತಿಸುವ ಮೂಲಕ ಮತ್ತಷ್ಟು ಹೂಡಿಕೆ ಆಕರ್ಷಿಸಬಹುದು ಎಂದಿದ್ದಾರೆ.
ಬೆಂಗಳೂರು ಉತ್ತರಕ್ಕೆ ತುಮಕೂರು ಸೇರ್ಪಡೆ ತುಮಕೂರುವರೆಗಿನ ಪ್ರದೇಶವನ್ನು ಬೆಂಗಳೂರು ಉತ್ತರ ಎಂದು ಗುರುತಿಸಿದರೆ ಬೆಂಗಳೂರು ಹೆಸರಿಗೆ ಇರುವ ಬ್ರ್ಯಾಂಡ್ನ ಪ್ರಯೋಜನ ಪಡೆಯಲು ಅವಕಾಶ ಸಿಕ್ಕಂತಾಗುತ್ತದೆ. ಇಲ್ಲಿ ಮಾನವ ಸಂಪನ್ಮೂಲ ಲಭ್ಯವಿದ್ದು, ವಿಮಾನ ನಿಲ್ದಾಣ, ರೈಲ್ವೆ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರೆ ಮತ್ತಷ್ಟು ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದರು.