ಬೆಂಗಳೂರು: ಮಲ್ಲೇಶ್ವರಂನ ಬಿಬಿಎಂಪಿ ಮೈದಾನದಲ್ಲಿ ಹಳೆಯ ತುಕ್ಕು ಹಿಡಿದ ಗೇಟ್ ಬಿದ್ದು 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಬಾಲಕ ಆಟವಾಡಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ಮೃತರನ್ನು ಮಲ್ಲೇಶ್ವರಂನ ಬಿಬಿಎಂಪಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ನಿರಂಜನ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ನಿರಂಜನ್ ಗೇಟ್ ಬಳಿ ನಿಂತಿದ್ದಾಗ ಅದು ತೆರೆಯುತ್ತಿದ್ದಂತೆ ಅವರ ಮೇಲೆ ಬಿದ್ದಿದ್ದು, ತಲೆಗೆ ತೀವ್ರ ಗಾಯವಾಗಿದೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಲ್ಲೇಶ್ವರಂ ಪೈಪ್ಲೈನ್ ರಸ್ತೆ ನಿವಾಸಿಗಳಾದ ಆಟೊ ಚಾಲಕ ವಿ ವಿಜಯಕುಮಾರ್ ಮತ್ತು ಪ್ರಿಯಾ ದಂಪತಿಯ ಹಿರಿಯ ಪುತ್ರ ನಿರಂಜನ್. ಘಟನೆ ನಡೆದ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.