ಬೆಂಗಳೂರು || ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ: ಬಿಜೆಪಿಗೆ ಪ್ರಶ್ನೆಗಳ ಬಾಣ ಬಿಟ್ಟ ಕಾಂಗ್ರೆಸ್

ಬೆಂಗಳೂರು || ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ: ಬಿಜೆಪಿಗೆ ಪ್ರಶ್ನೆಗಳ ಬಾಣ ಬಿಟ್ಟ ಕಾಂಗ್ರೆಸ್

ಬೆಂಗಳೂರು: ಬೆಂಗಳೂರು ನಗರದ ಪೀಣ್ಯದಲ್ಲಿರುವ ಬಸವೇಶ್ವರ ಬಸ್ ನಿಲ್ದಾಣ ಸರಿಯಾಗಿ ಉಪಯೋಗವಾಗಲೇ ಇಲ್ಲ. ಈಗ ಕರ್ನಾಟಕ ಸರ್ಕಾರ ಖಾಸಗಿ ವ್ಯವಹಾರಗಳಿಗೆ ಕೆಎಸ್ಆರ್ಟಿಸಿಯ ಈ ಮೂರು ಅಂತಸ್ತಿನ ಕಟ್ಟಡವನ್ನು ನೀಡಲು ತೀರ್ಮಾನಿಸಿದೆ ಎಂಬ ಸುದ್ದಿಗಳು ಹಬ್ಬಿವೆ. ಪ್ರತಿಪಕ್ಷ ಬಿಜೆಪಿ ಇದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಕಾಂಗ್ರೆಸ್ ಪ್ರಶ್ನೆಗಳ ಮೂಲಕ ಬಿಜೆಪಿಯನ್ನು ಟೀಕಿಸಿದೆ.

ಕರ್ನಾಟಕ ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ, ‘ಬಿಜೆಪಿ ಕರ್ನಾಟಕವನ್ನು ಪ್ರಶ್ನಿಸುತ್ತಿದ್ದೇವೆ. ಅವೈಜ್ಞಾನಿಕವಾಗಿ, ಯಾವುದೇ ದೂರದೃಷ್ಟಿ ಇಲ್ಲದೆ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ಜನರ ಮತ್ತು ಸಾರಿಗೆ ನೌಕರರ ಹಣವನ್ನು ಅನ್ಯಾಯವಾಗಿ ಲೂಟಿ ಮಾಡಿ ಹೋಗಿರುವ ನಿಮಗೆ ನಮ್ಮನ್ನು ಪ್ರಶ್ನಿಸಲು ನಾಚಿಕೆ ಇಲ್ಲವೇ ಅಥವಾ ಆ ಪದಕ್ಕೆ ಅರ್ಥವಾದರೂ ತಿಳಿದಿದೆಯೇ?’ ಎಂದು ಕೇಳಿದೆ.

‘ಕೋಟಿ ಕೋಟಿ ಹಣ ಲೂಟಿ ಮಾಡಿ, ಸರ್ವ ಪ್ರಯತ್ನಗಳ ನಡುವೆಯೂ ಕೆಲಸಕ್ಕೆ ಬಾರದ ರೀತಿ ಬಸ್ ನಿಲ್ದಾಣ ನಿರ್ಮಾಣ ಮಾಡಿ, ಜನರ ಮುಂದೆ ಹೋಗಿ ಮಾತನಾಡುವ ಯಾವ ನೈತಿಕತೆ ನಿಮಗಿದೆ?’ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಕಾಂಗ್ರೆಸ್ನ ಪೋಸ್ಟ್ ವಿವರಗಳು: ಕಾಂಗ್ರೆಸ್ ಪಕ್ಷ ತನ್ನ ಪೋಸ್ಟ್ನಲ್ಲಿ ಪೀಣ್ಯದಲ್ಲಿರುವ ಶ್ರೀ ಬಸವೇಶ್ವರ ಬಸ್ ನಿಲ್ದಾಣವು 8 ಎಕರೆ 6 ಗುಂಟೆ ವಿಸ್ತೀರ್ಣದಲ್ಲಿ, ಸುಮಾರು ರೂ. 39.28 ಕೋಟಿ ವೆಚ್ಚದಲ್ಲಿ 2011ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಿ, 2013ರಲ್ಲಿ ನಿರ್ಮಾಣ ಕಾರ್ಯ ಮುಕ್ತಾಯವಾಗಿರುತ್ತದೆ ಎಂದು ಹೇಳಿದೆ.

ಪೀಣ್ಯ ಬಸ್ ನಿಲ್ದಾಣವನ್ನು ನಮ್ಮ ಸರ್ಕಾರವಿದ್ದಾಗ ಉದ್ಘಾಟಿಸಿ ಶ್ರೀ ಬಸವೇಶ್ವರ ಬಸ್ ನಿಲ್ದಾಣವೆಂದು ನಾಮಕರಣ ಮಾಡಿ 2014 ರಿಂದ ಸಾರ್ವಜನಿಕರ ಬಳಕೆಗೆ ನೀಡಲಾಯಿತು. ಬಸ್ ನಿಲ್ದಾಣದಿಂದ ಉತ್ತರ ಕರ್ನಾಟಕದ ಭಾಗಗಳಿಗೆ ಹಾಗೂ ತುಮಕೂರು, ಹಾಸನ ಮುಖೇನ ಕಾರ್ಯಾಚರಣೆಯಾಗುವ ವಾಹನಗಳ ಕಾರ್ಯಾಚರಣೆಗೆ ಯೋಜಿಸಲಾಗಿ, ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆಯಿಂದ 1.4 ಕಿ.ಮೀ ಒಳಗಿರುವ ಕಾರಣ ನಗರದ ವಿವಿಧ ಪ್ರದೇಶಗಳಿಗೆ ಸಂಪರ್ಕದ ಕೊರತೆಯ ಕಾರಣ ಪ್ರಯಾಣಿಕರು ಈ ಬಸ್ ನಿಲ್ದಾಣಕ್ಕೆ ಬರಲು ಆಸಕ್ತಿ ತೋರಲಿಲ್ಲ.

ಪ್ರಯಾಣಿಕರ ಬೇಡಿಕೆಯನ್ನು ಹೆಚ್ಚಿಸಲು ಮುಖ್ಯ ರಸ್ತೆಯಿಂದಲೂ ಸಹ ನೇರವಾಗಿ ಸಂಪರ್ಕ ಕಲ್ಪಿಸಲು ಸಂಪರ್ಕ ಬಸ್ ಸೌಕರ್ಯವನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗಿತ್ತು. ರಾತ್ರಿ ವೇಳೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರು ಆಸಕ್ತಿ ತೋರದ ಕಾರಣ ಈ ನಿಲ್ದಾಣದಿಂದ ನಗರಕ್ಕೆ ಆಗಮಿಸುವ ಬಸ್ಗಳನ್ನು ಅಲ್ಲಿಂದಲೇ ಆರಂಭಿಸುವ ಮತ್ತು ಮುಕ್ತಾಯ ಮಾಡುವ ರೀತಿಯಲ್ಲಿ ಅನುಸೂಚಿಗಳನ್ನು ಸಹ ಪ್ರಾರಂಭಿಸಲಾಗಿತ್ತು. ಕೆಂಪೇಗೌಡ ಬಸ್ ನಿಲ್ದಾಣದಿಂದ ಪ್ರಾರಂಭಿಸಿ ಬಸವೇಶ್ವರ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಕಾರ್ಯಾಚರಣೆಯನ್ನು ಮುಂದುವರೆಸಲು ಯೋಜಿಸಿ ಕಾರ್ಯಾರೂಪಕ್ಕೆ ತಂದಿದ್ದು ಆದಾಗ್ಯೂ ಯಾವುದೇ ಪ್ರಯತ್ನಗಳು ಫಲಕಾರಿಯಾಗಿರುವುದಿಲ್ಲ. ಮೇಲ್ಕಂಡ ರೀತಿಯಲ್ಲಿ ಹಲವಾರು ಬಾರಿ ಪ್ರಯತ್ನಗಳನ್ನು ಮಾಡಿದ ನಂತರವು ನಿಗಮಕ್ಕೆ ತೀವ್ರ ಆದಾಯ ನಷ್ಟವಾಯಿತು. ಸಂಸ್ಥೆಯ ವಾಹನಗಳು ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದ ಒಳಕ್ಕೆ ತೆರಳಿ ಪುನಃ ಮುಖ್ಯ ರಸ್ತೆಗೆ ಬಂದು ಕಾರ್ಯಾಚರಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪ್ರಯಾಣ ಸಮಯದ ಬಗ್ಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳಲ್ಲಿ ತೀವ್ರ ಆಕ್ಷೇಪಣೆ ಮತ್ತು ನೇರ ಪ್ರಯಾಣಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬಸ್ ನಿಲ್ದಾಣದಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ಇನ್ನು ತಮ್ಮ ಸರ್ಕಾರದ ಅವಧಿಯಲ್ಲಿಯೂ ಬಸ್ ನಿಲ್ದಾಣವನ್ನು ಪುನರಾಂಭಿಸಲು ಸಾಧ್ಯವಾಗಿರುವುದಿಲ್ಲ.

ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳ ಪರವಾನಿಗೆದಾರರ ಆಯ್ಕೆ ಪ್ರಕ್ರಿಯೆಯು ನಿಗಮದ ನಿಯಮಾವಳಿಗಳ ಪ್ರಕಾರ ನಿರಂತರವಾಗಿ ಟೆಂಡರ್/ ಸಂಧಾನ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಮೇಲ್ಕಂಡ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಚಟುವಟಿಕೆಗಳು ಇರದ ಕಾರಣ ಯಾರು ಆಸಕ್ತಿದಾಯಕವಾಗಿ ಭಾಗವಹಿಸದೇ ಇದ್ದು ವಾಣಿಜ್ಯ ಮಳಿಗೆಗಳು ದೀರ್ಘ ಕಾಲದಿಂದ ಖಾಲಿ ಇರುತ್ತದೆ. ಆಯ್ಕೆ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ದಿನಾಂಕ 02.12.2024 ರಂದು ಟೆಂಡರ್/ ಸಂಧಾನ ಪ್ರಕ್ರಿಯೆಯ ಪ್ರಕಟಣೆ ಸಂಖ್ಯೆ 05/540/2024-25 ರಂತೆ ಕೆಂಪೇಗೌಡ ಬಸ್ ನಿಲ್ದಾಣ ವಿಭಾಗದ ವತಿಯಿಂದ ಹೊರಡಿಸಲಾಗಿದ್ದು, ಈ ಆಯ್ಕೆ ಪ್ರಕ್ರಿಯೆ ದಿನಾಂಕ 30.12.2024 ದಂದು ಮುಕ್ತಾಯಗೊಂಡಿದ್ದು, ಸದರಿ ಆಯ್ಕೆ ಪ್ರಕ್ರಿಯೆಯಲ್ಲಿಯೂ ಯಾವ ಆಸಕ್ತ ಬಿಡ್ದಾರರು ಭಾಗವಹಿಸಿರುವುದಿಲ್ಲ. ಮೇಲ್ಕಂಡ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳಿಗೆ ಪರವಾನಿಗೆದಾರರ ಆಯ್ಕೆಗೆ ನಿರಂತರವಾಗಿ ಟೆಂಡರ್/ ಸಂಧಾನ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಇದರಲ್ಲಿ ಈ ಹಿಂದಿನಿಂದ ಚಾಲನೆಯಲ್ಲಿದ್ದ ಷರತ್ತು ಮತ್ತು ನಿಬಂಧನೆಗಳನ್ವಯ ಟೆಂಡರ್ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಯಾವುದೇ ಷರತ್ತು/ ನಿಬಂಧನೆಗಳ ಮಾರ್ಪಾಡನ್ನು ಮೇಲ್ಕಂಡ ಟೆಂಡರ್/ ಸಂಧಾನ ಪ್ರಕಟಣೆಯಲ್ಲಿ ಮಾಡಿರುವುದಿಲ್ಲ. ತಾವು ಹೇಳಿರುವುದೆಲ್ಲಾ ಬರೀ ಸುಳ್ಳು ಯಾವುದೇ ಲೀಸ್ ಪ್ರಸ್ತಾಪವೇ ಇರುವುದಿಲ್ಲ. ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವ ಮತ್ತೊಂದು ವಿಫಲ ಯತ್ನ ಇದಾಗಿದೆ ಎಂದು ಕಾಂಗ್ರೆಸ್ ಹೇಳಿದ್ದು, ಆಯ್ಕೆ ಪ್ರಕ್ರಿಯೆಗೆ ಹೊರಡಿಸಲಾದ ಟೆಂಡರ್ ಪ್ರಕಟಣೆ ಸಂಖ್ಯೆ 05/840/2024-25 ದಿನಾಂಕ 02.12.2024 ಅನ್ನು ಸಹ ಪೋಸ್ಟ್ನಲ್ಲಿ ಲಗತ್ತಿಸಲಾಗಿದೆ.

Leave a Reply

Your email address will not be published. Required fields are marked *