ಬೆಂಗಳೂರು : ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ಸಲುವಾಗಿ ಈಗಾಗಲೇ ದಕ್ಷಿಣ ಬೆಂಗಳೂರಿನ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಸ್ಟ್ರೆಚ್ನಲ್ಲಿ ಈಗಾಗಲೇ 5 ಕಿ.ಮೀ ಡಬಲ್ ಡೆಕ್ಕರ್ ಯೋಜನೆ ಯಶಸ್ವಿಯಾಗಿದೆ. ಇದೇ ರೀತಿ ಒಂದೇ ಮಾರ್ಗದಲ್ಲಿ ರಸ್ತೆ ಹಾಗೂ ಮೆಟ್ರೋ ಕಾರಿಡಾರ್ ಅನ್ನು ಜೆ.ಪಿ.ನಗರ ಮತ್ತು ಹೆಬ್ಬಾಳ ನಡುವಿನ ಹೊರವರ್ತುಲ ರಸ್ತೆಯ (ಒಆರ್ಆರ್) ಪಶ್ಚಿಮ ಭಾಗದಲ್ಲಿ ಪ್ರಸ್ತಾಪಿಸಲಾಗಿದೆ. ಸುಮಾರು 32.15 ಕಿ.ಮೀ ಉದ್ದದಲ್ಲಿ ನಿರ್ಮಾಣವಾಗಲಿರುವ ಇದು ಬೆಂಗಳೂರಿನ ಅತಿ ಉದ್ದದ ಮೇಲ್ಸೇತುವೆ ಎನ್ನಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೆಬ್ಬಾಳ, ಬಿಇಎಲ್ ರಸ್ತೆ, ಸುಮ್ಮನನಹಳ್ಳಿ ಮತ್ತು ಗೋರ್ಗುಂಟೆಪಾಳ್ಯ ಜಂಕ್ಷನ್ಗೆ ಭೇಟಿ ನೀಡಿ ನಿನ್ನೆ ಪರಿಶೀಲಿಸಿದರು. ಮಾಗಡಿ ರಸ್ತೆಯಲ್ಲಿ 8 ಕಿಲೋಮೀಟರ್ಗೆ ಎಲಿವೇಟೆಡ್ ರಸ್ತೆ ಯೋಜಿಸಲಾಗಿದ್ದು, ಇದರ ವೆಚ್ಚ 9,800 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮುಂದಿನ ಎಲ್ಲ ಮೆಟ್ರೋ ಯೋಜನೆಗಳ ಉದ್ದಕ್ಕೂ ಎಲಿವೇಟೆಡ್ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ರಾಗಿಗುಡ್ಡ ರಸ್ತೆಯಲ್ಲಿ ನಿರ್ಮಿಸಿರುವ ಮಾದರಿಯಲ್ಲಿಯೇ ಈ ಯೋಜನೆಗಳನ್ನು ವಿನ್ಯಾಸ ಮಾಡಲಾಗುವುದು. ಈ ರಸ್ತೆಗಳನ್ನು ವಿಸ್ತರಿಸಲು ಆಸ್ತಿಗಳನ್ನು ನೆಲಸಮಗೊಳಿಸುವುದರಿಂದ ಹೆಚ್ಚಿನ ಸ್ವಾಧೀನ ವೆಚ್ಚವಾಗುತ್ತದೆ. ಮುಂದಿನ 40 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗೆ ಚಿಂತನೆ ನಡೆಸಲಾಗಿದೆ. ಬಿಬಿಎಂಪಿ ಮತ್ತು ನಮ್ಮ ಮೆಟ್ರೊ ಈ ವೆಚ್ಚವನ್ನು ಸಮಾನವಾಗಿ ಭರಿಸಲಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಮ್ಮ ಮೆಟ್ರೋದ ಮೂರನೇ ಹಂತದ ಎರಡೂ ಮಾರ್ಗಗಳು ಸುಮಾರು 40 ಕಿ.ಮೀಗಿಂತ ಸ್ವಲ್ಪ ಹೆಚ್ಚು ಡಬಲ್ ಡೆಕ್ಕರ್ಗಳನ್ನು ಹೊಂದಿರಲಿದೆ. ಡಿಪಿಆರ್ ಈಗಾಗಲೇ ಪೂರ್ಣಗೊಂಡಿದ್ದು, ವಿನ್ಯಾಸದಲ್ಲಿ ಬದಲಾವಣೆ, ವಿಶೇಷವಾಗಿ ಮೆಟ್ರೋದ ಪಿಲ್ಲರ್ಗಳೊಳಗೆ ಎಲಿವೇಟೆಡ್ ರಸ್ತೆಯನ್ನು ಅಳವಡಿಸಲು, ಮೆಟ್ರೋ ಸಿವಿಲ್ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಕಳೆದ ವರ್ಷ ಆಗಸ್ಟ್ನಲ್ಲಿ ಅನುಮೋದನೆ ನೀಡಿದ್ದರೂ, ಟೆಂಡರ್ನಲ್ಲಿ ವಿಳಂಬವಾಗಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಬಿಬಿಎಂಪಿ, ಬಿಎಂಆರ್ಸಿಎಲ್, ಬಿಡಿಎ ಅಧಿಕಾರಿಗಳೊಂದಿಗೆ ನಗರದಲ್ಲಿ ಪ್ರಗತಿಯಲ್ಲಿರುವ ಹಾಗೂ ಕೈಗೊಳ್ಳಬೇಕಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಗರದಾದ್ಯಂತ ಎಲ್ಲೆಲ್ಲಿ ರಸ್ತೆ , ಮೆಲ್ಸೇತುವೆ, ಅಂಡರ್ಪಾಸ್, ಸುರಂಗ ರಸ್ತೆ ಮಾಡಲು ಸಾಧ್ಯ ಎಂಬುದನ್ನು ತೀರ್ಮಾನಿಸಿ ಅದಕ್ಕಾಗಿ ಒಂದು ಯೋಜನೆ ರೂಪಿಸಿದ್ದೇವೆ. ನೂತನ ಮೆಟ್ರೋ ನಿಲ್ದಾಣ ನಿರ್ಮಾಣ ಹಾಗೂ ಪಾರ್ಕಿಂಗ್ಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಸಂಬಂಧ ಚರ್ಚೆ ನಡೆಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹೆಬ್ಬಾಳದಲ್ಲಿ ಫ್ಲೈಓವರ್ಗೆ ಡೆಡ್ಲೈನ್: ಹೊಸ ಮೆಟ್ರೋ ಮಾರ್ಗಗಳಲ್ಲಿ ಸಾಧ್ಯತೆ ಇರುವ ಕಡೆ ಡಬಲ್ ಡೆಕ್ಕರ್ ನಿರ್ಮಾಣ ಮಾಡಲು ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ಬ್ರ್ಯಾಂಡ್ ಬೆಂಗಳೂರು ಬ್ಯೂಟಿಫಿಕೇಷನ್ ಬಗ್ಗೆ ಚರ್ಚಿಸಲಾಗಿದೆ. ಹೆಬ್ಬಾಳದ ಹೊಸ ಫ್ಲೈಓವರ್ ಕಾಮಗಾರಿಯನ್ನು ಏಪ್ರಿಲ್ ಅಂತ್ಯದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಮೇ ಆರಂಭದಲ್ಲಿ ಸೇವೆಗೆ ಮುಕ್ತವಾಗುವ ಸಾಧ್ಯತೆ ಇದೆ ಎಂದು ಸಿಹಿಸುದ್ದಿ ನೀಡಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿರುವ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಬಿಬಿಎಂಪಿ, ಬಿಎಂಆರ್ಸಿಎಲ್, ಬಿಡಿಎ ಕೈಗೊಳ್ಳಲಿರುವ ಯೋಜನೆಗಳಿಗೆ ಬೇಕಾಗುವ ಅನುದಾನದ ಕುರಿತು ಪ್ರಸ್ತಾವನೆ ಸಲ್ಲಿಸಲಿದ್ದೇವೆ ಎಂದು ಡಿಸಿಎಂ ಹೇಳಿದ್ದಾರೆ.