ಬೆಂಗಳೂರು  || BSWML ನೌಕರರಿಂದ ಮುಷ್ಕರದ ಬೆದರಿಕೆ: ಮತ್ತೆ ಶುರುವಾಗಲಿದೆ ಗಾರ್ಡನ್ ಸಿಟಿಗೆ ಗಾರ್ಬೇಜ್ ಸಂಕಷ್ಟ..?

ಬೆಂಗಳೂರು || BSWML ನೌಕರರಿಂದ ಮುಷ್ಕರದ ಬೆದರಿಕೆ: ಮತ್ತೆ ಶುರುವಾಗಲಿದೆ ಗಾರ್ಡನ್ ಸಿಟಿಗೆ ಗಾರ್ಬೇಜ್ ಸಂಕಷ್ಟ..?

ಬೆಂಗಳೂರು: ತಮ್ಮ ಸೇವೆಗಳನ್ನು ಕ್ರಮಬದ್ಧಗೊಳಿಸುವಂತೆ ಹಾಗೂ ಇತರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಬಹಿಸಿರುವ ಬಿಬಿಎಂಪಿಯ ತ್ಯಾಜ್ಯ ನಿರ್ವಹಣಾ ಘಟಕವಾದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್ಡಬ್ಲ್ಯೂಎಂಎಲ್) ನ ಸಾವಿರಾರು ಕ್ಲೀನರ್ಗಳು ಮತ್ತು ಚಾಲಕರು ಬುಧವಾರ ಪ್ರತಿಭಟನೆ ನಡೆಸಲಿದ್ದು, ಇದರ ಪರಿಣಾಮ ಗಾರ್ಡನ್ ಸಿಟಿ ಬೆಂಗಳೂರಿಗೆ ಮತ್ತೆ ತ್ಯಾಜ್ಯದ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.

ಕಾರ್ಮಿಕ ಸಂರಕ್ಷಣೆ ಸಂಘಟನೆಯ ಅಧ್ಯಕ್ಷ ತ್ಯಾಗರಾಜ್, ಅವರು ಮಾತನಾಡಿ, ಡಿಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ನಾಲ್ಕು ತಿಂಗಳ ಹಿಂದೆ ನಮ್ಮ ಸಮಸ್ಯೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವುದೇ ಪ್ರಗತಿ ಕಂಡುಬಂದಿಲ್ಲ. ಸುಮಾರು 10,000 ಕ್ಲೀನರ್ಗಳು ಮತ್ತು ಚಾಲಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ, ಸರ್ಕಾರ ಮತ್ತು ಬಿಬಿಎಂಪಿ ನಮ್ಮನ್ನು ನಿರ್ಲಕ್ಷಿಸಿದೆ ಎಂದು ಹೇಳಿದ್ದಾರೆ.

ನಾವು ನಗರವನ್ನು ಸ್ವಚ್ಛವಾಗಿಡುತ್ತೇವೆ. ನಮ್ಮ ಜೀವಗಳನ್ನು ಪಣಕ್ಕಿಚ್ಚು ಕೆಲಸ ಮಾಡುತ್ತೇವೆ, ಆದರೆ ಸರ್ಕಾರ ನಮ್ಮನ್ನು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಖಾಯಂ ಸಿಬ್ಬಂದಿಯನ್ನಾಗಿ ಮಾಡುವ ಅಥವಾ ನೇರ ಪಾವತಿ ನೀಡುವ ಯಾವುದೇ ಭರವಸೆಯನ್ನು ನೀಡುತ್ತಿಲ್ಲ. ಕಾರ್ಮಿಕರಿಗೆ ಬಿಬಿಎಂಪಿ ಗುತ್ತಿಗೆದಾರರು ವೇತನ ನೀಡುತ್ತಿದ್ದಾರೆ.

ಶಿವಕುಮಾರ್ ಅವರನ್ನು ಕನಿಷ್ಠ ನಾಲ್ಕು ಬಾರಿ ಭೇಟಿಯಾಗಿ, ಕನಿಷ್ಠ ಪಕ್ಷ ನೇರ ಪಾವತಿ ನೀಡಿ, ಗುತ್ತಿಗೆದಾರರ ಹಿಡಿತದಿಂದ ಮುಕ್ತಗೊಳಿಸುವಂತೆ ವಿನಂತಿಸಿದ್ದೆವು. ಆದರೆ, ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಬುಧವಾರ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆ ಸೇರಿ, ಫ್ರೀಡಂ ಪಾರ್ಕ್ಗೆ ಮೆರವಣಿಗೆ ನಡೆಸಿ, ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆಂದು ತಿಳಿಸಿದರು.

ಗುರುವಾರ ಮಂಡಿಸಲಾಗುವ ಬಿಬಿಎಂಪಿ ಬಜೆಟ್ನಲ್ಲಿ ನಮ್ಮ ಕಳವಳಗಳನ್ನು ಪರಿಹರಿಸಲಾಗುವುದು ಎಂದು ಭರವಸೆಯಲ್ಲಿದ್ದೇವೆ. ನಮ್ಮ ಬೇಡಿಕೆಗಳು ಗಮನಕ್ಕೆ ಬರಲಿ ಎಂದೇ ಬುಧವಾರದಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆಂದು ಹೇಳಿದರು.

Leave a Reply

Your email address will not be published. Required fields are marked *