ಬೆಂಗಳೂರು || ಶನಿವಾರ 12 ಗಂಟೆ ಕರ್ನಾಟಕ ಬಂದ್: ಸಾರಿಗೆ, ನಮ್ಮ ಮೆಟ್ರೋ ಸೇವೆ ಇರುತ್ತಾ? ಅಪ್ಡೇಟ್ಸ್ ಇಲ್ಲಿದೆ

ಬೆಂಗಳೂರು || ಶನಿವಾರ 12 ಗಂಟೆ ಕರ್ನಾಟಕ ಬಂದ್: ಸಾರಿಗೆ, ನಮ್ಮ ಮೆಟ್ರೋ ಸೇವೆ ಇರುತ್ತಾ? ಅಪ್ಡೇಟ್ಸ್ ಇಲ್ಲಿದೆ

ಬೆಂಗಳೂರು: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ, ಕನ್ನಡಿಗನ ಮೇಲೆ ನಡೆದ ಹಲ್ಲೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಮಾರ್ಚ್ 22 ರಂದು ಶನಿವಾರ ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಬಂದ್ ನಡೆಯುವುದು ಖಚಿತವಾಗಿದೆ. ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಬಂದ್ ಬಿಸಿ ತಟ್ಟಲಿದೆ. ಬಂದ್ ಸಮಯ ಏನು?, ನಮ್ಮ ಮೆಟ್ರೋ, ರಾಜ್ಯ ಸಾರಿಗೆ ಬೆಂಬಲ ಇದಿಯಾ, ಸಾರ್ವಜನಿಕರಿಗೆ ಏನೆಲ್ಲ ತೊಂದರೆ ಆಗಲಿದೆ? ಬೆಂಗಳೂರು ಬಂದ್ ಆಗುತ್ತಾ? ಇಲ್ಲಿದೆ ಮಾಹಿತಿ.

ಮರಾಠಿಯಲ್ಲಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಫೆಬ್ರವರಿಯಲ್ಲಿ ಬೆಳಗಾವಿಯಲ್ಲಿ ಮರಾಠಿ ಪುಂಡರ ಗುಂಪುಗಳು ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದರು. ಇದನ್ನು ರಾಜ್ಯದ ಕನ್ನಡಿಗರು ಒಕ್ಕೋರಲಿನಿಂದ ವಿರೋಧಿಸಿದ್ದರು. ಆಕ್ರೋಶ ಹೊರ ಹಾಕಿದ್ದರು. ಇದರೊಂದಿಗೆ ಗಡಿ ಜಿಲ್ಲೆಯ ಸಮಸ್ಯೆಗಳು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಂದ್ ಘೋಷಿಸಲಾಗಿದೆ. ಈ ಬಂದ್ ಶನಿವಾರ ಮಾರ್ಚ್ 22ರಂದು ಬರೋಬ್ಬರಿ 12ಗಂಟೆಗಳ ಕಾಲ ನಡೆಯಲಿದೆ.

ಕರ್ನಾಟಕ ಬಂದ್ ಶುರು-ಅಂತ್ಯದ ಸಮಯ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳಿಂದ ಶನಿವಾರ ಬೆಳಗ್ಗೆ 06 ಗಂಟೆಗೆ ಆರಂಭವಾಗಲಿದೆ. ಅಲ್ಲಿಂದ ಸಂಜೆ 06 ಗಂಟೆವರೆಗೆ ಬಂದ್ ಮುಂದುವರಿಯಲಿದೆ ಎಂದು ಕನ್ನಡಪರ ಸಂಘಟನೆಗಳು ತಿಳಿಸಿವೆ. ಒಟ್ಟು 12 ಗಂಟೆಗಳ ಕಾಲ ರಾಜ್ಯಾದ್ಯಂತ ಬಂದ್ಗೆ ಕರೆ ನೀಡಲಾಗಿದೆ ಎಂದು ‘ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ ಸಂಘಟನೆ’ ಮಾಹಿತಿ ನೀಡಿದೆ.

ಬೆಂಗಳೂರು ಬಂದ್? ನಮ್ಮ ಮೆಟ್ರೋ ಓಡಾಟ ಇರುತ್ತಾ?

ಬೆಂಗಳೂರಿನಲ್ಲಿ ಬಂದ್ ಬೆಂಬಲಿಸಿ ಬೃಹತ್ ಪ್ರತಿಭಟನೆಗಳು, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿವೆ. ಶಾಪಿಂಗ್ ಮಾಲ್ಗಳು, ಥೀಯೇಟರ್ಗಳು ಬಂದ್ ಆಗಲಿವೆ. ಬಿಎಂಟಿಸಿ ಕೇಲವ ನೈತಿಕ ಬೆಂಬಲ ನೀಡಿದರೆ ಎಂದಿನಂತೆ ಬಸ್ ಸಂಚಾರ ಇರಲಿದೆ. ಆದರೆ ಪ್ರಯಾಣಿಕರ ಕೊರತೆಯಿಂದ ಕಡಿಮೆ ಬಸ್ ಸಂಚಾರ ಇರಬಹುದು. ಸಾವಿರಾರು ಆಟೋಗಳು ಶನಿವಾರ ರಸ್ತೆಗೆ ಇಳಿಯುವುದಿಲ್ಲ. ನಮ್ಮ ಮೆಟ್ರೋ ಸಂಚಾರ, ವ್ಯತ್ಯಯ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇಂದು ಸಂಜೆ ಪ್ರಕಟಣೆ ಹೊರಡಿಸಬಹುದು. ಜನ ಸಂಚಾರ ಕಡಿಮೆ ಇದ್ದರೆ ಶನಿವಾರ ಒಂದು ದಿನ ಮೆಟ್ರೋ ರೈಲುಗಳ ಆವರ್ತನ ಸಮಯದಲ್ಲಿ ಬದಲಾವಣೆ ಆಗುವ ನಿರೀಕ್ಷೆ ಇದೆ.

ರಾಜ್ಯ ಬಂದ್ನಿಂದ ಏನೆಲ್ಲ ಆಗಲಿದೆ? ಈ ರಾಜ್ಯ ಬಂದ್ಗೆ ಚಿತ್ರರಂಗದವರು, ಆಟೋ ಚಾಲಕ ಸಂಘಟನೆಗಳು, ಟ್ಯಾಕ್ಸಿ ಚಾಲಕರು ಸೇರಿ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಬೀದಿ ಬದಿ ವ್ಯಾಪಾರಿ ಸಂಘ ನೈತಿಕ ಬೆಂಬಲ ಘೋಷಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು, ನಗರಗಳಲ್ಲಿ ಸಂಚಾರ ಅಸ್ತವ್ಯಸ್ತಗೊಳ್ಳಲಿದೆ. ಇದರಿಂದ ಜನರಿಗೆ ಅಡಚಣೆ ಉಂಟಾಗಬಹುದು.

ಮರಾಠಿಗರಿಂದ ಸಾರಿಗೆ ನಿರ್ವಾಹಕನ ಮೇಲೆ ಹಲ್ಲೆ ಆಗಿದೆ. ಆದರೆ ಈ ಬಂದ್ ಬಗ್ಗೆ KSRTC, BMTC ಸೇರಿದಂತೆ ಸಾರಿಗೆ ನಿಗಮಗಳಿಂದ ಬಂದ್ ಬೆಂಬಲ ದೃಢಪಡಿಸಿಲ್ಲ. ಶುಕ್ರವಾರ ಸಂಜೆ ಹೊತ್ತಿಗೆ ಇನ್ನೂ ಕೆಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸುವ ನಿರೀಕ್ಷೆ ಇವೆ ಎಂದು ಹೋರಾಟಗಾರರು ಮಾಹಿತಿ ಹಂಚಿಕೊಂಡಿದ್ದಾರೆ.

ಜನರ ಓಡಾಟದಲ್ಲಿ ಇಳಿಕೆ ಆಗುವ ನಿರೀಕ್ಷೆ ಇದೆ. ಒಂದು ಊರಿನಿಂದ ಮತ್ತೊಂದು ಊರುಗಳಿಗೆ ತೆರಳುವವರಿಗೆ, ವಾರಾಂತ್ಯದ ಮೋಜು ಮಸ್ತಿಗೆ, ವಾರಾಂತ್ಯದ ಪ್ಲಾನ್ಗಳು ಯಶಸ್ವಿಯಾಗಲು ಅಡಚಣೆ ಆಗಬಹುದು. ಆದ್ದರಿಂದ ಬಂದ್ ನೋಡಿಕೊಂಡು ಮನೆಯಿಂದ ಹೊರ ಬರುವುದು ಒಳಿತು. ಖಾಸಗಿ, ಸರ್ಕಾರಿ ನೌಕರರು, ಉದ್ಯೋಗಿಗಳು ಖಾಸಗಿ ವಾಹನ ಆಧರಿಸಿ ಉದ್ಯೋಗ ಸ್ಥಳ ತಲುಪುತ್ತಾರೆ. ಇದರಿಂದ ಖಾಸಗಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿಯುವ ಸಾಧ್ಯತೆ ಇದೆ. ಕೆಲವೆಡೆ ಖಾಸಗಿ ವಾಹನಗಳನ್ನು ಹೋರಾಟಗಾರರು ತಡೆಯುವ ನಿರೀಕ್ಷೆ ಇದೆ.

ಓಲಾ ಮತ್ತು ಉಬರ್ ಸೇವೆ ಇರಲ್ಲ! ಶನಿವಾರದ ಅಖಂಡ ಕರ್ನಾಟಕ ಬಂದ್ಗೆ ಓಲಾ, ಉಬರ್ ಮಾಲೀಕರು ಮತ್ತು ಚಾಲಕರ ಸಂಘ ಹಾಗೂ ಇತರ ಆಟೋ-ರಿಕ್ಷಾ ಒಕ್ಕೂಟಗಳು ಬೆಂಬಲ ನೀಡಿವೆ. ಹೀಗಾಗಿ ನಿತ್ಯ ಟ್ಯಾಕ್ಸಿ ಬಳಸುವವರಿಗೆ ಸಂಚಾರ ಅಡಚಣೆ ಎದುರಾಗಲಿದೆ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಸಾರಿಗೆ ಬಸ್ ಸಂಚಾರ ಇರುತ್ತಾ? ರಾಜ್ಯ ಬಂದ್ಗೆ ನೈತಿಕ ಬೆಂಬಲ ರೀತಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಒಗ್ಗಟ್ಟು ಪ್ರದರ್ಶಿಸಿದೆ. ಆದರೆ ಬಸ್ಗಳ ಸಂಚಾರ ಕುರಿತು ನಿಗಮಗಳು, ಅಧಿಕಾರಿಗಳು, ನೌಕರರ ಸಂಘದಿಂದಾಗಲಿ ಇನ್ನೂವರೆಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಬಸ್ ಲಭ್ಯತೆಗಳ ಬಗ್ಗೆ ಖಚಿತ ಮಾಹಿತಿ ನೀಡಲು ಸಾಧ್ಯವಿಲ್ಲ. ಇಂದು ಸಂಜೆ ಹೆಚ್ಚಿನ ಮಾಹಿತಿ ಪ್ರಕಟವಾಗುವ ನಿರೀಕ್ಷೆ ಇದೆ.

ಬೃಹತ್ ಬೆಂಗಳೂರು ಹೋಟೆಲುಗಳ ಸಂಘ, ಕನ್ನಡ ಸಿನಿಮಾ ರಂಗದ ಮುಖ್ಯಸ್ಥರು ತಾವು ಬಂದ್ ಬೆಂಬಲಿಸುವುದಾಗಿ ಈ ಹಿಂದೆ ಕರೆ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ. ಹೋಟೆಲ್, ರೆಸ್ಟೋರೆಂಟ್ಗಳು ಲಭ್ಯವಿಲ್ಲದಿರಬಹುದು. ಸಿನಿಮಾ ಶೂಟಿಂಗ್, ಚಿತ್ರ ಪ್ರಸಾದ್ ಇರುವುದಿಲ್ಲ ಎಂದು ಈಗಾಗಲೇ ತಿಳಿಸಲಾಗಿದೆ. ಈ ಮೇಲಿನ ಎಲ್ಲವುಗಳ ಹೊರತಾಗಿಯು ಬಂದ್ ವೇಳೆ ಕೆಲವು ಘಟನೆಗಳು ನಡೆಬಹುದೆಂದು ಅಂದಾಜಿಸಲಾಗಿದೆ. ಅಗತ್ಯ ವಸ್ತುಗಳು ಲಭ್ಯ: ಚಿಂತೆ ಬೇಡ ನಿತ್ಯ ಬೇಕಾಗುವ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿಗಳು, ಔಷಧಿ ಅಂಗಡಿಗಳು ತೆರೆದಿರುತವೆ. ಇವುಗಳ ಬಂದ್ ಆಗುವುದಿಲ್ಲ. ಆಸ್ಪತ್ರೆಗಳು ತೆರೆದಿರಲಿದ್ದು, ಎಂದಿನಂತೆ ಸೇವೆ ನೀಡಲಿವೆ. ಮದ್ಯದ ಮಳಿಗೆಗಳು ಬಂದ್ ಕುರಿತು ತುಟ್ಟಿ ಬಿಚ್ಚಿಲ್ಲ. ಶನಿವಾರ ಮದ್ಯದ ಎಂದಿನಂತೆ ಸಿಗಲಿದೆ ಎನ್ನಲಾಗಿದೆ. ಅಗತ್ಯ ವಸ್ತುಗಳ ಕುರಿತು ಆತಂಕ ಬೇಡ ಎಂದು ತಿಳಿಸಲಾಗಿದೆ. ರಾಜ್ಯ ಬಂದ್: ಕನ್ನಡಪರ ಹೋರಾಟಗಾರರ ಬೇಡಿಕೆ ಏನು? ರಾಜ್ಯ ಸರ್ಕಾರ, ಕರ್ನಾಟಕದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಮರಾಠಿ ಗುಂಪುಗಳನ್ನು ನಿಷೇಧಿಬೇಕು. ಗಡಿ ಸಮಸ್ಯೆ ಬಗೆಹರಿಸಬೇಕು. ಕನ್ನಡಿಗರ ರಕ್ಷಣೆಗೆ ಅದರಲ್ಲೂ ಬೆಳಗಾವಿಯಂತಹ ಗಡಿ ಪ್ರದೇಶಗಳಲ್ಲಿ ನಮ್ಮ ಜನರ ರಕ್ಷಣೆಗೆ ಆದ್ಯತೆ ವಹಿಸಬೇಕು. ಬೆಂಗಳೂರನ್ನು ಬಹು ಆಡಳಿತ ವಲಯಗಳಾಗಿ ವಿಭಜಿಸುವ ಸರ್ಕಾರದ ‘ಗ್ರೇಟರ್ ಬೆಂಗಳೂರು’ ಮಸೂದೆ ವಿರುದ್ಧ ಹೋರಾಟಗಾರರು ಅಸಮಾಧಾನ ಹೊರ ಹಾಕಿದ್ದಾರೆ. ಮಹಾರಾಷ್ಟ್ರದೊಂದಿಗಿನ ಭಾಷಾ ಗಲಾಟೆ, ಪದೇ ಪದೇ ಕ್ಯಾತೆ ತೆಗೆಯು ಪುಂಡರು ಬೆಳಗಾವಿ ಗಡಿಭಾಗದಲ್ಲಿ ಹೆಚ್ಚಿಸಿದ್ದಾರೆ. ಗಡಿಯಲ್ಲಿ ಮರಾಠಿ ಜನಸಂಖ್ಯೆ ಬೇರುಗಳನ್ನು ಕೀಳಬೇಕು. ಕನ್ನಡಿಗರಿಗೆ, ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುವಂತೆ ಕ್ರಮವಹಿಸಬೇಕು ಎಂದು ಬಂದ್ ಹೋರಾಟಗಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *