ಬೆಂಗಳೂರು || ಬೆಂಗಳೂರಿನಲ್ಲಿ 350 ಕೋಟಿ ವೆಚ್ಚದ ಆಕಾಶಗೋಪುರ ನಿರ್ಮಾಣಕ್ಕೆ ಜಾಗ ಫೈನಲ್!

ಅಸ್ತಿತ್ವ ಕಳೆದುಕೊಳ್ಳಲಿರುವ BBMP: ಮೇ 15ರಿಂದ ಗ್ರೇಟರ್ ಬೆಂಗಳೂರು ಜಾರಿ; ಹೊಸ ವ್ಯವಸ್ಥೆಗೆ ಮುನ್ನುಡಿ

ಬೆಂಗಳೂರು: ಬೆಂಗಳೂರಿನಲ್ಲಿ ಭಾರತದಲ್ಲೇ ಎತ್ತರದ ಆಕಾಶಗೋಪುರ (ಸ್ಕೈಡೆಕ್) ನಿರ್ಮಾಣಕ್ಕೆ ಕೊನೆಗೂ ಜಾಗ ನಿಗದಿ ಮಾಡುವಲ್ಲಿ ಬಿಬಿಎಂಪಿ ಹಾಗೂ ಸರ್ಕಾರ ಯಶಸ್ವಿಯಾಗಿದೆ. ವಿಶ್ವದಲ್ಲೇ ದೊಡ್ಡ ಹಾಗೂ ಆಕಾಶದ ಎತ್ತರದಲ್ಲಿ ಗೋಪುರವನ್ನು ನಿರ್ಮಾಣ ಮಾಡುವುದು. ಅಲ್ಲಿಂದ ಬೆಂಗಳೂರನ್ನು ನೋಡುವಂತೆ ಮಾಡುವುದು ಈ ಪ್ರಾಜೆಕ್ಟ್ನ ಮುಖ್ಯ ಉದ್ದೇಶವಾಗಿದೆ. ಬೆಂಗಳೂರಲ್ಲಿ ಪ್ರವಾಸೋದ್ಯಮ ಉತ್ತೇಜನ ಮಾಡುವ ಉದ್ದೇಶದಿಂದ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಈ ಪ್ಲಾನ್ ಮಾಡಿದ್ದಾರೆ. ಉದ್ದೇಶಿತ ಆಕಾಶಗೋಪುರ ನಿರ್ಮಾಣಕ್ಕೆ ಜಾಗ ನಿಗದಿ ಮಾಡುವುದೇ ದೊಡ್ಡ ಟಾಸ್ಕ್ ಆಗಿತ್ತು. ಇದೀಗ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ಅಂದಾಜು 350 ಕೋಟಿ ರೂಪಾಯಿಯ ಪ್ರಾಜೆಕ್ಟ್ ಇದಾಗಿದೆ.

ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಸೇರಿದಂತೆ ವಿವಿಧ ಉದ್ದೇಶದಿಂದ ಈ ಗೋಪುರವನ್ನು ನಿರ್ಮಿಸಲಾಗುತ್ತಿದೆ. ಈ ಗೋಪುರವನ್ನು ನಿರ್ಮಿಸಲು ಭರ್ಜರಿ ಸಿದ್ಧತೆ ಶುರುವಾಗಿದೆ. ಈ ರೀತಿ ಗೋಪುರ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಿರ್ಮಾಣ ಆಗಲಿದೆ. ಬೆಂಗಳೂರಿನಲ್ಲಿ ಟೂರಿಸಂ, ಬೆಂಗಳೂರು ನಗರವನ್ನು ನೋಡುವುದು, ಉದ್ಯೋಗಾವಕಾಶ ಸೃಷ್ಟಿಸುವುದು. ಆದಾಯ ಹೆಚ್ಚಳ ಹಾಗೂ ಬೆಂಗಳೂರಿಗೆ ಮಾರ್ಡನ್ ಟಚ್ ಕೊಡುವುದು ಈ ಉದ್ದೇಶಿತ ಯೋಜನೆಯ ಪ್ಲಾನ್ ಆಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಆಕಾಶಗೋಪುರ ನಿರ್ಮಿಸಬೇಕು ಎಂದು ಎನ್.ಜಿ.ಇ.ಎಫ್, ಬೆನ್ನಿಗಾನಹಳ್ಳಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್ಡಿಎಲ್) ಯಶವಂತಪುರ, ಕರ್ನಾಟಕ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ – ವೈಟ್ ಫೀಲ್ಡ್ ಜಿಕಿವಿಕೆ, ಜಕ್ಕೂರು, ರೇಸ್ಕೋರ್ಸ್, ಮೆಜೆಸ್ಟಿಕ್, ಅರಮನೆ ಆವರಣ ಜಾಗಗಳನ್ನು ಮೊದಲು ಬಿಬಿಎಂಪಿ ಗುರುತಿಸಿತ್ತು.

ವಿಮಾನ ನಿಲ್ದಾಣದಿಂದ ಸಂಕಷ್ಟ, ಸ್ಥಳ ಬದಲಾವಣೆ: ಇನ್ನು ಬೆಂಗಳೂರಿನ ಕೆಲವು ಪ್ರಮುಖ ಜಾಗಗಳಲ್ಲಿ ಈ ಗೋಪುರ ನಿರ್ಮಾಣ ಮಾಡುವುದಕ್ಕೆ ಕೆಲವು ಸಮಸ್ಯೆ ಇದೆ. ಹೀಗಾಗಿ, ಸ್ಥಳ ಬದಲಾವಣೆ ಮಾಡುತ್ತಿರುವುದಾಗಿ ಬಿಬಿಎಂಪಿ ಹೇಳಿಕೊಂಡಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಯಲಹಂಕ ವಿಮಾನ ನಿಲ್ದಾಣ ಮತ್ತು ಹೆಚ್.ಎ.ಎಲ್ ವಿಮಾನ ನಿಲ್ದಾಣಗಳ ಅಗತ್ಯತೆ ಹಾಗೂ ವಿಮಾನಗಳ ಸುರಕ್ಷತೆ ದೃಷ್ಟಿಯಿಂದ Colour Coded Zoning Map (CCZM) ಅಂತ ಮಾಡಲಾಗಿದೆ. ಅಂದರೆ, ಈ ಜಾಗದಲ್ಲಿ ಗೋಪುರ ನಿರ್ಮಿಸುವುದಕ್ಕೆ ಆಗಲ್ಲ. ಅಲ್ಲದೆ ಈ ಎಲ್ಲಾ ಸ್ಥಳಗಳಲ್ಲಿ 250.00 ಮೀ. ಎತ್ತರಕ್ಕೆ ಗೋಪುರ ನಿರ್ಮಿಸಲು ನಿರ್ಬಂಧನೆ ಇದೆ. ಜಕ್ಕೂರು ವಿಮಾನ ಶಾಲೆಯಿಂದಲೂ ಸಹ ಇದೇ ತರ ರಿಸ್ಟ್ರಿಕ್ಷನ್ ಇದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಕೈಡೆಕ್ಗೆ ಹೊಸ ಜಾಗ ಗುರುತು ಮಾಡಿದ ಬಿಬಿಎಂಪಿ 250.00 ಮೀ ಎತ್ತರದ ಆಕಾಶ ಗೋಪುರ ನಿರ್ಮಿಸಲು ಇರುವ ಜಾಗಗಳನ್ನು ಬಿಬಿಎಂಪಿ ಇದೀಗ ಗುರುತಿಸಿದೆ. ಎಚ್.ಎ.ಎಲ್ ಇಲಾಖೆಯ ವಿಮಾನ ನಿಲ್ದಾಣ ಆಗಿದೆ. ಹೀಗಾಗಿ, ಇಲ್ಲಿ ಅವಕಾಶ ಇಲ್ಲ. ಮುಂದುವರಿದು ಬೆಂಗಳೂರಿನ ಪಶ್ಚಿಮ ಹಾಗೂ ನೈರುತ್ಯ ಭಾಗದಲ್ಲಿ ಮಾತ್ರ ಆಕಾಶ ಗೋಪುರ ನಿರ್ಮಿಸುವುದಕ್ಕೆ ಅವಕಾಶ ಇದೆ. ಇದೀಗ ಹೊಸ ಜಾಗಗಳನ್ನು ಗುರುತಿಸಲಾಗಿದೆ. ಪರ್ಯಾಯವಾಗಿ ಹೆಮ್ಮಿಗೆಪುರ (ನೈಸ್ ಕ್ಲೋವರ್ ಲೀಫ್ ಹತ್ತಿರ), ಬೆಂಗಳೂರು ವಿಶ್ವ ವಿದ್ಯಾಲಯ – ಜ್ಞಾನಭಾರತಿ ಹಾಗೂ ಕೊಮ್ಮಘಟ್ಟ (ನೈಸ್ರಸ್ತೆ ಹತ್ತಿರ) ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ.

ಬೆಂಗಳೂರು ವಿಶ್ವ ವಿದ್ಯಾಲಯ-ಜ್ಞಾನಭಾರತಿ ಆಕಾಶಗೋಪುರ ನಿರ್ಮಿಸಿದರೆ, ವಿಶ್ವವಿದ್ಯಾಲಯದ ಬೆಳವಣಿಗೆಗೆ ಸಮಸ್ಯೆ ಹಾಗೂ ಈ ಜಾಗದಲ್ಲಿ ಗೋಪುರ ನಿರ್ಮಿಸುವಾಗ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯೂ ಇದೆ. ಇನ್ನು ಕೊಮ್ಮಘಟ್ಟ ಸ್ಥಳವು ಜನ ಹೆಚ್ಚಾಗಿ ಇರುವ ಪ್ರದೇಶವಾಗಿದೆ. ಇದರಿಂದಲೂ ಸ್ಥಳೀಯವಾಗಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇರುತ್ತದೆ. ಹೆಮ್ಮಿಗೆಪುರ (ನೈಸ್ ಕ್ಲೋವರ್ ಲೀಫ್ ಹತ್ತಿರ) ಜಾಗಕ್ಕೆ ತುಮಕೂರು, ಕನಕಪುರ, ಮೈಸೂರು, ಹೊಸೂರು ರಸ್ತೆಗಳಿಂದ ನೈಸ್ ರಸ್ತೆ ಮೂಲಕ ವಾಹನ ಸಂಪರ್ಕವಿವೆ. ಈ ಜಾಗವು ಹೊರ ವಲಯದಲ್ಲಿರುವುದರಿಂದ ಇಲ್ಲಿ ಆಕಾಶಗೋಪುರ ನಿರ್ಮಿಸುವ ಸಮಯದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಇಲ್ಲ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಕಡಿಮೆ. ಅಲ್ಲದೆ ತುರಹಳ್ಳಿ ಕಾಡಿನ ಪ್ರದೇಶ ಹಸಿರು ತುಂಬಿದ್ದು, ಬೆಂಗಳೂರನ್ನು ವೀಕ್ಷಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಹೆಮ್ಮಿಗೆಪುರ (ನೈಸ್ರಸ್ತೆ ಹತ್ತಿರ) ಜಾಗವನ್ನು ಪ್ರಥಮ ಆಯ್ಕೆ ಮಾಡಿಕೊಂಡಿರುವುದಾಗಿ ಬಿಬಿಎಂಪಿ ಹೇಳಿದೆ.

ಇನ್ನು ಆಕಾಶ ಗೋಪುರ ನಿರ್ಮಾಣ ಮಾಡುವುದಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವಂತೆ ಆಸ್ಟ್ರಿಯಾದ ಸಂಸ್ಥೆಯೊಂದನ್ನು ಬಿಬಿಎಂಪಿ ಈಗಾಗಲೇ ಆಯ್ಕೆ ಮಾಡಿಕೊಂಡಿದೆ. ಇನ್ನು ಟೆಂಡರ್ ಪ್ರಕ್ರಿಯೆಯಲ್ಲಿ ಆಸ್ಟ್ರಿಯಾದ ಕೂಪ್ ಹಿಮ್ಮೆಲ್ಬ್ ಸಂಸ್ಥೆ ಮಾತ್ರ ಭಾಗವಹಿಸಿತ್ತು. ಹೀಗಾಗಿ, ಇದೇ ಕಂಪನಿಗೆ ಡಿಪಿಆರ್ ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿದೆ.

Leave a Reply

Your email address will not be published. Required fields are marked *