ಬೆಂಗಳೂರು : ಮುಡಾ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆಗೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದ್ದು, ಈ ಬೆಳವಣಿಗೆಯಿಂದ ಸಿಎಂ ಸಿದ್ದರಾಮಯ್ಯಗೂ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ಮುಡಾದ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರ ಹೇಳಿಕೆ ಆಧರಿಸಿ ಇತರೆ ಆರೋಪಿಗಳ ವಿರುದ್ಧ ತನಿಖೆಗೆ ಹೈಕೋರ್ಟ್ ಇಡಿಗೆ ಮುಕ್ತ ಹಾದಿ ನೀಡಿದೆ. ಈ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠ ನಟೇಶ್ ಅವರ ಹೇಳಿಕೆ, ಶೋಧನೆಯನ್ನು ಅಮಾನ್ಯಗೊಳಿಸಿತ್ತು. ಈ ಆದೇಶ ಆಧರಿಸಿ ಸಿಎಂ ಪತ್ನಿ ಪಾರ್ವತಿ ಹಾಗೂ ಭೈರತಿ ಸುರೇಶ್ ವಿರುದ್ಧದ ಇಡಿ ಸಮನ್ಸ್ ಕೂಡ ರದ್ದುಪಡಿಸಿತ್ತು.
ಆದರೆ, ಈ ಆದೇಶವನ್ನು ಪ್ರಶ್ನಿಸಿ ಇಡಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಹೈಕೋರ್ಟ್ ಈಗ ನಟೇಶ್ ಅವರ ಹೇಳಿಕೆ ಮತ್ತು ದಾಖಲೆಗಳ ಆಧಾರದ ಮೇಲೆ ಇತರೆ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಲು ಅನುಮತಿ ನೀಡಿದೆ. ಇದರ ಜತೆಗೆ, ಜಾರಿ ನಿರ್ದೇಶನಾಲಯ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಲೋಕಾಯುಕ್ತ ವರದಿ ತಿರಸ್ಕರಿಸಲು ಅರ್ಜಿ ಸಲ್ಲಿಸಿದ್ದು, ಕೋರ್ಟ್ ಈ ಕುರಿತು ಏನ್ಮಾಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಇದರಿಂದ ಮುಂಚಿತವಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧದ ಇಡಿ ಸಮನ್ಸ್ ರದ್ದಾದರೂ, ಇದೀಗ ಹೈಕೋರ್ಟ್ ಅನುಮತಿ ಹಿನ್ನೆಲೆ, ಮುಡಾ ಹಗರಣ ಪ್ರಕರಣ ಮತ್ತಷ್ಟು ತೀವ್ರವಾಗುವ ಲಕ್ಷಣಗಳು ಕಂಡುಬಂದಿವೆ.
ಈ ಪ್ರಕರಣದಲ್ಲಿ ಇಡಿ ಈಗಾಗಲೇ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆ ದಾಳಿ ನಡೆಸಿ, ನಟೇಶ್, ರಾಕೇಶ್ ಪಾಪಣ್ಣ ಮತ್ತು ಪಾಪಣ್ಣ ಅವರ ಮನೆಗಳಲ್ಲಿ ಶೋಧ ನಡೆಸಿ ಮಹತ್ವದ ದಾಖಲೆ ಸಂಗ್ರಹಿಸಿತ್ತು. ಈ ಮಧ್ಯೆ, ಹೈಕೋರ್ಟ್ ತನ್ನ ತೀರ್ಪು ನೀಡಿರುವುದರಿಂದ ಇಡಿಗೆ ಮುಡಾ ಹಗರಣ ತನಿಖೆಯನ್ನು ಮುಂದುವರಿಸಲು ಹಸಿರು ನಿಶಾನೆ ದೊರಕಿದೆ.