ಬೆಂಗಳೂರು: ‘ಬೆಂಗಳೂರು ಮೆಟ್ರೊ ರೈಲು ನಿಗಮವು ‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಕಾನೂನು ಬಾಹಿರವಾಗಿ ಶೇ 71ರವರೆಗೂ ಏರಿಕೆ ಮಾಡಿದೆ’ ಎಂದು ಆಕ್ಷೇಪಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ವಜಾಗೊಳಿಸಿದೆ.

ಸನತ್ ಕುಮಾರ್ ಶೆಟ್ಟಿ ಹಾಗೂ ಮತ್ತಿತರರು ಸಲ್ಲಿಸಿದ್ದ ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ‘ತಜ್ಞರು ಪರಿಶೀಲಿಸಿ ಕೈಗೊಂಡಿರುವ ಇಂತಹ ತೀರ್ಮಾನಗಳನ್ನು ನ್ಯಾಯಾಲಯ ಮರುಪರಿಶೀಲನೆ ಮಾಡಲು ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದೆ.
‘ಮೆಟ್ರೊ ರೈಲ್ವೆ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಯ್ದೆ-2002ರ ಕಲಂ 33ರ ಅಡಿಯಲ್ಲಿ ಶುಲ್ಕ ನಿಗದಿಗೆ ಅವಕಾಶವಿದೆ. ಮೆಟ್ರೊ ಆಡಳಿತವು ಕಾಲಕಾಲಕ್ಕೆ ದರ ನಿಗದಿಪಡಿಸುವ ಅಧಿಕಾರ ಹೊಂದಿದೆ. ದರ ನಿಗದಿ ಸಮಿತಿ ರಚಿಸಲಾಗಿದ್ದು ಅದರ ಶಿಫಾರಸು ಆಧಾರದಲ್ಲಿ ಬೆಲೆ ಏರಿಸಲಾಗಿದೆ. ಶಾಸನಬದ್ದ ಉಲ್ಲಂಘನೆಯನ್ನು ಹೊರತುಪಡಿಸಿ ಇತರೆ ನಿರ್ಧಾರಗಳ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಅವಕಾಶವಿಲ್ಲ’ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.