ಬೆಂಗಳೂರು || ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ರಾಜ್ಯ ಬಿಜೆಪಿ ಬೆಂಬಲ: ಬಿ.ವೈ.ವಿಜಯೇಂದ್ರ

ಬೆಂಗಳೂರು || ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ರಾಜ್ಯ ಬಿಜೆಪಿ ಬೆಂಬಲ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ವರ್ಷಗಳಿಂದಲೂ ಪಂಚಮಸಾಲಿ ಸಮುದಾಯದ ನಾಯಕರು, ಸ್ವಾಮೀಜಿಗಳು ಹೋರಾಟ ನಡೆಸುತ್ತಿದ್ದಾರೆ. ಪೂರ್ವ ನಿಗದಿಯಂತೆ ಬೆಳಗಾವಿ ಅಧಿವೇಶನ ವೇಳೆ ಮತ್ತೆ ಹೋರಾಟಕ್ಕೆ ಸಿದ್ಧವಾಗಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಹೋರಾಟಕ್ಕೆ ರಾಜ್ಯ ಬಿಜೆಪಿ ಬೆಂಬಲ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಅವರು ಘೋಷಿಸಿದ್ದಾರೆ.

ಬೆಳಗಾವಿಯಲ್ಲಿ ಸೋಮವಾರ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿಗಾಗಿ ಒತ್ತಾಯಿಸಿ ಅಹರ್ನಿಶಿ ಹೋರಾಟ ನಡೆಸುತ್ತಿರುವ ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳನ್ನು ರಾಜ್ಯಾಧ್ಯಕ್ಷರು ಭೇಟಿ ಮಾಡಿದರು. ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಅವರು ಸ್ವಾಮೀಜಿಗೆ ಹಾಗೂ ಸಮಾಜದ ನಾಯಕರಿಗೆ ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಬಿ.ವೈ.ವಿಜಯೇಂದ್ರ ಅವರು, ಪಂಚಮಸಾಲಿ ಸಮುದಾಯ ಮೀಸಲಾತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ ಇಟ್ಟಿದ್ದೇ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು. ಅವರ ನೇತೃತ್ವದಲ್ಲಿ ಕರ್ನಾಟಕ ಬಿಜೆಪಿಯು ಮೀಸಲಾತಿ ನೀಡಿದೆ.

ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ 3 ಬಿ ಪ್ರವರ್ಗಕ್ಕೆ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆ ಮಾಡುವ ಮೂಲಕ ಸಮುದಾಯಕ್ಕೆ ಮೀಸಲಾತಿ ಸಿಗುವಂತೆ ಮಾಡಲಾಯಿತು. ಅಂದಿನಿಂದ ಸಮುದಾಯದ ಪ್ರತಿಭಾವಂತರು ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಅವಕಾಶ ಪಡೆಯಲು ಮತ್ತಷ್ಟು ಉತ್ತೇಜನ ಸಿಕ್ಕಂತಾಯಿತು ಎಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಸೂಕ್ತ ನ್ಯಾಯ ಪಡೆಯಬೇಕೆಂಬ ಸಂಕಲ್ಪ ತೊಟ್ಟು ಪ್ರವರ್ಗ 2A ಸೇರ್ಪಡೆಗಾಗಿ ನಡೆಯುತ್ತಿರುವ ಹೋರಾಟ ಸ್ವಾಗತಾರ್ಹವಾಗಿದೆ. ಪೂಜ್ಯ ಶ್ರೀಗಳ ಹಾಗೂ ಸಮುದಾಯದ ಹೋರಾಟಕ್ಕೆ ಅಂದಿಗೂ, ಇಂದಿಗೂ, ಎಂದೆಂದಿಗೂ ಸಮುದಾಯದೊಂದಿಗೆ ನಾವಿರುವುದು ಕರ್ತವ್ಯ ಎಂಬ ಅಭಯದೊಂದಿಗೆ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಲಾಗಿದೆ ಎಂದು ಅವರು ಹೇಳಿದರು.

ಸ್ವಾಮೀಜಿಗಳ ಭೇಟಿ ವೇಳೆ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಅಶ್ವಥ್ ನಾರಾಯಣ್, ಮಾಜಿ ಸಚಿವರಾದ ಸಿಸಿ ಪಾಟೀಲ್, ಇನ್ನಿತರ ಶಾಸಕರು ಇದ್ದರು. ಬಿಜೆಪಿ ನಿಮ್ಮೊಂದಿಗೆ ಹೋರಾಟ ಬಿಡಬೇಡಿ. ನಿಮ್ಮ ಹೋರಾಟ ಸರಿಯಾಗಿದೆ ಎಂದು ತಿಳಿಸಿದರು. ಬಿಜೆಪಿ ಅವಧಿಯಲ್ಲೂ ಪಂಚಮಸಾಲಿ ಮೀಸಲಾತಿ ಹೋರಾಟ ಕಲಾಪದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲಾನ್ ಮಾಡಿಕೊಂಡಿರುವ ಬಿಜೆಪಿ ನಾಯಕರು ಮತ್ತೊಂದೆಡೆ ಸರ್ಕಾರ ವಿರುದ್ಧ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿರುವವ ಬೆನ್ನಿಗೆ ನಿಂತಿದೆ. ಇದೆಲ್ಲ ನೋಡಿದರೆ ಏಳುವ ಪ್ರಶ್ನೆಯೆಂದರೆ, ಬಿಜೆಪಿ ಅವಧಿಯಲ್ಲಿಯೂ ಮೀಸಲಾತಿ ಹೋರಾಟ ತೀವ್ರವಾಗಿತ್ತು. ಬಿಎಸ್ ಯಡಿಯೂರಪ್ಪನವರು ಹಾಗು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಭೆ ನಡೆಸಿದಾಗಲೂ ಭರವಸೆ ನೀಡಿತ್ತು. ಆದರೆ ಈಡೇರಿಸುವ ಗೋಜಿಗೆ ಹೋಗಲಿಲ್ಲ. ಈಗ ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ಪಂಚಮಸಾಲಿ ಸ್ವಾಮೀಜಿಯನ್ನು ಬೆಂಬಲಿಸುವ ಮೂಲಕ ದ್ವಂಧ್ವ ನಿಲುವು ತಾಳಿದಂತಿದೆ.

Leave a Reply

Your email address will not be published. Required fields are marked *