ಬೆಂಗಳೂರು: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಷಯದಲ್ಲಿ ಕರ್ನಾಟಕಕ್ಕೆ ಟಕ್ಕರ್ ಕೊಡುವುದಕ್ಕೆ ರೆಡಿಯಾಗಿರುವ ತಮಿಳುನಾಡು ಸರ್ಕಾರವು ಕರ್ನಾಟಕ ಸರ್ಕಾರಕ್ಕಿಂತಲೂ ಭರ್ಜರಿಯಾಗಿ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರಿನ ಆದಾಯದ ಮೇಲೆ ಕಣ್ಣಿಟ್ಟಿರುವ ತಮಿಳುನಾಡು ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತಲೂ ವೇಗವಾಗಿ ಅಭಿವೃದ್ಧಿ ಮಾಡುವುದಕ್ಕೆ ಮುಂದಾಗಿದೆ. ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ತಮಿಳುನಾಡು ಸರ್ಕಾರವು ಬಿಗ್ ಅಪ್ಡೇಟ್ ಕೊಟ್ಟಿದೆ.

ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರವು ಮುಂದಾಗಿದ್ದು. ಇದಕ್ಕಿಂತ ವೇಗವಾಗಿ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣದ ಸಿದ್ಧತಾ ಕೆಲಸಗಳನ್ನು ಶುರು ಮಾಡಿಕೊಂಡಿದೆ. ಹೊಸೂರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಮಿಳುನಾಡು ಕೈಗಾರಿಕಾ ಸಚಿವ ಟಿ.ಆರ್ ಬಿ ರಾಜಾ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಅದರೊಂದಿಗೆ ಮತ್ತೊಂದು ಬಿಗ್ ಅಪ್ಡೇಟ್ ಸಹ ಕೊಡಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ಕ್ಕೆ ತಮಿಳುನಾಡಿನಿಂದ ಎರಡು ಸ್ಥಳಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದ್ದು. ಈಗಾಗಲೇ ಸ್ಥಳಗಳ ಅಧ್ಯಯನ ಮುಕ್ತಾಯವಾಗಿದೆ. ಈ ಕುರಿತು ವಿವರವಾದ ವರದಿ ಸಿದ್ಧವಾಗಿದೆ ಎಂದು ತಮಿಳುನಾಡು ಹೇಳಿದೆ.
ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಉಳಿದಿದೆ. ಶಾರ್ಟ್ ಲಿಸ್ಟ್ ಫೈನಲ್ ಆದ ಮೇಲೆ ಭೂಸ್ವಾಧೀನ, ಜಾಗದ ಅಭಿವೃದ್ಧಿ ಸೇರಿದಂತೆ ವಿವಿಧ ಕೆಲಸಗಳು ಪ್ರಾರಂಭವಾಗಲಿವೆ. ತನೇಜಾ ಏವಿಯೇಷನ್ ಹಾಗೂ ಏರೋಸ್ಪೇಸ್ ಲಿ. ಒಡೆತನದ ಖಾಸಗಿ ವಿಮಾನ ನಿಲ್ದಾಣದ ಸಮೀಪದ ಜಾಗವನ್ನು ಹೊಸೂರಿನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಇದರಲ್ಲಿ ಒಂದು ಜಾಗವು ಚೆನ್ನೈ – ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯ ಸಮೀಪದಲ್ಲಿ ಇದೆ. ಇದೇ ಜಾಗವನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಎಂದು ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಕೇಂದ್ರದಿಂದ ಗುಡ್ನ್ಯೂಸ್: ಇನ್ನು ಭಾರತೀಯ ವಿಮಾನ ಅಭಿವೃದ್ಧಿ ಪ್ರಾಧಿಕಾರವು ತಮಿಳುನಾಡು ಸರ್ಕಾರ ಶಾರ್ಟ್ ಲಿಸ್ಟ್ ಮಾಡಿದ್ದ ಎರಡು ಜಾಗಗಳಲ್ಲೂ ಅಧ್ಯಯನ ಮಾಡಿದ್ದು. ವಿಸ್ತೃತವಾದ ವರದಿಯನ್ನು ತಮಿಳುನಾಡು ಸರ್ಕಾರಕ್ಕೆ ಕೊಟ್ಟಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎರಡೂ ಜಾಗಗಳೂ ಸೂಕ್ತವಾಗಿದೆ ಎಂದು ಭಾರತೀಯ ವಿಮಾನ ಅಭಿವೃದ್ಧಿ ಪ್ರಾಧಿಕಾರವು ಹೇಳಿದೆ ಎಂದು ಹೇಳಲಾಗಿದೆ.
ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಮೊದಲು ಐದು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿತ್ತು. ಆದರೆ, ಅಧ್ಯಯ ವರದಿಯ ಹಂತದಲ್ಲಿ ಇದನ್ನು 2ಕ್ಕೆ ಇಳಿಕೆ ಮಾಡಲಾಗಿತ್ತು. ಇದೀಗ ಶಾರ್ಟ್ ಲಿಸ್ಟ್ ಮಾಡಿರುವ ಎರಡು ಪ್ರದೇಶಗಳು ಸಹ ವಿಮಾನ ನಿಲ್ದಾಣಕ್ಕೆ ಸೂಕ್ತವಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ತಮಿಳುನಾಡಿಗೆ ವರದಿ ಸಲ್ಲಿಕೆ ಮಾಡಿದೆ. ಹೊಸೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡಿ: ಇನ್ನು ಹೊಸೂರಿನ ಕೈಗಾರಿಕಾ ಪ್ರದೇಶದಲ್ಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಇಲ್ಲಿನ ಕೈಗಾರಿಕೋದ್ಯಮಿಗಳು ಒತ್ತಾಯ ಮಾಡುತ್ತಿದ್ದಾರೆ. ಈ ಭಾಗದಲ್ಲಿ ವಿಶಾಲವಾದ ಜಾಗವಿದೆ ಎನ್ನುವ ವಾದ ಕೇಳಿ ಬರುತ್ತಿದೆ. ಎರಡೂ ಜಾಗದಲ್ಲೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಲಾಬಿ ಜೋರಾಗಿದೆ ಎಂದು ಹೇಳಲಾಗುತ್ತಿದೆ.