ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಪರ್ಯಾಯವಾಗಿ ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಮೂರು ಜಾಗಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಎರಡು ಸ್ಥಳಗಳು ಕನಕಪುರ ರಸ್ತೆಯಲ್ಲಿದ್ದರೆ, ಮತ್ತೊಂದು ಕುಣಿಗಲ್ ರಸ್ತೆಯ ಬಳಿ ಇದೆ. ಈ ಮೂರೂ ಸ್ಥಳಗಳು ಬೆಂಗಳೂರಿಗೆ ತುಸು ಹೊರಭಾಗದಲ್ಲೇ ಇರುವುದರಿಂದ ಬೇರೆ ಬೇರೆ ಜಿಲ್ಲೆಗಳೊಂದಿಗೆ ಬೆರೆತುಕೊಂಡಿವೆ. ಹಾಗಾಗಿ ಈ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗುವುದರಿಂದ ಬೆಂಗಳೂರಿಗೆ ಮಾತ್ರವಲ್ಲದೆ ಬೇರೆ ಜಿಲ್ಲೆಗಳಿಗೂ ವರದಾನ ಎನ್ನಲಾಗುತ್ತಿದೆ. ಹಾಗಾದ್ರೆ ಯಾವೆಲ್ಲ ಜಿಲ್ಲೆಗಳು ಇದರ ಅನುಕೂಲ ಪಡೆದುಕೊಳ್ಳಲಿವೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಮೊದಲನೆಯದಾಗಿ ಕನಕಪುರ ರಸ್ತೆಯ ಕೆ.ಚೂಡಹಳ್ಳಿ ಹಾಗೂ ಸೋಮನಹಳ್ಳಿ ಬಳಿ ಎರಡನೇ ವಿಮಾನ ನಿಲ್ದಾಣಕ್ಕೆ ಎರಡು ಜಾಗಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ. ಈ ಎರಡೂ ಜಾಗಗಳು ಕನಕಪುರ ರಸ್ತೆಯಲ್ಲೇ ಇವೆ. ಹಾರೋಹಳ್ಳಿ ಸಮೀಪ ಇರುವ ಜಾಗವು ಎರಡನೇ ಏರ್ಪೋರ್ಟ್ಗೆ ಸೂಕ್ತ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಮಾರ್ಗವು ರಾಮನಗರ ಜಿಲ್ಲೆ ಹಾಗೂ ಕನಕಪುರ ತಾಲ್ಲೂಕಿಗೂ ಸಮೀಪದಲ್ಲಿದೆ. ಹೀಗಾಗಿ ಈ ಭಾಗದಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣವಾಗುವುದರಿಂದ ಬೆಂಗಳೂರು ಹಾಗೂ ರಾಮನಗರ ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಕನಕಪುರ ರಸ್ತೆ ಬಳಿಯ ಈ ಎರಡು ಜಾಗಗಳಲ್ಲಿ ಎಲ್ಲೇ ಏರ್ಪೋರ್ಟ್ ನಿರ್ಮಾಣವಾದರೂ ಮೊದಲಿಗೆ ಇದರ ಲಾಭ ಪಡೆಯುವುದು ರಾಮನಗರ ಜಿಲ್ಲೆ ಎಂದು ಹೇಳಲಾಗುತ್ತಿದೆ. ಬೆಂಗಳೂರು ಈಗಾಗಲೇ ಅಭಿವೃದ್ಧಿ ಹೊಂದಿರುವುದರಿಂದ ಏರ್ಪೋರ್ಟ್ ಬಂದರೆ ಅದರ ನೇರ ಪ್ರಭಾವ ಬೆಂಗಳೂರಿನ ಮೇಲೆ ಅಷ್ಟಾಗಿ ಬೀಳುವುದಿಲ್ಲ. ಆದರೆ, ಗ್ರಾಮೀಣ ಪ್ರದೇಶವಾಗಿರುವ ರಾಮನಗರ ಜಿಲ್ಲೆಯ ಭಾಗಗಳು ಅಭಿವೃದ್ಧಿ ಹೊಂದಲು ಇದು ತುಂಬಾ ನೆರವಾಗಲಿದೆ. ರಾಮನಗರ ಭಾಗದ ಉದ್ಯಮಗಳು ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ.
ರಾಮನಗರದ ಬಳಿಕ ಮಂಡ್ಯ ಕೂಡ ಈ ಪ್ರದೇಶಕ್ಕೆ ಹತ್ತಿರವಾಗಲಿದೆ. ಇಲ್ಲಿನ ಕೃಷಿ ಉತ್ಪನ್ನಗಳ ರಫ್ತು, ಪ್ರವಾಸೋದ್ಯಮ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೂ ಅನುಕೂಲವಾಗಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಭಾಗಕ್ಕೂ ಈ ಏರ್ಪೋರ್ಟ್ ಸಂಪರ್ಕ ಸುಲಭವಾಗಲಿದೆ. ಈಗಾಗಲೇ ಮೈಸೂರಿನಲ್ಲಿ ಚಿಕ್ಕ ವಿಮಾನ ನಿಲ್ದಾಣವಿದ್ದರೂ ಅಲ್ಲಿನ ವಿಮಾನ ಸೇವೆ ಕಡಿಮೆ ಇದೆ. ಸದ್ಯ ವಿದೇಶಿಗರು ಕೆಂಪೇಗೌಡ ಏರ್ಪೋರ್ಟ್ಗೆ ಬಂದೇ ಮೈಸೂರಿಗೆ ಹೋಗಬೇಕಾಗಿದೆ. ಈ ಹಿನ್ನೆಲೆ ಕನಕಪುರ ರಸ್ತೆಯಲ್ಲೇ ಹೊಸ ಏರ್ಪೋರ್ಟ್ ನಿರ್ಮಾಣವಾದರೆ ಮೈಸೂರು ವಿಮಾನ ನಿಲ್ದಾಣದ ಪರ್ಯಾಯವಾಗಿ ಬಳಸಬಹುದು. ರಾಮನಗರದ ಮೂಲಕ ಸುಲಭವಾಗಿ ಮೈಸೂರು ಎಕ್ಸ್ಪ್ರೆಸ್ವೇ ಹಿಡಿದು ನಗರ ತಲುಪಬಹುದು. ಪ್ರವಾಸೋದ್ಯಮಕ್ಕೂ ಇದರಿಂದ ಬಲ ಸಿಗಲಿದೆ. ಕ್ರಮೇಣ ಚಾಮರಾಜನಗರ ಜಿಲ್ಲೆಯಲ್ಲಿ ವಾಣಿಜ್ಯ, ಹೋಟೆಲ್ ಉದ್ಯಮ, ಕೈಗಾರಿಕೆಗಳಿಗೂ ಪ್ರೋತ್ಸಾಹ ಸಿಗಲಿದೆ.
ಕುಣಿಗಲ್ ಬಳಿ ಏನೆಲ್ಲ ಅನುಕೂಲ? ಕುಣಿಗಲ್ ರಸ್ತೆಯ ಸೋಲೂರು ಬಳಿ ಮತ್ತೊಂದು ಜಾಗ ಗುರುತಿಸಲಾಗಿದೆ. ಒಂದು ವೇಳೆ ಕುಣಿಗಲ್ ಬಳಿ ಹೊಸ ಏರ್ಪೋರ್ಟ್ ನಿರ್ಮಾಣವಾದ್ರೆ ಮೊದಲಿಗೆ ಇದರ ಲಾಭ ತುಮಕೂರು ಭಾಗಕ್ಕೆ ಸಿಗಲಿದೆ. ಇದರಿಂದ ತುಮಕೂರು ಕೈಗಾರಿಕಾ ವಲಯ ವೃದ್ಧಿಯಾಗಲಿದೆ. ನೆಲಮಂಗಲ ಸೇರಿದಂತೆ ಬೆಂಗಳೂರು ಸುತ್ತಮುತ್ತ ಆರ್ಥಿಕ ಬೆಳವಣಿಗೆಗೆ ಸಹಾಯವಾಗಲಿದೆ. ಹಾಸನ ಮಾರ್ಗದಲ್ಲಿರುವುದರಿಂದ ಹಾಸನದ ಕೈಗಾರಿಕಾ ವಲಯ, ಕೃಷಿ ಉತ್ಪನ್ನ ರಫ್ತು ಮತ್ತು ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ.
ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ವಾಯುವ್ಯ ಭಾಗದ ಅಭಿವೃದ್ಧಿಗೆ ನೆರವಾಗಲಿದ್ದು, ಚಿಕ್ಕಮಗಳೂರು ಕಾಫಿ, ಕೃಷಿ ಉತ್ಪನ್ನ ರಫ್ತು ಮತ್ತು ಪ್ರವಾಸೋದ್ಯಮ ವೃದ್ಧಿ, ಮಂಡ್ಯ ಕೃಷಿ ಉತ್ಪನ್ನಗಳ ಸರಕು ಸಾಗಣೆ ಸುಗಮಗೊಳ್ಳಲಿದೆ. ಶಿವಮೊಗ್ಗ ವಾಣಿಜ್ಯ, ಕೈಗಾರಿಕೆ, ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ. ಇದು ಕೂಡ ರಾಮನಗರ ಜಿಲ್ಲೆಗೆ ಸಮೀಪದಲ್ಲೇ ಇರುವುದರಿಂದ ಆ ಜಿಲ್ಲೆಯ ಅಭಿವೃದ್ಧಿಗೂ ಸಾಥ್ ನೀಡಲಿದೆ. ಈ ಪ್ರದೇಶವು ಬೆಂಗಳೂರು-ಹಾಸನ-ಮಂಗಳೂರು ಮಾರ್ಗದಲ್ಲಿ ಇರುವುದರಿಂದ ಲಾಜಿಸ್ಟಿಕ್ಸ್ ಹಬ್ ಆಗಿ ಬೆಳೆಯುವ ಸಾಧ್ಯತೆ ಇದೆ. ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ಪ್ರಯಾಣ ಇನ್ನೂ ಸುಗಮವಾಗಲಿದೆ. ತುಮಕೂರು ಕೈಗಾರಿಕಾ ಬೆಲ್ಟ್, ಬೆಂಗಳೂರು ಮೈಸೂರು ಇನ್ಫ್ರಾ ಕಾರಿಡಾರ್ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ. ಹಾಸನ, ಶಿವಮೊಗ್ಗ ಹಾಗೂ ಮಂಗಳೂರು ಏಪೋರ್ಟ್ ಸಂಪರ್ಕಕ್ಕೂ ಅನುಕೂಲ. ಬೆಂಗಳೂರು-ಮಂಗಳೂರು ಹೆದ್ದಾರಿಗೆ ನೇರ ಸಂಪರ್ಕ ಸಿಗಲಿದೆ.
ಕನಕಪುರ ರಸ್ತೆಯ ಜಾಗಗಳು ಬೆಂಗಳೂರು ನಗರಕ್ಕೆ ಸಮೀಪದಲ್ಲೇ ಇದ್ದು, ಮೈಸೂರು-ಬೆಂಗಳೂರು ಏರ್ಪೋರ್ಟ್ ಸಂಪರ್ಕ ಸುಲಭವಾಗಲಿದೆ. ಈ ರಸ್ತೆಯಲ್ಲಿನ ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು ಭಾಗದ ಜನರಿಗೆ ಅನುಕೂಲವಾಗಲಿದೆ. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ, ನಂದಿ ಇನ್ಫ್ರಾ ಪ್ರಾಜೆಕ್ಟ್, ಮೈಸೂರು ಕೈಗಾರಿಕೆ ವಲಯಕ್ಕೆ ಬೆಂಬಲವೂ ಸಿಗಲಿದೆ. ಬೆಂಗಳೂರಿನ ದಕ್ಷಿಣ ಭಾಗದ ಐಟಿ ಹಾಗೂ ತಯಾರಿಕಾ ಘಟಕಗಳ ಹಬ್ಗಳಿಗೆ ಸುಗಮ ಪ್ರವೇಶ ಸಿಗಲಿದೆ. ಶಿವನಸಮುದ್ರ ಜಲಪಾತ, ಬೆಂಗಳೂರು-ಮೈಸೂರು ಪ್ರವಾಸೋದ್ಯಮ ಕೂಡ ಅಭಿವೃದ್ಧಿಯಾಗಲಿದೆ. ಬಿಡದಿ ಕೈಗಾರಿಕಾ ಪ್ರದೇಶ, ಟೊಯೋಟಾ ಘಟಕ, ಕೋಕಕೋಲ ಕಾರ್ಖಾನೆ ಸೇರಿ ಮುಂತಾದ ಕೈಗಾರಿಕೆಗಳಿಗೆ ಸಹಾಯವಾಗಲಿದೆ. ಒಟ್ಟಾರೆ ಕನಕಪುರ ರಸ್ತೆಯಲ್ಲಿ ಏರ್ಪೋರ್ಟ್ ನಿರ್ಮಾಣವಾದರೆ ಮೈಸೂರು, ರಾಮನಗರ, ಮಂಡ್ಯ ಭಾಗದವರಿಗೆ ಹೆಚ್ಚು ಅನುಕೂಲವಾಗಲಿದೆ. ಕುಣಿಗಲ್ ಬಳಿಯಾದರೆ ತುಮಕೂರು, ಹಾಸನ, ಶಿವಮೊಗ್ಗ ಭಾಗದವರಿಗೆ ಹೆಚ್ಚು ಲಾಭ ಸಿಗಲಿದೆ. ಅಭಿವೃದ್ಧಿ ದೃಷ್ಟಿಯಿಂದ ಕುಣಿಗಲ್ ಭಾಗ ಬೆಳವಣಿಗೆಗೆ ಅನುಕೂಲಕರವಾಗಿದ್ದರೆ, ಪ್ರವಾಸೋದ್ಯಮ ಹಾಗೂ ಕೈಗಾರಿಕೆ ದೃಷ್ಟಿಯಿಂದ ಕನಕಪುರ ರಸ್ತೆಯೇ ಬೆಸ್ಟ್ ಎಂದು ಹೇಳಲಾಗುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತಂಡ ಇಲ್ಲಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದು, ಈ ಎಲ್ಲ ಅಂಶಗಳು ಪ್ರಮುಖ ಪಾತ್ರ ವಹಿಸಲಿವೆ. ಈ ಏರ್ಪೋರ್ಟ್ ಯಾವುದೇ ಸ್ಥಳದಲ್ಲಿ ಬಂದರೂ ಹೊಸ ಉದ್ಯೋಗಗಳ ಸೃಷ್ಟಿಯಾಗಲಿದೆ. ತಂತ್ರಜ್ಞಾನ, ಉತ್ಪಾದನೆ, ಲಾಜಿಸ್ಟಿಕ್ಸ್ ರಿಯಲ್ ಎಸ್ಟೇಟ್ ವಲಯಗಳಿಗೆ ಬಲ ಸಿಗಲಿದೆ. ಕರ್ನಾಟಕದ ಹಲವು ಭಾಗಗಳಿಗೆ ನೇರ ವಿಮಾನ ಸಂಪರ್ಕ ಕೂಡ ಲಭ್ಯವಾಗಬಹುದು. ಕರ್ನಾಟಕ ಸರ್ಕಾರದಿಂದ ಅಧಿಕೃತ ಸ್ಥಳ ನಿಗದಿಯಾದ ನಂತರವೇ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.