ಬೆಂಗಳೂರು: ಯಡಿಯೂರಪ್ಪನವರಿಂದ ದೌರ್ಜನ್ಯಕ್ಕೊಳಗಾದ ಬಾಲಕಿ ಹಾಗೂ ಕುಟುಂಬ ಭವಿಷ್ಯದ ದಿಕ್ಕು ಕಾಣದೆ ಕಣ್ಣೀರಿನಲ್ಲಿ ಮುಳುಗಿದ್ದಾರೆ. ಮೊಮ್ಮಗಳ ವಯಸ್ಸಿನ ಮಗುವಿನ ಮೇಲೆ ಕೈ ಹಾಕಿದ ಯಡಿಯೂರಪ್ಪನವರ ಕೃತ್ಯಕ್ಕೆ ವಿಜಯೇಂದ್ರರನ್ನು ಹೊಣೆ ಮಾಡಿ ರಾಜೀನಾಮೆ ಕೇಳುವುದು ಯಾವಾಗ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದ್ದಾರೆ.
ಟ್ವೀಟ್ ಮೂಲಕ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಹಲವು ಪ್ರಶ್ನೆಗಳನ್ನ ಮುಂದಿಟ್ಟು ಸಚಿವ ಪ್ರಿಯಾಂಕ್ ಖರ್ಗೆ ಅವರು ತಿರುಗೇಟು ನೀಡಿದ್ದಾರೆ. ಅಶೋಕ್ ಅಣ್ಣ, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಕಲಿತ ನಿಮ್ಮ ಅಪ್ರಸ್ತುತ ಪ್ರಶ್ನೆಗಳಿಗಿಂತ, ನಿಮ್ಮವರ ನಾಚಿಕೆಗೇಡಿನ ಕೃತ್ಯಗಳ ಪ್ರಸ್ತುತ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ತೋರಿಸಿ, ಏಡ್ಸ್ ಸೊಂಕನ್ನು ರಾಜಕೀಯ ವಿರೋಧಿಗಳಿಗೆ ಹಬ್ಬಿಸಲು ಪ್ರಯತ್ನಿಸಿದ್ದ ಹಾಗೂ ಹಲವು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಮುನಿರತ್ನರ ರಾಜೀನಾಮೆ ಪಡೆದು ಪಕ್ಷದಿಂದ ಹೊರಗಟ್ಟುವುದು ಯಾವಾಗ? ಅಶೋಕ್ ಅವರೇ, ನಿಮಗೇ ಏಡ್ಸ್ ಸೋಂಕು ತಗುಲಿಸಲು ಪ್ರಯತ್ನಿಸಿದ್ದರು ಎಂಬ ವಿಚಾರ ನೆನಪಿದೆ ತಾನೇ? ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದು, ದೌರ್ಜನ್ಯ ನಡೆಸುವುದು ನಿಮ್ಮ ಪಕ್ಷದವರ ಬೇಸಿಕ್ ಕ್ವಾಲಿಫಿಕೇಶನ್ ಇರಬಹುದೇನೋ ಎಂಬ ಪ್ರಶ್ನೆ ಮೂಡುತ್ತಿದೆ, ಏಕೆಂದರೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಅತಿ ಹೆಚ್ಚು ಜನ ನಿಮ್ಮ ಪಕ್ಷದಲ್ಲೇ ಇರುವುದು. ಈಗ ಹೊಸದಾಗಿ ಬಿಜೆಪಿ ಮುಖಂಡ ಹಾಗೂ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯೊಬ್ಬನ ಅತ್ಯಾಚಾರದ ವಿಷಯ ಹೊರಬಂದಿದೆ. ಅಶೋಕ್ ಅವರೇ, ಈ ನಾಡಿನ ಮಹಿಳೆಯರಲ್ಲಿ ನಿಮ್ಮ ಪಕ್ಷ ಕ್ಷಮೆ ಕೇಳುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ. ಮಹಿಳೆಯರ ಮಾನದ ಮೇಲೆ ಪ್ರಹಾರ ನಡೆಸಿವುದೇ ನಕಲಿ ಧರ್ಮ ರಕ್ಷಕರ ಅಸಲಿ ಕೃತ್ಯವಾಗಿದೆ, ಅಲ್ಲವೇ ಅಶೋಕ್ ಅವರೇ? ಕೇಸರಿ ಶಾಲಿನ ಮರೆಯಲ್ಲಿ ನಿಮ್ಮೆಲ್ಲ ಕುಕೃತ್ಯಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಆಧುನಿಕ ದುಷ್ಯಾಸನರೇ ತುಂಬಿರುವ ಬಿಜೆಪಿಯಿಂದ ಧರ್ಮ, ಸಂಸ್ಕೃತಿ, ಪರಂಪರೆಯ ಮಾತುಗಳನ್ನು ಕೇಳುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ತಿರುಗೇಟು ನೀಡಿದ್ದಾರೆ.
ಆರ್ ಅಶೋಕ್ ಹೇಳಿದ್ದೇನು? ಸ್ವಾಮಿ ಪ್ರಿಯಾಂಕ್ ಖರ್ಗೆ ಅವರೇ ನಾವು ನಿಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷದವರ ರೀತಿ ಎಲೆಕ್ಷನ್ ಹಿಂದೂಗಳು ಅಲ್ಲ, ಎಲೆಕ್ಷನ್ ಅಂಬೇಡ್ಕರ್ ವಾದಿಗಳೂ ಅಲ್ಲ. ನನ್ನದೊಂದು ಸವಾಲು. ತಾವು ಹೇಳಿಕೊಳ್ಳುವಂತೆ ತಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷದವರು ನಿಜವಾಗಿಯೂ ಅಂಬೇಡ್ಕರ್ ವಾದಿಗಳಾಗಿದ್ದಾರೆ ನೆಹರು ಅವರಾಗಲಿ, ಇಂದಿರಾ ಗಾಂಧಿ ಅವರಾಗಲಿ, ರಾಜೀವ್ ಗಾಂಧಿ ಅವರಾಗಲಿ ನೀಲಿ ಶಾಲು ಧರಿಸಿದ್ದ ಒಂದೇ ಒಂದು ಫೋಟೋ ತೋರಿಸಿ ನೋಡೋಣ ಎಂದು ಆರ್ ಅಶೋಕ್ ಹೇಳಿದ್ದಾರೆ. ಅದು ಹೋಗಲಿ ಬಿಡಿ. ಪಾಪ ನಿಮ್ಮ ನಕಲಿ ಗಾಂಧಿ ಪಕ್ಷದ ಥರ್ಡ್ ಟೈಂ ಫೇಲ್ ಸ್ಟಾರ್ ಕಾಮಿಡಿಯನ್ ಚುನಾವಣೆ ಬಂದಾಗಲೆಲ್ಲಾ ಕೇಸರಿ ಬಟ್ಟೆ, ಕೇಸರಿ ಶಾಲು, ಹಣೆಗೆ ವಿಭೂತಿ, ಕುಂಕುಮ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗುತ್ತಾರೆ. ತಾನು ಕೌಲ ದತ್ತಾತ್ರೇಯ ಗೋತ್ರದ ಬ್ರಾಹ್ಮಣ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ಮುತ್ತಜ್ಜ ನೆಹರೂ ಅವರಾಗಲಿ, ಅಜ್ಜಿ ಇಂದಿರಾ ಗಾಂಧಿ ಅವರಾಗಲಿ, ಅಪ್ಪ ರಾಜೀವ್ ಗಾಂಧಿ ಅವರಾಗಲಿ, ಅಮ್ಮ ಸೋನಿಯಾ ಗಾಂಧಿ ಅವರಾಗಲಿ ಒಂದು ದಿನವೂ ಕೇಸರಿ, ಕುಂಕುಮ, ಗುಡಿ ಗೋಪುರಗಳ ಹತ್ತಿರವೂ ಸುಳಿದಿದ್ದನ್ನು ನಾನಂತೂ ಕಂಡಿಲ್ಲ.
ನೀವೇನಾದರೂ ಕಂಡಿದ್ದರೆ ಒಂದು ಫೋಟೋ ತೋರಿಸಿ. ಇನ್ನು ಅಂಬೇಡ್ಕರ್ ಅವರನ್ನ ನಿಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷ ಹೇಗೆ ನಡೆಸಿಕೊಂಡಿತು ಎಂದು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಇತ್ತೀಚೆಗೆ ಸಂಸತ್ತಿನಲ್ಲಿ ಸಂವಿಧಾನದ ಬಗ್ಗೆ ನಡೆದ ಚರ್ಚೆಯಲ್ಲಿ ಎಲ್ಲವೂ ಶಾಶ್ವತವಾಗಿ ದಾಖಲಾಗಿದೆ. ಕಂಟ್ರಾಕ್ಟರ್ ಗಳ ಆತ್ಮಹತ್ಯೆ, ಡಿನ್ನರ್ ಮೀಟಿಂಗ್ ಇವೆಲ್ಲಾ ಗೊಜಲುಗಳಿಂದ ಬಿಡುವಿದ್ದಾಗ ಒಮ್ಮೆ ಆ ಚರ್ಚಗಳನ್ನ ಓದಿಕೊಳ್ಳಿ. ಚುನಾವಣಾ ಭಾಷಣಗಳಲ್ಲಿ ಮೀಸಲಾತಿ ಪರವಾಗಿ ಮೊಸಳೆ ಕಣ್ಣೀರು ಸುರಿಸುವುದು, ವಿದೇಶಿ ವೇದಿಕೆಗಳಲ್ಲಿ ಮೀಸಲಾತಿ ವಿರುದ್ಧವಾಗಿ ಮಾತನಾಡುವ ಡೋಂಗಿ ಅಂಬೇಡ್ಕರ್ ವಾದ ಅಲ್ಲ ನಮ್ಮದು. ಬಾಬಾ ಸಾಹೇಬ್ ಅಂಬೇಡ್ಕರರ ಸಿದ್ಧಾಂತಕ್ಕೆ ಸಮನಾದ ಸಿದ್ಧಾಂತ ಯಾವುದಾದರೂ ಇದ್ದರೆ ಅದು ಬಿಜೆಪಿಯ ಏಕಾತ್ಮ ಮಾನವತಾವಾದ ಮತ್ತು ಅಂತ್ಯೋದಯ. ಮಹಾತ್ಮ ಗಾಂಧೀಜಿ ಅವರು ವಿಸರ್ಜನೆ ಮಾಡಬೇಕು ಅಂದ ಮೇಲೂ ಅಧಿಕಾರಕ್ಕಾಗಿ ಒಂದು ಕುಟುಂಬದ ಆಸ್ತಿಯಾಗಿ ಉಳಿದುಕೊಂಡಿರುವ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷದ ಏಕೈಕ ಸಿದ್ಧಾಂತ ಅಂದರೆ ಅದು ಅಧಿಕಾರವಾದ. ಅಧಿಕಾರಕ್ಕಾಗಿ ಲಜ್ಜೆ ಇಲ್ಲದ ಅವಕಾಶವಾದ. ಮಿಕ್ಕಿದ್ದೆಲ್ಲ ಬರೀ ಬೊಗಳೆ ಎಂದು ಆರ್ ಅಶೋಕ್ ಹೇಳಿದ್ದಾರೆ.