ಯೆಲ್ಲೋ ಲೈನ್ ಮೆಟ್ರೋ ಓಪನ್ ಬೆನ್ನಲ್ಲೇ BMRCL​​ ಅಧಿಕಾರಿಗಳ ಎಡವಟ್ಟು: ಜನರು, ರೋಗಿಗಳ ಪರದಾಟ.

ಯೆಲ್ಲೋ ಲೈನ್ ಮೆಟ್ರೋ ಓಪನ್ ಬೆನ್ನಲ್ಲೇ BMRCL​​ ಅಧಿಕಾರಿಗಳ ಎಡವಟ್ಟು: ಜನರು, ರೋಗಿಗಳ ಪರದಾಟ.

ಬೆಂಗಳೂರು : ನಮ್ಮ ಮೆಟ್ರೋ  ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಯಡವಟ್ಟಿನಿಂದಾಗಿ ಪ್ರತಿದಿನ ಆಸ್ಪತ್ರೆಗೆ ಬರುವ ಸಾವಿರಾರು ರೋಗಿಗಳು ಮತ್ತು ಜನರು ಪ್ರಾಣ ಕೈಯಲ್ಲಿ ಹಿಡಿದು ರಸ್ತೆ ಕ್ರಾಸ್ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ರಸ್ತೆ ಬಂದ್ ಮಾಡಿದ ಹಿನ್ನಲೆ ಆಸ್ಪತ್ರೆಗೆ ಬರುವ ರೋಗಿಗಳು ಬ್ಯಾರಿಕೇಡ್ ಜಂಪ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಆರ್.ವಿ ರೋಡ್ ಟು ಬೊಮ್ಮಸಂದ್ರ ಮಾರ್ಗಕ್ಕೆ ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಹಳದಿ ಮಾರ್ಗದಲ್ಲಿ ರಾಗಿಗುಡ್ಡ- ಸಿಲ್ಕ್ ಬೋರ್ಡ್ ವರೆಗೆ ಡಬಲ್ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಆದರೆ ರಸ್ತೆ ಕೆಳಭಾಗದಲ್ಲಿ ಆ ಭಾಗದಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ರಸ್ತೆ ಕ್ರಾಸ್ ಮಾಡಲು ಇದ್ದ ಸಾಕಷ್ಟು ಜಾಗಗಳನ್ನು ಬಿಎಂಆರ್​ಸಿಎಲ್​ ಅಧಿಕಾರಿಗಳು ಬ್ಯಾರಿಕೇಡ್ ಹಾಕಿ ಬಂದ್​ ಮಾಡಿದ್ದಾರೆ.

ಇತ್ತ ಜಯದೇವ ಹೃದ್ರೋಗ ಆಸ್ಪತ್ರೆ ಬಳಿ ರಸ್ತೆ ಕ್ರಾಸ್ ಮಾಡಲು ಈ ಹಿಂದೆ ಜಾಗ ನೀಡಲಾಗಿತ್ತು. ನಮ್ಮ ಮೆಟ್ರೋ ಅಧಿಕಾರಿಗಳು ಇದೀಗ ಆ ಜಾಗದಲ್ಲಿ ಬ್ಯಾರಿಕೇಡ್ ಹಾಕಿ, ರಸ್ತೆ ಬಂದ್​ ಮಾಡಿದ್ದಾರೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಬ್ಯಾರಿಕೇಡ್ ಜಂಪ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್​ವರೆಗೆ ಜನರು ರಸ್ತೆ ಕ್ರಾಸ್ ಮಾಡಲು ಇದ್ದ ಎಲ್ಲಾ ಮಾರ್ಗವನ್ನು ಅಧಿಕಾರಿಗಳು ಬಂದ್​ ಮಾಡಿದ್ದಾರೆ. ಇದರಿಂದ ರಸ್ತೆ ಕ್ರಾಸ್ ಮಾಡಲು ವ್ಯವಸ್ಥೆ ಇಲ್ಲದೆ ಆ ಭಾಗದ ಜನರು ಕಂಗಾಲಾಗಿದ್ದಾರೆ‌.

ಯೆಲ್ಲೋ ಲೈನ್ ಮೆಟ್ರೋ ಮಾರ್ಗ ಓಪನ್ ಆಗುತ್ತಿದ್ದಂತೆ ಬ್ಯಾರಿಕೇಡ್ ಹಾಕಿ ರಸ್ತೆ ಕ್ಲೋಸ್ ಮಾಡಿದ್ದಾರಂತೆ. ಬಸ್ ಹತ್ತಲು, ರಸ್ತೆ ಕ್ರಾಸ್ ಮಾಡಲು ಅವಕಾಶ ನೀಡದೆ ರಸ್ತೆ ಬಂದ್​ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿರುವುದರಿಂದ ಕಿಮೀ ಗಟ್ಟಲೇ ಸುತ್ತಿಕೊಂಡು ರಾಗಿಗುಡ್ಡ ಹೋಗಿ ರೋಗಿಗಳು ಮತ್ತು ಜನರು ಬಸ್ ಹತ್ತುತ್ತಿದ್ದಾರೆ.

ಆಸ್ಪತ್ರೆ ಎದುರಿಗೆ ಬಿಎಂಟಿಸಿ ಬಸ್ ನಿಲ್ದಾಣವಿದೆ. ಈ ನಿಲ್ದಾಣಕ್ಕೆ ರಾಗಿಗುಡ್ಡ, ಬನಶಂಕರಿ, ಕೆಂಗೇರಿ, ಜಯನಗರ, ಕೆ.ಆರ್ ಮಾರ್ಕೆಟ್, ಮೆಜಸ್ಟಿಕ್ ಭಾಗಕ್ಕೆ ಹೋಗುವವರಿಗೆ ಬಸ್ ಬರುತ್ತದೆ. ಆದರೆ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯನ್ನು ಮೆಟ್ರೋ ಆಗುತ್ತಿದ್ದಂತೆ ಅಧಿಕಾರಿಗಳು ಬಂದ್​ ಮಾಡಿದ್ದಾರೆ. ಪ್ರತಿದಿನ ಜಯದೇವ ಆಸ್ಪತ್ರೆಗೆ ಸಾವಿರಾರು ರೋಗಿಗಳು ಮತ್ತು ಅವರ ಸಂಬಂಧಿಕರು ಬರುತ್ತಾರೆ, ಆದರೆ ರೋಡ್ ಕ್ರಾಸ್ ಮಾಡಲು ವ್ಯವಸ್ಥೆ ಇಲ್ಲದಂತೆ ಆಗಿದೆ. ಇದರಿಂದ ಮೂರು ಅಡಿಯಿರುವ ದೊಡ್ಡದಾದ ಬ್ಯಾರಿಕೇಡ್ ಜಂಪ್ ಮಾಡಿಕೊಂಡು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾರೆ.

ಬಿಎಲ್ ಯಶ್ವಂತ್ ಚೌವ್ಹಾಣ್ ಹೇಳಿದ್ದಿಷ್ಟು 

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್​ಸಿಎಲ್​ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್. ಯಶ್ವಂತ್ ಚೌವ್ಹಾಣ್, ಎಲ್ಲೆಲ್ಲಿ ಜನರು ಓಡಾಡಲು ಅವಕಾಶ ನೀಡಬೇಕೆಂದು ಟ್ರಾಫಿಕ್ ಪೋಲಿಸರು ಸೂಚನೆ ನೀಡಿದರೋ ಅಲ್ಲಿ ನಾವು ರಸ್ತೆ ಬಂದ್​ ಮಾಡಿಲ್ಲ. ಎಲ್ಲಿ ಬಂದ್​ ಮಾಡಲು ಹೇಳಿದ್ದಾರೋ ಅಲ್ಲಿ ರಸ್ತೆ ಬಂದ್​ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಒಟ್ಟನಲ್ಲಿ ಪ್ರತಿದಿನ ಜಯದೇವ ಆಸ್ಪತ್ರೆಗೆ ಸಾವಿರಾರು ಜನರು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಇದ್ದ ರಸ್ತೆಯನ್ನೂ ಬಂದ್​ ಮಾಡಿದ್ದು ಮಾತ್ರ ಜನರ ಆಕ್ರೋಶಕ್ಕೆ ಕಾರಣವಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *