ಬೆಂಗಳೂರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರಿನ ಶಾಖೆಯೊಂದಕ್ಕೆ ಸುಮಾರು 8 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಬಿಐ ಕೊನೆಗೂ ಬಂಧಿಸಿದೆ. ಆಧುನಿಕ ಇಮೇಜ್ ಸರ್ಚ್ ಟೂಲ್ಗಳನ್ನು ಬಳಸಿಕೊಂಡು ಸಿಬಿಐ ಆರೋಪಿಯ ಜಾಡು ಪತ್ತೆಹೆಚ್ಚಿರುವುದು ವಿಶೇಷ. ಆರೋಪಿ ಮಣಿ ಎಂ ಶೇಖರ್ ರನ್ನು ಮಧ್ಯಪ್ರದೇಶದ ಇಂದೋರ್ನಲ್ಲಿ ಬಂಧಿಸಲಾಗಿದೆ. ಆಕೆ ಅಲ್ಲಿ ಗುಪ್ತನಾಮ ಇಟ್ಟುಕೊಂಡು ವಾಸಿಸುತ್ತಿದ್ದರು.

ಬ್ಯಾಂಕ್ಗೆ ವಂಚನೆ ಪ್ರಕರಣದ ಹಿನ್ನೆಲೆ
ಇಂಡೋ ಮಾರ್ಕ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರಾಮಾನುಜಂ ಮುತ್ತು ರಾಮಲಿಂಗಂ ಶೇಖರ್ ಅಲಿಯಾಸ್ ಆರ್ಎಂ ಶೇಖರ್ ಮತ್ತು ಇಂಡೋ ಮಾರ್ಕ್ಸ್ ಆ್ಯಂಡ್ ಬಿಟಿಸಿ ಹೋಮ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕಿ ಮಣಿ ಎಂ ಶೇಖರ್ ವಿರುದ್ಧ 2006 ರ ಆಗಸ್ಟ್ 1 ರಂದು ಕೇಂದ್ರೀಯ ತನಿಖಾ ದಳದ ಬೆಂಗಳೂರು ಘಟಕ ಹಾಗೂ ಬ್ಯಾಂಕ್ ಭದ್ರತೆ ಮತ್ತು ವಂಚನೆಗಳ ಕೋಶ (ಬಿಎಸ್ಎಫ್ಬಿ) ಪ್ರಕರಣ ದಾಖಲಿಸಿದ್ದವು. ಆರೋಪಿಗಳು 2002 ಮತ್ತು 2005 ರ ಅವಧಿಯಲ್ಲಿ ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿದ್ದ ಮತ್ತು ಇಂಡೋ ಮಾರ್ಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಹೋದರ ಕಂಪನಿಗಳ ಹೆಸರಿನಲ್ಲಿ ನಿಧಿ-ಆಧಾರಿತವಲ್ಲದ ಮಿತಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರಿನ ಸಾಗರೋತ್ತರ ಶಾಖೆಗೆ 800 ಲಕ್ಷ ರೂ.ಗಳಷ್ಟು ವಂಚನೆ ಮಾಡಿದ್ದರು ಎಂದು ಸಿಬಿಐ ತಿಳಿಸಿದೆ.