ಚಾಮರಾಜನಗರ || ಕಬ್ಬಿನ FRP ದರ ಪುನರ್ ಪರಿಶೀಲಿಸಲು ಒತ್ತಾಯಿಸಿ ಡಿಸಿಗೆ ಮನವಿ

ಚಾಮರಾಜನಗರ || ಕಬ್ಬಿನ FRP ದರ ಪುನರ್ ಪರಿಶೀಲಿಸಲು ಒತ್ತಾಯಿಸಿ ಡಿಸಿಗೆ ಮನವಿ

ಚಾಮರಾಜನಗರ : ಕಬ್ಬಿನ ಎಫ್ಆರ್‌ಪಿ ದರವನ್ನು ಪುನರ್ ಪರಿಶೀಲಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ನಗರದಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿ ಟನ್ ಕಬ್ಬಿನ 10.25 ಇಳುವರಿಗೆ ಕೇಂದ್ರ ಸರ್ಕಾರ 2025-26ರ ಸಾಲಿಗೆ 3550 ರೂ.ನಿಗದಿ ಮಾಡಿದ್ದು ,ಇದು ಅವೈಜ್ಞಾನಿಕವಾಗಿದೆ. ಕೇವಲ ಪ್ರತಿ ಟನ್ ಗೆ 150 ರೂ. ಮಾತ್ರ ಹೆಚ್ಚುವರಿ ಮಾಡಲಾಗಿದೆ. ಉತ್ಪಾದನಾ ವೆಚ್ಚ ಹಾಗೂ ಕಟಾವು ಕೂಲಿ, ಸಾಗಾಣಿಕೆ, ರಸಗೊಬ್ಬರ, ಕೂಲಿ ಕಾರ್ಮಿಕರ ವೆಚ್ಚ ಎಲ್ಲವೂ ಹೆಚ್ಚಳವಾಗಿದೆ. ಹೀಗಿರುವಾಗ ಪ್ರತಿ ಟನ್ ಕಬ್ಬಿಗೆ 150ರೂರಂತೆ ಒಂದು ಕೆಜಿ ಕಬ್ಬಿಗೆ ಕೇವಲ 15 ಪೈಸೆ ಮಾತ್ರ ಜಾಸ್ತಿ ಮಾಡಿದೆ. ಕೇಂದ್ರ ಸರ್ಕಾರ ಬೆಲೆ ನಿಗದಿಯಲ್ಲಿ ಸಿಎಸಿಪಿ ವರದಿಯಂತೆ 4,500 ರೂ.ನಿಗದಿ ಮಾಡಬೇಕಾಗಿತ್ತು. ಆದರೆ ಬಂಡವಾಳಶಾಹಿಗಳು ಹಾಗೂ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ಕೇವಲ ಪ್ರತಿ ಟನ್ ಕಬ್ಬಿಗೆ 150 ರೂಪಾಯಿ ಮಾತ್ರ ಹೆಚ್ಚುವರಿ ಮಾಡಿದೆ. ಕೂಡಲೇ ಇದರ ಮರು ಪರೀಕ್ಷೆ ಮಾಡಬೇಕು.

ರಾಜ್ಯ ಸರ್ಕಾರ ಈ ಬೆಲೆಯನ್ನು ಒಪ್ಪದೆ ಪುನರ್ ಪರಿಶೀಲನೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ರಾಜ್ಯದಲ್ಲಿನ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಎಫ್ ಆರ್ ಪಿ ದರದ ಪುನರ್ ಪರಿಶೀಲನೆಗೆ ಆಗ್ರಹಿಸಬೇಕು. ಸಕ್ಕರೆ ಕಾರ್ಖಾನೆಗಳ ಮುಂದೆ ಎಪಿಎಂಸಿ ಹಾಗೂ ಸಹಕಾರ ಇಲಾಖೆಯ ಮುಖಾಂತರ ತೂಕದ ಯಂತ್ರಗಳನ್ನು ಅಳವಡಿಸಬೇಕು. ತೂಕವಾದ ತಕ್ಷಣ ರೈತರಿಗೆ ಡಿಜಿಟಲ್ ಎಸ್ಎಂಎಸ್ ಸಂದಾಯವಾಗುವಂತೆ ಕ್ರಮ ಕೈಗೊಳ್ಳಬೇಕು.

ಕಾರ್ಖಾನೆ ಮತ್ತು ರೈತರ ನಡುವೆ ದ್ವಿಪಕ್ಷಿಯ ಒಪ್ಪಂದ ಪತ್ರ ಜಾರಿಯಾಗಬೇಕು. ಇಳುವರಿಯಲ್ಲಿನ ಮೋಸವನ್ನು ತಪ್ಪಿಸಲು ಸ್ಥಳೀಯ ರೈತ ಮುಖಂಡರು ಹಾಗೂ ತಜ್ಞರ ಸಮಿತಿಯನ್ನು ರಚಿಸಬೇಕು. ಸಕ್ಕರೆ ಕಾರ್ಖಾನೆಗಳ ಆದಾಯ ಪತ್ರವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಿಶೀಲಿಸಿ, ಹೆಚ್ಚುವರಿ ಲಾಭವನ್ನು ರೈತರಿಗೆ ಹಂಚಲು ಕ್ರಮ ಕೈಗೊಳ್ಳಬೇಕು. ಕಟಾವು ಸಾಗಾಣಿಕೆಯನ್ನು ಸಕ್ಕರೆ ಕಾರ್ಖಾನೆಗಳು ಬರಿಸುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ತಕ್ಷಣ ಕಬ್ಬು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು. ಕಳೆದ ಸಾಲಿನ 950 ಕೋಟಿ  ಬಾಕಿಯನ್ನು ರೈತರಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಮಲಿಯೂರು ರಾಮನಕೆರೆಗೆ ನೀರು ತುಂಬಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರಿ ಕೆರೆಕಟ್ಟೆಗಳ ಒತ್ತುವರಿ ಆಗಿರುವುದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರೈತರ ಜತೆಗೂಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ಮುಖಂಡರಾದ ಪ್ರಕಾಶ್ ಗಾಂಧಿ, ಗುರುವಿನಪುರ ಚಂದ್ರು, ಆನಂದ, ಹೂನಹಳ್ಳಿ ಬಸವಣ್ಣ, ಬಸವರಾಜು, ಪಿ.ಮರಹಳ್ಳಿ ಶಿವಣ್ಣ, ಉರದಹಳ್ಳಿ ರಾಮಣ್ಣ ಇದ್ದರು.

Leave a Reply

Your email address will not be published. Required fields are marked *