ಬೆಂಗಳೂರು: ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ರಾಜ್ಯದ 16 ಜಿಲ್ಲೆಗಳಲ್ಲಿ ಸುಲಭವಾಗಿ, ಗುಣ್ಣಮಟ್ಟದ ಕೀಮೋಥೆರಪಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, “ಕ್ಯಾನ್ಸರ್ ರೋಗ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಹೀಗಾಗಿ, ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರ ಆರಂಭಿಸಲಾಗುವುದು. ಪ್ರತಿ ವರ್ಷ 70 ಸಾವಿರ ಕ್ಯಾನ್ಸರ್ ಖಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ರೋಗಿಗಳು ಬೆಂಗಳೂರಿಗೆ ಬರಬೇಕು. ಬಡವರು ಕಿದ್ವಾಯಿಯಂತಹ ಸಂಸ್ಥೆಗಳಿಗೆ ಬರಬೇಕು. ಕೀಮೋ ಥೆರಪಿಗಾಗಿ 60% ರೋಗಿಗಳು 100 ಕಿ.ಮೀ. ಪ್ರಯಾಣ ಮಾಡಬೇಕು. ಸಮಯ ಮತ್ತು ತೊಂದರೆ, ಖರ್ಚು ಹೆಚ್ಚಾಗುತ್ತಿದೆ. ಹಾಗಾಗಿ ಬಡವರಿಗೆ ಅನುಕೂಲ ಆಗಲೆಂದು ಈ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ” ಎಂದು ಹೇಳಿದರು.
“ಕಳೆದ ಬಜೆಟ್ನಲ್ಲಿ ಕೀಮೋ ಥೆರಪಿ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದೆವು. ಶುಕ್ರವಾರ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಪ್ರಾರಂಭಿಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಉದ್ಘಾಟನೆ ಮಾಡಲಿದ್ದಾರೆ” ಎಂದು ಮಾಹಿತಿ ನೀಡಿದರು.
“ಕ್ಯಾನ್ಸರ್ ಪತ್ತೆಯಾಗಿದೆ ಅನ್ನುವವರು ಕೀಮೋ ಥೆರಪಿ ಪಡೆಯಬಹುದು. ಎಲ್ಲಾ ರೀತಿಯ ತರಬೇತಿ ಮಾಡಲಾಗಿದೆ. ಮೆಡಿಕಲ್ ಅಂಕಾಲಜಿಸ್ಟ್ ಮಾಡಿದ್ದೇವೆ. ನರ್ಸ್ಗಳಿಗೆ ತರಬೇತಿ ನೀಡುತ್ತಿದ್ದೇವೆ. ಪ್ರತಿ ಆಸ್ಪತ್ರೆಯಲ್ಲಿ 10 ಬೆಡ್ ಮೀಸಲಿಡಲಾಗಿದೆ. ಇಬ್ಬರು ನರ್ಸ್ಗಳು ಇರ್ತಾರೆ. ಉಚಿತ ಚಿಕಿತ್ಸೆಗೆ ತುಂಬಾ ಅನುಕೂಲ ಆಗಲಿದೆ. ಬಿಪಿಎಲ್ ಕುಟುಂಗಳಿಗೆ ಉಚಿತವಾಗಿ ಆಗಲಿದೆ” ಎಂದು ತಿಳಿಸಿದರು.
“ಕೋವಿಡ್ ಪ್ರಕರಣಗಳ ಕುರಿತು ಮಾತನಾಡಿದ ಸಚಿವರು, ಯಾರೂ ಗಾಬರಿ ಪಡುವ ಅಗತ್ಯವಿಲ್ಲ. 16 ಆಕ್ಟಿವ್ ಕೇಸ್ ಇದಾವೆ ಅಷ್ಟೇ. ಮಾನಿಟರ್ ಮಾಡಿ ಅಂತಾ ಹೇಳಿದ್ದೇವೆ. ಕೇಂದ್ರದಿಂದ ಯಾವುದೇ ಮಾರ್ಗಸೂಚಿ” ಬಂದಿಲ್ಲ ಎಂದರು.
ರಾಜ್ಯದಲ್ಲಿ ಸಂಪೂರ್ಣವಾಗಿ ಜನೌಷಧಿ ಕೇಂದ್ರ ಸ್ಥಗಿತಗೊಳಿಸಿಲ್ಲ: “ರಾಜ್ಯದಲ್ಲಿ ಸಂಪೂರ್ಣವಾಗಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿಲ್ಲ. ಒಟ್ಟು 1,400 ಜನೌಷಧಿ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಕೇಂದ್ರಗಳನ್ನು ಮಾತ್ರ ತೆರವುಗೊಳಿಸುವ ಬಗ್ಗೆ ಚರ್ಚಿಸಲಾಗಿದೆ” ಎಂದು ಹೇಳಿದರು.