ಚಿಕ್ಕಬಳ್ಳಾಪುರ || Nandi Hillಕ್ಕೆ ರೋಪ್ವೇ ಯೋಜನೆ ಬಗ್ಗೆ ಬಿಗ್ ಅಪ್ಡೇಟ್!

ಚಿಕ್ಕಬಳ್ಳಾಪುರ || Nandi Hillಕ್ಕೆ ರೋಪ್ವೇ ಯೋಜನೆ ಬಗ್ಗೆ ಬಿಗ್ ಅಪ್ಡೇಟ್!

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪ್ರೇಮಿಗಳ ಸ್ವರ್ಗ ನಂದಿ ಬೆಟ್ಟಕ್ಕೆ ಪ್ರತಿನಿತ್ಯವೂ ಪ್ರವಾಸಿಗರ ದಂಡು ಹರಿದುಬರುತ್ತದೆ. ವಾರಾಂತ್ಯದಲ್ಲಿ ಜನಜಾತ್ರೆಯೇ ಈ ಬೆಟ್ಟದಲ್ಲಿ ಕಂಡುಬರುತ್ತಿದೆ. ಈ ಹಿನ್ನೆಲೆ ಪ್ರವಾಸಿಗರ ಅನುಕೂಲಕ್ಕಾಗಿ ನಂದಿಬೆಟ್ಟಕ್ಕೆ ರೋಪ್ವೇ ಯೋಜನೆಗೆ ಸರ್ಕಾರಗಳು ಅಸ್ತು ಎಂದಿವೆ. ಇದರಿಂದ ಪ್ರವಾಸಿಗರು ಕೂಡ ಫುಲ್ ಖುಷಿಯಾಗಿದ್ದರು. ಆದರೆ ಯಾವಾಗ ರೋಪ್ವೇ ಕನಸು ಈಡೇರುತ್ತೋ ಎಂದು ಭಕಪಕ್ಷಿಗಳಂತೆ ಕಾಯುತ್ತಿದ್ದರು.

ಈ ಯೋಜನೆಗೆ ಈಗಾಗಲೇ ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಸಿಕ್ಕಿದೆ. ಅರಣ್ಯ ತೆರವಿಗೆ ಕನಿಷ್ಠ ಮರ ಕಡಿಯುವುದು ಹಾಗೂ ಕೊರೆಯುವುದು ಬೇಡ ಎಂದು ಹೇಳಲಾಗಿದೆ. ಈ ಯೋಜನೆಗಾಗಿ ಬ್ಲಾಸ್ಟಿಂಗ್ ಬೇಡ, ಕಾಡಿನೊಳಗೆ ಜೆಸಿಬಿಗಳನ್ನು ಬಳಸಬಾರದು, ಯಾವುದೇ ರೀತಿಯ ರಸ್ತೆ ನಿರ್ಮಾಣ ಮಾಡಬಾರದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಅರಣ್ಯ ಸಿಬ್ಬಂದಿ ಹಾಗು ತಜ್ಞರ ಮೇಲ್ವಿಚಾರಣೆಯಲ್ಲೇ ಕಾರ್ಮಿಕರಿಂದ ಕೆಲಸ ಮಾಡಿಸಲು ಅನುಮತಿ ನೀಡಲಾಗಿದೆ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಂ.ಸಿ.ಸುಧಾಕರ್ ಅವರು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜನತೆಯ ಕನಸಿನ ನಂದಿ ರೋಪ್ವೇ ಯೋಜನೆಗೆ ಸಕಲ ಸಿದ್ಧತೆ ನಡೆದಿದೆ ಎಂದು ಅಪ್ಡೇಟ್ ನೀಡಿದ್ದಾರೆ. ಸಾರಿಗೆ, ಪಾರ್ಕಿಂಗ್, ಜನಸಂದಣಿ ನಿಯಂತ್ರಣ ಮತ್ತು ಪ್ರವಾಸಿಗರ ಅನುಕೂಲತೆಗಳ ಬಗ್ಗೆ ಸ್ಥಳ ಪರಿಶೀಲನೆ ನಡೆದಿದ್ದು, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ರಾಜೇಂದ್ರರವರು ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಹೇಳಿರುವಂತೆ 2.93 ಕಿ.ಮೀ ಉದ್ದದ ಈ ರೋಪ್ವೇ ನಿರ್ಮಾಣಕ್ಕೆ ಕೆಳ ಟರ್ಮಿನಲ್ನಲ್ಲಿ ಸುಮಾರು ಏಳು ಎಕರೆ ಭೂಮಿಯ ಅಗತ್ಯವಿದೆ. ಅದರಲ್ಲಿ 86 ಗುಂಟೆ ಅರಣ್ಯ ಭೂಮಿ ಹಾಗೂ ನಂದಿ ಬೆಟ್ಟದ ಮೇಲೆ ಎರಡು ಎಕರೆ ಭೂಮಿ ಬೇಕಾಗಬಹುದು. ಒಟ್ಟು ಯೋಜನಾ ವೆಚ್ಚ 93.40 ಕೋಟಿ ರೂಪಾಯಿ ಎನ್ನಲಾಗಿದ್ದು, ಎರಡು ವರ್ಷದೊಳಗೆ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ದಾಮೋದರ್ ರೋಪ್ವೇಸ್ ಮತ್ತು ಇನ್ಫ್ರಾ ಲಿಮಿಟೆಡ್ ಮತ್ತು ಅಶೋಕ ಬಿಲ್ಡ್ಕಾನ್ ಲಿಮಿಟೆಡ್ ಈ ನಂದಿ ರೋಪ್ವೇ ಯೋಜನೆ ಕೈಗೆತ್ತಿಕೊಂಡಿವೆ. ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಯೋಜನೆಯನ್ನು ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ, ಹಣಕಾಸು ಮತ್ತು ವರ್ಗಾವಣೆಯ ಮಾಡಲ್ನಲ್ಲಿ ಸಿದ್ಧಪಡಿಸಲಾಗುತ್ತಿದೆ. ಈ ರೋಪ್ವೇ ಯೋಜನೆಗೆ ಹಲವು ವರ್ಷಗಳ ಹಿಂದೆಯೇ ಸಿದ್ಧತೆ ಮಾಡಿಕೊಂಡಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಈ ಯೋಜನೆಗೆ ವಿರೋಧವೂ ಕೂಡ ಜೋರಾಗಿಯೇ ಇದೆ. ಕ್ಷೇತ್ರದ ಮಾಜಿ ಶಾಸಕರಾದ ಕೆ.ಸುಧಾಕರ್ ಅವರು ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ಯೋಜನೆ ರೂಪಿಸಿದ್ದು, ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ ಎಂದು ನಾಲ್ಕು ವರ್ಷಗಳ ಹಿಂದೆ ಹೇಳಿದ್ದರು. ಇದರ ಜೊತೆಗೆ ಎಕೋ-ಟೂರಿಸಂ, ಸುತ್ತಮುತ್ತಲಿನ 5 ಬೆಟ್ಟಗಳಿಗೆ ಚಾರಣ ದಾರಿಗಳು, ಪುರಾತತ್ವ ಸ್ಮಾರಕಗಳು, ನೆಲ್ಲಿಕಾಯಿ ಬಸವಣ್ಣ ಮತ್ತು ಮಂಟಪಗಳು ಸಂರಕ್ಷಣೆ, ಸುಂದರೀಕರಣ ಸೇರಿದಂತೆ ವಿಶ್ವದರ್ಜೆಯ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದಿದ್ದರು. ಹಾಗಾಗಿ ಸದ್ಯ ಈ ಯೋಜನೆ ಕೆಲಸಗಳು ಭರದಿಂದ ಸಾಗಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *