ತುಮಕೂರು:- ಕೊಬ್ಬರಿ ಧಾರಣೆ ಏರಿಕೆ ಬೆನ್ನಲ್ಲೇ ಈಗ ರೈತರಿಗೆ ಕಳ್ಳರ ಕಾಟ ಎದುರಾಗುವ ಆತಂಕ ಮನೆ ಮಾಡಿದ್ದು, ಟೆಂಡರ್ ದಿನ ಮತ್ತು ಸಮಯ ಬದಲಾವಣೆಯನ್ನು ಕೈಬಿಡುವಂತೆ ಆಗ್ರಹ ಕೇಳಿಬಂದಿದೆ.
ಹೌದು, ತುಮಕೂರು ಜಿಲ್ಲೆ ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಟೆಂಡರ್ ದಿನ ಮತ್ತು ಸಮಯ ಬದಲಾವಣೆ ಮಾಡಿರುವುದು ರೈತ ವಿರೋಧಿ ನಿರ್ಧಾರವಾಗಿದೆ ಎಂಬ ಆಗ್ರಹ ಕೇಳಿಬಂದಿದೆ.
ತುಮಕೂರು ಜಿಲ್ಲೆ ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯು ಇಡೀ ದೇಶದಲ್ಲಿ ಪ್ರಖ್ಯಾತಿ ಪಡೆದಿರುವುದು ಇತಿಹಾಸ. 1952 ರಲ್ಲಿ ಸ್ಥಾಪಿತವಾದ ಮಾರುಕಟ್ಟೆ ಇಲ್ಲಿಯವರೆಗೂ ರೈತರಿಗೆ ಯಾವುದೇ ತೊಂದರೆ ಇಲ್ಲದೆ ವ್ಯಾಪಾರ ವಹಿವಾಟು ನಡೆಸಿಕೊಂಡು ಬಂದಿದೆ.ಇದನ್ನು ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು ಸ್ವಾಗತ ಮಾಡಿವೆ.
ಆದರೆ, ಇತ್ತೀಚೆಗೆ ಆಡಳಿತ ಮಂಡಳಿ ಏಕ ಪಕ್ಷಿಯ ನಿರ್ಧಾರ ತೆಗೆದುಕೊಂಡು ಅಕ್ಟೋಬರ್ 1ರಿಂದ ಈ ಹಿಂದೆ ಇದ್ದಂತಹ ಟೆಂಡರ್ ದಿನ ಬುಧವಾರ ಮತ್ತು ಶನಿವಾರದ ಬದಲಾಗಿ ಸೋಮವಾರ ಮತ್ತು ಗುರುವಾರ ಮಾಡಿರುವುದು ಏಕ ಪಕ್ಷಿಯ ನಿರ್ಧಾರವಾಗಿದೆ ಹಾಗೂ ಸಮಯದಲ್ಲಿಯೂ ಸಹ ಬದಲಾವಣೆ ಮಾಡಿರುವುದು ರೈತರಿಗೆ ಅನಾನುಕೂಲವಾಗಿದೆ ಎಂಬ ಮಾತು ರೈತ ವರ್ಗದಲ್ಲಿ ಮೂಡಿದೆ.
ಮೊದಲಿದ್ದ ಟೆಂಡರ್ ಸಮದ ಮಧ್ಯಾಹ್ನ 2 ಗಂಟೆ ಬದಲಾಗಿ 3 ಗಂಟೆಗೆ ಟೆಂಡರ್ ಪ್ರಕ್ರಿಯೆ ಮಾಡುವ ಚಿಂತನೆ ನಡೆದಿದೆ. ಹೀಗಾಗಿ ದೇಶದ ಅನ್ನದಾತ ತಮ್ಮ ತಮ್ಮ ಮನೆಗೆ ಹಿಂದಿರುಗಲು ದಿನನಿತ್ಯದ ಕೃಷಿ ಚಟುವಟಿಕೆ ಹೈನುಗಾರಿಕೆ ಕೆಲಸಗಳಿಗೆ ತುಂಬಾ ತೊಂದರೆಯಾಗುತ್ತದೆ.
ಕಳ್ಳರ ಕಾಟದ ಭಯ:- ಅಲ್ಲದೆ ಕೆಲವು ಗ್ರಾಮಾಂತರ ಪ್ರದೇಶಗಳಿಗೆ ತಲುಪಲು ಸಾರಿಗೆ ವ್ಯವಸ್ಥೆ ಇಲ್ಲ. ಪರಿಣಾಮ ಕೊಬ್ಬರಿ ಮಾರಾಟ ಮಾಡಿ ಮನೆಗೆ ಹೋಗುವ ಸಂದರ್ಭವೂ ಕೂಡ ಇರುತ್ತದೆ. ಅಂತಹ ಸಮಯದಲ್ಲಿ ಕಳ್ಳ ಕಾಕರ ಹಾಗೂ ಕಾಡುಪ್ರಾಣಿಗಳ ಭಯದಿಂದ ರೈತರಿಗೆ ತೊಂದರೆಯಾಗುತ್ತದೆ ಎಂಬುದು ರೈತರು ಮತ್ತು ರೈತ ಸಂಘಟನೆ ಮುಖಂಡರ ಮಾತು.
ಒಂದೇ ದಿನ ರೈತರಿಗೆ ತೊಂದರೆ:- ಇದಲ್ಲದೆ ತುಮಕೂರು ಜಿಲ್ಲಾ ಎಪಿಎಂಸಿ ಮಾರುಕಟ್ಟೆಯೂ ಸಹ ಸೋಮವಾರ ಗುರುವಾರ ನಡೆಯುವುದರಿಂದ ಎರಡು ಕಡೆ ಏಕಕಾಲದಲ್ಲಿ ರೈತರು ಬರಲು ಸಾಧ್ಯವಾಗುವುದಿಲ್ಲ. ಜೊತೆಗೆ ರೈತರಿಗೆ ಇದರಿಂದ ಗೊಂದಲ ವಾತಾವರಣ ನಿರ್ಮಾಣವಾಗುತ್ತದೆ. ಇದು ಯಾರದ್ದೋ ಒತ್ತಡಕ್ಕೆ ಮಣಿದು ಏಕ ಪಕ್ಷಿಯ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತದೆ. ದಯಮಾಡಿ ತಾವುಗಳು ರೈತರಿಗೆ ಅನುಕೂಲವಾಗುವಂತೆ ಈ ಹಿಂದೆ ಇತಿಹಾಸದಿಂದ ಬಂದಿದ್ದಂತಹ ವಾರ ದಿನಗಳು ಸಮಯವನ್ನು ಯಥಾ ಸ್ಥಿತಿಯಾಗಿ ಕಾಯ್ದುಕೊಂಡು ರೈತರಿಗೆ ಅನ್ಯಾಯವಾಗದಂತೆ ಯಥಾಸ್ಥಿತಿ ಕಾಪಾಡುವಂತೆ ಒಕ್ಕೂರಲ ಆಗ್ರಹವಾಗಿದೆ.
ಹೋರಾಟದ ಎಚ್ಚರಿಕೆ:- ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ತೆಂಗು ಬೆಳೆಗಾರರು ಹಾಗೂ ರೈತ ಹಿತೈಷಿಗಳೊಂದಿಗೆ ಸೇರಿ ಉಗ್ರಹೋರಾಟವನ್ನು ಮಾಡುತ್ತೇವೆ ಎಂಬುದು ರೈತ ಸಂಘಟನೆಗಳ ಆಗ್ರಹವಾಗಿದೆ.