ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲೂ ರಾಜ್ಯ ಗುತ್ತಿಗೆದಾರರ ಬಾಕಿ ಬಿಲ್ ಸಮಸ್ಯೆ ಇನ್ನೂ ಹಾಗೆಯೇ ಮುಂದುವರೆದಿದೆ. ಸಾವಿರಾರು ಕೋಟಿ ರೂ. ಕಾಮಗಾರಿ ಬಿಲ್ ಬಾಕಿ ಉಳಿದುಕೊಂಡಿದ್ದು, ರಾಜ್ಯ ಗುತ್ತಿಗೆದಾರರು ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಎಲ್ಲಾ ಇಲಾಖೆಗಳಿಂದ ಸುಮಾರು 31,000 ಕೋಟಿ ರೂ. ಗುತ್ತಿಗೆ ಕಾಮಗಾರಿಗಳ ಬಿಲ್ ಬಾಕಿ ಉಳಿದುಕೊಂಡಿದೆ.

ಸಾವಿರಾರು ಕೋಟಿ ಕಾಮಗಾರಿಗಳ ಬಿಲ್ ಪಾವತಿಸಲು ಸರ್ಕಾರಕ್ಕೆ ಕಷ್ಟಸಾಧ್ಯವಾಗುತ್ತಿದೆ. ಗುತ್ತಿಗೆದಾರರ ಸಂಘವೂ ಬಿಲ್ ಪಾವತಿಗೆ ಇಲಾಖಾವಾರು ಅಧಿಕಾರಿಗಳು ಕಮಿಷನ್ ಕೇಳುತ್ತಿರುವ ಬಗ್ಗೆ ಹಲವು ಬಾರಿ ಆರೋಪ ಮಾಡಿದ್ದಾರೆ. ಇಲಾಖೆ ಸಚಿವರಿಗೆ ಬಿಲ್ ಪಾವತಿಗೆ ಮನವಿ ಸಲ್ಲಿಸಿದರೂ ನಿರೀಕ್ಷಿತ ಫಲ ನೀಡುತ್ತಿಲ್ಲ.
ಡಿಸಿಎಂಗೆ ಮನವಿ: ಬಿಜೆಪಿ ಅವಧಿಯಲ್ಲಿ ಸಾವಿರಾರು ಕೋಟಿ ಕಾಮಗಾರಿಗಳ ಬಿಲ್ ಬಾಕಿ ಉಳಿದುಕೊಂಡಿದೆ ಹಾಗೂ 40% ಕಮಿಷನ್ ಎಂಬ ಆರೋಪಗಳು ದೊಡ್ಡ ಸದ್ದು ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಈ ದೊಡ್ಡ ಪ್ರಮಾಣದ ಬಾಕಿ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹಂತ, ಹಂತವಾಗಿ ಬಿಲ್ ಪಾವತಿ ಮಾಡುವುದಾಗಿ ಹೇಳುತ್ತಿದ್ದರೂ ಬಾಕಿ ಪ್ರಮಾಣ ಮಾತ್ರ ಏರುತ್ತಲೇ ಇದೆ ಎಂದು ಮತ್ತೊಮ್ಮೆ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
31,000 ಕೋಟಿ ರೂ. ಕಾಮಗಾರಿ ಬಿಲ್ ಬಾಕಿ: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಹೇಳುವಂತೆ ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಎಲ್ಲಾ ಇಲಾಖೆಗಳ ಕಾಮಗಾರಿಗಳ ಸಂಬಂಧ ಸುಮಾರು 31,000 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಈ ಕಾಮಗಾರಿಗಳ ಹಣ ಬಾಕಿ ಇದೆ. ಅದರಲ್ಲೂ ಲೋಕೋಪಯೋಗಿ ಇಲಾಖೆ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಮಗಾರಿಗಳ ಬಿಲ್ ಬಾಕಿ ಆಗಿದೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ನೀಡಿದ ಬಾಕಿ ಬಿಲ್ಗಳ ಅಂಕಿ-ಅಂಶದ ಪ್ರಕಾರ, ಜಲಸಂಪನ್ಮೂಲ ಇಲಾಖೆಯಲ್ಲಿ ಸುಮಾರು 12,000 ಕೋಟಿ ಬಾಕಿ ಬಿಲ್ ಉಳಿದಿದೆ. ಹಾಗೆಯೇ, ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 8,700 ಕೋಟಿ ರೂ., ಬಿಬಿಎಂಪಿ ಗುತ್ತಿಗೆದಾರರಿಗೆ ಸುಮಾರು 3,500 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯಲ್ಲಿ ಸುಮಾರು 2,900 ಕೋಟಿ ರೂ. , ಕ್ರೆಡಿಲ್, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಸುಮಾರು 3,500 ಕೋಟಿ ರೂ., ಕೊಳೆಗೇರಿ ಹಾಗೂ ವಸತಿ ಇಲಾಖೆಯಲ್ಲಿ ಸುಮಾರು 400 ಕೋಟಿ ರೂ. ಕಾಮಗಾರಿಗಳ ಬಿಲ್ಗಳು ಬಾಕಿ ಉಳಿದುಕೊಂಡಿವೆ ಎಂದು ಗುತ್ತಿಗೆದಾರರ ಸಂಘ ತಿಳಿಸಿದೆ.
ಬಿಲ್ ಪಾವತಿಯಲ್ಲಿ ಜೇಷ್ಠತೆ ಪಾಲನೆ ಇಲ್ಲ: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಬಿಲ್ ಪಾವತಿಯಲ್ಲಿ ಜೇಷ್ಠತೆ ಪಾಲಿಸಲು ಒತ್ತಾಯಿಸಿದೆ. ಹಲವು ಬಾರಿ ಮನವಿ ಮಾಡಿದ್ದರೂ ಬಿಲ್ ಪಾವತಿಯಲ್ಲಿ ಜೇಷ್ಠತೆ ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ನಾಲ್ಕು ನೀರಾವರಿ ನಿಗಮಗಳಲ್ಲಿ ಸುಮಾರು 3 ವರ್ಷಗಳಿಂದ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಣ ಬಿಡುಗಡೆ ಇಲ್ಲದೆ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರ 50 ಲಕ್ಷ ರೂ.ಗಳಿಂದ 3 ಕೋಟಿ ರೂ.ವರೆಗೂ ಇರುವ ಬಾಕಿ ಬಿಲ್ಗಳನ್ನು ವಿಶೇಷವಾಗಿ ಪರಿಗಣಿಸಬೇಕೆಂದು ಸಂಘ ಮನವಿ ಮಾಡಿದೆ.
ಪಾರದರ್ಶಕತೆ 2019ರ ಪರಿಷ್ಕೃತ ಕಾಯ್ದೆಯನ್ನು ಪಾಲಿಸುತ್ತಿಲ್ಲ. ಅದರ ಪ್ರಕಾರ 80% ಜೇಷ್ಠತೆ ಆಧಾರದ ಮೇಲೆ, 20% ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ ಅಭಿಯಂತರರ ವಿವೇಚನೆಯಂತೆ ಪಾವತಿ ಮಾಡಬೇಕು ಎಂದು ಸಂಘ ಮನವಿ ಮಾಡುತ್ತಿದೆ. ಇಎಂಡಿ ಮತ್ತು ಸೆಕ್ಯೂರಿಟಿ ಡೆಪಾಸಿಟ್ಸ್ ಹಣವನ್ನು ಜಲಸಂಪನ್ಮೂಲ ಇಲಾಖೆಯ ನಾಲ್ಕು ನಿಗಮಗಳೂ ಉಪಯೋಗಿಸಿಕೊಂಡಿವೆ. ಸಂಬಂಧಪಟ್ಟ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳನ್ನು ಹಲವು ಬಾರಿ ವಿಚಾರಿಸಿದಾಗ ಮೇಲ್ಕಂಡ ಹಣಕ್ಕೆ ಸರ್ಕಾರದಿಂದ ಎಲ್ಒಸಿ ಬಿಡುಗಡೆ ಮಾಡಬೇಕೆಂದು ಹಾರಿಕೆ ಉತ್ತರ ಕೊಡುತ್ತಿದ್ದು, ಕಾಮಗಾರಿ ಮುಗಿದು 3-4 ವರ್ಷಗಳಾದರೂ ಇಎಂಡಿ ಮತ್ತು ಸೆಕ್ಯೂರಿಟಿ ಡೆಪಾಸಿಟ್ಸ್ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿಲ್ಲ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ.
ಲಿಪ್ಟ್ ಇರಿಗೇಷನ್ ಕಾಮಗಾರಿಗಳಲ್ಲಿ ಬಲಾಢ್ಯ ಗುತ್ತಿಗೆದಾರರು ಟೆಂಡರ್ಗೆ ಇಟ್ಟ ಮೊತ್ತಕ್ಕಿಂತ ಕಾಮಗಾರಿ ಮುಗಿಯುವುದರೊಳಗೆ ತಮಗೆ ಅನುಕೂಲವಾಗುವ ರೀತಿಯಲ್ಲಿ ಟೆಂಡರ್ಗೆ ಸಂಬಂಧಿಸಿದ ಪರಿಷ್ಕೃತ ದರಪಟ್ಟಿಯನ್ನು ತಯಾರಿಸಿ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮೋದನೆ ಮಾಡಿಸಿಕೊಳ್ಳುತ್ತಿದ್ದಾರೆ. ಕಾಮಗಾರಿಗಳು ಮುಕ್ತಾಯ ಸಮಾಪನ ವರದಿಯನ್ನು (ಎನ್.ಓ.ಸಿ.) ಕಾರ್ಯಪಾಲಕ ಹಾಗೂ ಅಧೀಕ್ಷಕ ಇಂಜಿನಿಯರ್ಗಳಿಗೆ 2 ಕೋಟಿ ರೂ.ಗಳವರೆಗೂ ಅನುಮೋದನೆ ನೀಡಲು ಅವಕಾಶ ನೀಡಬೇಕೆಂದು ಹಾಗೂ ಇದರಿಂದ ಸಣ್ಣ ಗುತ್ತಿಗೆದಾರರಿಗೆ ಅನುಕೂಲವಾಗುತ್ತದೆ ಎಂದು ಗುತ್ತಿಗೆದಾರರ ಸಂಘ ಒತ್ತಾಯಿಸಿದೆ.
30% ಬಾಕಿ ಬಿಲ್ ಪಾವತಿ ಭರವಸೆಯೂ ಈಡೇರಿಲ್ಲ: ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ 30% ಬಾಕಿ ಬಿಲ್ ಪಾವತಿ ಮಾಡುವಂತೆ ಮನವಿ ಮಾಡಿದ್ದರೂ, ಈವರೆಗೆ ಬೇಡಿಕೆಗಳಿಗೂ ಸ್ಪಂದನೆ ಸಿಕ್ಕಿಲ್ಲ. ಶೇ.30 ಬಾಕಿ ಬಿಲ್ ಪಾವತಿ ಆಶ್ವಾಸನೆ ಈಡೇರಿಲ್ಲ ಎಂಬುದು ಗುತ್ತಿಗೆದಾರರ ಆರೋಪವಾಗಿದೆ. ಮಾರ್ಚ್ನಲ್ಲಿ ಸಿಎಂರನ್ನು ಭೇಟಿಯಾಗಿ ಬಾಕಿ ಇರುವ ಬಿಲ್ನ ಅರ್ಧದಷ್ಟನ್ನು ತಕ್ಷಣ ಪಾವತಿಸಲು ಅನುದಾನ ಒದಗಿಸುವಂತೆ ಒತ್ತಾಯಿಸಿದ್ದರು. ಆದರೆ, ಅದಕ್ಕೆ ನಿರಾಕರಿಸಿದ್ದ ಸಿಎಂ ಸಿದ್ದರಾಮಯ್ಯ, ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ತೀರ್ಮಾನಿಸಬೇಕಾಗುತ್ತದೆ ಎಂದು ತಿಳಿಸಿದ್ದರು.
ಎಪ್ರಿಲ್ ತಿಂಗಳಲ್ಲಿ ಸಾಧ್ಯವಾದಷ್ಟು ಬಾಕಿ ಬಿಲ್ಗಳನ್ನು ಪಾವತಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನವಿಲ್ಲದಿದ್ದರೂ, ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡಿದ್ದು, ಕಾಮಗಾರಿ ಪ್ರಾರಂಭಿಸಿದ ಕಾರಣದಿಂದಾಗಿ ಬಾಕಿ ಬಿಲ್ ಮೊತ್ತ ಹೆಚ್ಚಿದೆ. ಇದಕ್ಕೆ ನಮ್ಮ ಸರ್ಕಾರ ಹೊಣೆಯಾಗಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದರು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಬಾಕಿ ಬಿಲ್ ಪಾವತಿಯಾಗಿಲ್ಲ ಎನ್ನುತ್ತಾರೆ ಗುತ್ತಿಗೆದಾರರ ಸಂಘದ ಪ್ರಮುಖರು.
ಡಿಸಿಎಂ ಭೇಟಿಯಾದ ಗುತ್ತಿಗೆದಾರರ ಸಂಘ: ರಾಜ್ಯ ಗುತ್ತಿಗೆದಾರರ ಸಂಘ ಮಂಗಳವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಬಾಕಿ ಬಿಲ್ ಬಿಡುಗಡೆಗೆ ಮತ್ತೆ ಮನವಿ ಮಾಡಿದೆ. ಜೇಷ್ಠತೆ ಮೇಲೆ ಹಣ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಇದೆ. ಆದರೆ ಅದನ್ನು ಪಾಲಿಸುತ್ತಿಲ್ಲ. ಅಧಿಕಾರಿಗಳು ತಮಗೆ ಬೇಕಾದ ಹಾಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ದೂರು ನೀಡಿದ್ದೇವೆ ಎಂದು ಸಂಘದ ಅಧ್ಯಕ್ಷ ಆರ್.ಮಂಜುನಾಥ್ ತಿಳಿಸಿದ್ದಾರೆ.
ಬಾಕಿ ಬಿಲ್ ಹಣ ಬೇರೆ ರೂಪದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರ ಹಣ ಬಾಕಿ ಇದ್ದು, ಹಣ ಬಿಡುಗಡೆ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ 12,000 ಕೋಟಿ ರೂ. ಬಾಕಿ ಇದೆ. ಒಟ್ಟು ಎಂಟು ಇಲಾಖೆಗಳ ಜವಾಬ್ದಾರಿಯನ್ನು ಡಿಸಿಎಂ ವಹಿಸಿಕೊಂಡಿದ್ದಾರೆ. ಎರಡ್ಮೂರು ತಿಂಗಳಲ್ಲಿ ಹಣ ಬಿಡುಗಡೆಯ ಭರವಸೆ ನೀಡಿದ್ದಾರೆ. ನಾವು ಕಾದು ನೋಡುತ್ತೇವೆ ಎಂದು ಆರ್.ಮಂಜುನಾಥ್ ಮಾಹಿತಿ ನೀಡಿದರು.