ದಾವಣಗೆರೆ: ಕೆಲವು ಪ್ರಕರಣಗಳು ಬೇಗ ಬೆಳಕಿಗೆ ಬಂದ್ರೆ, ಇನ್ನೂ ಕೆಲವು ತಡವಾಗಿ ಬೆಳಕಿಗೆ ಬಂದಿರುವ ಘಟನೆಗಳು ನಡೆದಿವೆ. ಹಾಗೆಯೇ ಇದೀಗ 6 ತಿಂಗಳ ಬಳಿಕ ನ್ಯಾಮತಿ ಎಸ್ಬಿಐ ಬ್ಯಾಂಕ್ ದರೋಡೆ ಕೇಸ್ ಟ್ವಿಸ್ಟ್ ಪಡೆದುಕೊಂಡಿದೆ. 2024 ಅಕ್ಟೋಬರ್ 26ರಂದು ನ್ಯಾಮತಿ ಪಟ್ಟಣದಲ್ಲಿರುವ ಎಸ್ಬಿಐ ಬ್ಯಾಂಕ್ನಲ್ಲಿ ಕಳ್ಳತನ ನಡೆದಿತ್ತು. ಇದೀಗ ಕಳ್ಳರನ್ನು ಬಲೆಗೆ ಬೀಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಆರೋಪಿಗಳು ಬ್ಯಾಂಕ್ನಲ್ಲಿ ಬೇಕರಿ ಬ್ಯುಸಿನೆಸ್ ಮಾಡಲು ಸಾಲ ಕೇಳಿದ್ದರು. ಸಾಲ ಕೊಡಲು ಬ್ಯಾಂಕ್ ಸಿಬ್ಬಂದಿ ನಿರಾಕರಿಸಿದ್ದು, ಬ್ಯಾಂಕ್ ಅನ್ನು ದೋಚಿದ್ದರು. ಈ ಕಳ್ಳರು ಹಲವಾರು ಸಿನಿಮಾ, ಧಾರಾವಾಹಿ, ಯುಟ್ಯೂಬ್ ವಿಡಿಯೋ ನೋಡಿ ಕಳ್ಳತನಕ್ಕೆ ಪ್ಲಾನ್ ಮಾಡಿಕೊಂಡು ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿದ್ದಾರೆ.
ಕೊನೆಗೂ ದಾವಣಗೆರೆ ಪೊಲೀಸರು ಈ ಪ್ರಕರಣವನ್ನು ಬೇಧಿಸಿದ್ದು, 13 ಕೋಟಿ ರೂಪಾಯಿ ಮೌಲ್ಯದ 17 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ನಗರದ ಎಸ್ಪಿ ಕಚೇರಿಯಲ್ಲಿ ಚಿನ್ನವನ್ನು ಇಡಲಾಗಿತ್ತು. ಇನ್ನು ಈ ಪ್ರಕರಣ ಭೇದಿಸಿದ ಬಗ್ಗೆ ಐಜಿ ರಜನೀಕಾಂತೆಗೌಡರು ಮಾತನಾಡಿದ್ದಾರೆ. ಈ ಕಳ್ಳತನದಲ್ಲಿ ಭಾಗಿಯಾಗಿದ್ದ 6 ಜನರಲ್ಲಿ ತಮಿಳುನಾಡಿನ ಮೂವರು, ನ್ಯಾಮತಿ ಮೂಲದ ಮೂವರು ಇದ್ದಾರೆ. ವಿಜಯಕುಮಾರ್ (30), ಅಜಯ್ ಕುಮಾರ್ (28,) ಅಭಿಷೇಕ್ (23), ಚಂದ್ರು (23), ಮಂಜುನಾಥ್ (32), ಪರಮಾನಂದ (30) ಬಂಧಿತ ಆರೋಪಿಗಳು. ಆರೋಪಿ ವಿಜಯ್ಕುಮಾರ್ ಬೇಕರಿ ಉದ್ಯಮ ಉನ್ನತ ಮಟ್ಟಕ್ಕೆ ಏರಿಸಲು ಸಾಲಕ್ಕಾಗಿ ಬ್ಯಾಂಕ್ಗೆ ಅರ್ಜಿ ಸಲ್ಲಿಕೆ ಮಾಡಿದ್ದ. ಈತನ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಿದ್ದರಿಂದ ಸಾಲದ ಅರ್ಜಿ ವಜಾಗೊಂಡಿತ್ತು. ಇದರಿಂದ ಕಂಗಾಲಾಗಿದ್ದ ವಿಜಯ್ ಕುಮಾರ್ ಬ್ಯಾಂಕ್ ಕಳ್ಳತನಕ್ಕೆ ಪ್ಲಾನ್ ಹಾಕಿಕೊಂಡು ಈ ಗ್ಯಾಂಗ್ ಸೃಷ್ಟಿಸಿದ್ದ.
ತಮಿಳುನಾಡಿನವರಾದ ವಿಜಯ್ ಕುಮಾರ್, ಅಜಯ್ ಕುಮಾರ್ ಮತ್ತು ಪರಮಾನಂದ ನ್ಯಾಮತಿಯಲ್ಲಿಯೇ ಕಳೆದ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ತಮಿಳುನಾಡು ಮೂಲದ ಸಹೋದರರು ಬೇಕರಿ ವ್ಯಾಪಾರ ಮಾಡುತ್ತಿದ್ದರು. ಆದರೆ ಬ್ಯಾಂಕ್ ಮ್ಯಾನೇಜರ್ ಲಂಚ ಕೇಳಿದ್ದಕ್ಕೆ ದರೋಡೆಗೆ ಇಳಿದರು ಎನ್ನಲಾಗಿದೆ. ನ್ಯಾಮತಿ ಎಸ್ಬಿಐ ಬ್ಯಾಂಕ್ನ ಹಿಂದೆ ಕಾಡು ರೀತಿಯಲ್ಲಿ ಮರ ಗಿಡಗಳು ಬೆಳೆದಿರುವುದು ದರೋಡೆಗೆ ಅನುಕೂಲವಾಗಿದೆ. ದರೋಡೆಗಾಗಿ ಸುಮಾರು 4 ಕಿಲೋ ಮೀಟರ್ ದೂರ ನಡೆದುಕೊಂಡೇ ಬಂದಿದ್ದ ಆರೋಪಿಗಳು ಬ್ಯಾಂಕಿನ ಮುಖ್ಯದ್ವಾರವನ್ನು ಒಡೆದು ಒಳನುಗ್ಗಿದ್ದರು. ಆಭರಣಗಳನ್ನು ಸಂಗ್ರಹಿಸಿಡಲಾಗಿದ್ದ ಕಬೋರ್ಡ್ಗಳನ್ನು ಗ್ಯಾಸ್ ಕಟ್ಟರ್ ಬಳಸಿ ಕೋಟ್ಯಾಂತರ ರೂಪಾಯಿ ಮೌಲ್ಯದ 22 ಕೆಜಿ ಆಭರಣಗಳನ್ನು ದರೋಡೆ ಮಾಡಿಕೊಂಡು ಎಸ್ಕೇಪ್ ಆಗಿದ್ದರು. ಕಳ್ಳರ ಗ್ಯಾಂಗ್ ದರೋಡೆಯ ಸುಳಿವು ಸಿಗಬಾರದು ಎಂದು ಬ್ಯಾಂಕ್ನ ತುಂಬೆಲ್ಲಾ ಖಾರದ ಪುಡಿ ಎರಚಿ ಸಾಕ್ಷಿಗಳನ್ನು ನಾಶಪಡಿಸುವ ಯತ್ನ ಮಾಡಿದ್ದರು. ಇದೇ ಮೊದಲ ಬಾರಿಗೆ ಈ ದರೋಡೆ ಪ್ರಕರಣದಲ್ಲಿ ಆರೋಪಿಗಳು ಭಾಗಿ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬ್ಯಾಂಕ್ನಲ್ಲಿ ಕದ್ದಿದ್ದ ಚಿನ್ನಾಭರಣಗಳನ್ನು ಆರೋಪಿಗಳು ತಮಿಳುನಾಡಿನ ಮಧುರೈ ಪಕ್ಕದ ಹಳ್ಳಿ ತೆಗೆದುಕೊಂಡು ಹೋಗಿದ್ದರು. ಆ ತೋಟದ ಭಾವಿಯಲ್ಲಿ ಮುಚ್ಚಿಟ್ಟಿದ್ದರು. ಈ ಕಳ್ಳತನಕ್ಕೆ ಕಳ್ಳರ ಗ್ಯಾಂಗ್ ಗಡಿಚೌಡಮ್ಮಗೆ ಅಷ್ಟದಿಗ್ಬಂಧನ ಪೂಜೆ ಮಾಡಿಸಿದ್ದರಂತೆ.