ದಾವಣಗೆರೆ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಈ ನಡುವೆ ನಾನಾ ಕಾರಣಗಳಿಂದ ರಜೆಗೆ ಬಂದಿದ್ದ ಕರ್ನಾಟಕದ ಯೋಧರು ರಜೆಯನ್ನು ಮೊಟಕುಗೊಳಿಸಿ ಭಾರತೀಯ ಸೇನೆಯ ತುರ್ತು ಕರೆಯ ಮೇರೆಗೆ ಕರ್ತವ್ಯಕ್ಕೆ ವಾಪಸ್ಸಾಗಿದ್ದಾರೆ.

ವಾರ್ಷಿಕ ರಜೆಯ ಮೇಲೆ ತಮ್ಮ ಗ್ರಾಮಕ್ಕೆ ಬಂದಿದ್ದ ತೋಳಹುಣಸೆಯ ಸುಮಾರು ಆರು ಸೈನಿಕರು, ಕರ್ತವ್ಯಕ್ಕೆ ವಾಪಸ್ಸಾಗಿದ್ದಾರೆ.
ದಾವಣಗೆರೆ ನಗರದ ಹೊರವಲಯದಲ್ಲಿರುವ ಈ ಗ್ರಾಮವು, ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ 400-500 ಸೈನಿಕರ ಹುಟ್ಟೂರಾಗಿದೆ. ಹೀಗಾಗಿಯೇ ತೋಳಹುಣಸೆ ಗ್ರಾಮನ್ನು ‘ಸೈನಿಕರ ಗ್ರಾಮ’ ಎಂದು ಕರೆಯಲಾಗುತ್ತದೆ.
ಮದ್ರಾಸ್ ಸ್ಯಾಪ್ಪರ್ಸ್ನಲ್ಲಿ ನಿಯೋಜನೆಗೊಂಡಿದ್ದ ಕೃಷ್ಣ ನಾಯಕ್ ಅವರ ಸಹೋದರ ಸುನಿಲ್ ನಾಯಕ್ ಅವರು ಮಾತನಾಡಿ, ನನ್ನ ಸಹೋದರ ಏಪ್ರಿಲ್ 20 ರಂದು ಗ್ರಾಮಕ್ಕೆ ಬಂದಿದ್ದ. ಮೇ 30 ರವರೆಗೆ ರಜೆಯಲ್ಲಿದ್ದ, ಆದರೆ, ಗಡಿಯಲ್ಲಿ ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಅವರು ತಮ್ಮ ರಜೆಯನ್ನು ಮೊಟಕುಗೊಳಿಸಿ, ತಕ್ಷಣವೇ ಅಂಬಾಲದಲ್ಲಿನ ತಮ್ಮ ಕರ್ತವ್ಯಕ್ಕೆ ವಾಪಸ್ಸಾಗಿದ್ದಾರೆಂದು ಹೇಳಿದ್ದಾರೆ.
ನಮ್ಮ ಗ್ರಾಮದಲ್ಲಿ, ಪ್ರತಿ ಮನೆಯಲ್ಲೂ ಸೈನಿಕರಿದ್ದಾರೆ. ಇಲ್ಲಿನ ಬಹುತೇಕ ಸೈನಿಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರ. ಇಲ್ಲಿಯವರೆಗೆ, ಈ ಗ್ರಾಮದ 400 ಕ್ಕೂ ಹೆಚ್ಚು ಮಂದಿ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂದಿಗ್ಧ ಸಮಯದಲ್ಲಿ ನಮ್ಮ ಗ್ರಾಮದ ಸೈನಿಕರು ದೇಶಕ್ಕೆ ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದು ತಿಳಿಸಿದ್ದಾರೆ.
ಲಕ್ಷ್ಮಣ್ ನಾಯಕ್ ಮತ್ತು ಶಕುಂತಲಾ ಬಾಯಿ ಅವರ ಪುತ್ರ ರವೀಂದ್ರ ಕುಮಾರ್ ವಾರ್ಷಿಕ ರಜೆಯನ್ನು ಆನಂದಿಸುತ್ತಿದ್ದರು, ಆದರೆ ಮೇ 2 ರಂದು ಕೇರಳದಲ್ಲಿ ಕರ್ತವ್ಯಕ್ಕೆ ಮರಳಿದ್ದಾರೆ.
ನನ್ನ ಮಗ ಸೇನೆಗೆ ಸೇರಿ 15-20 ವರ್ಷಗಳಾಗಿದೆ. ಅವನು ರಜೆಯ ಮೇಲೆ ನಮ್ಮ ಹಳ್ಳಿಗೆ ಬಂದಿದ್ದ. ಆದರೆ ಗಡಿಯಲ್ಲಿನ ಸಂದಿಗ್ಧ ಪರಿಸ್ಥಿತಿಯಿಂದಾಗಿ ತುರ್ತು ಆಧಾರದ ಮೇಲೆ ವಾಪಸ್ ಕರೆಸಿಕೊಂಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ನನ್ನ ಮಗ ದೇಶಕ್ಕೆ ಸೇವೆ ಸಲ್ಲಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.