ದಾವಣಗೆರೆ: ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲ್ವೆ ಮಾರ್ಗದ ಕಾಮಗಾರಿ 2027ರ ಜನವರಿಯೊಳಗೆ ಪೂರ್ಣಗೊಳ್ಳಲಿದೆ. ಬಳಿಕ ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕೇಂದ್ರ ರೈಲ್ವೆ ಸಹಾಯಕ ಖಾತೆ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.
ಈ ಯೋಜನೆಗೆ 2011-12ರಲ್ಲೇ ಕೇಂದ್ರ ಸರ್ಕಾರದಿಂದ ಮಂಜೂರಾತಿ ಸಿಕ್ಕಿತ್ತು. ಒಟ್ಟು 2,140 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನ ಆಗುತ್ತಿದೆ. 2019ರೊಳಗೆ ಅ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಅದರೆ, ಕಾರಣಾಂತರಗಳಿಂದ ತಡವಾಗಿತ್ತು.
ಈ ಮೊದಲು ಬೆಂಗಳೂರು ತಲುಪಲು ಒಟ್ಟು 327 ಕಿ.ಮೀ ಕ್ರಮಿಸಬೇಕಾಗಿತ್ತು. ಇದೀಗ ನೂತನ ನೇರ ರೈಲು ಮಾರ್ಗದಿಂದ ಒಟ್ಟು 196 ಕಿ.ಮೀ ಮಾತ್ರ ಪ್ರಯಾಣದ ಅಗತ್ಯವಿದೆ. ಬರೊಬ್ಬರಿ 60 ಕಿ.ಮೀ ಪ್ರಯಾಣ ಕಡಿತವಾಗಲಿದೆ. ಇದರಿಂದ ಜನರಿಗೆ ಹಣ, ಸಮಯ ಹಾಗೂ ಪ್ರಯಾಣವೂ ಕಡಿಮೆಯಾಗಲಿದೆ. ಸದ್ಯ ದಾವಣಗೆರೆಯಿಂದ ವಂದೇ ಭಾರತ್ ರೈಲಿನಲ್ಲಿ 327 ಕಿ.ಮೀ ದೂರವನ್ನು 3 ಗಂಟೆ 25 ನಿಮಿಷಗಳಲ್ಲಿ ಬೆಂಗಳೂರು ತಲುಪಬಹುದಾಗಿದೆ. ಇದೀಗ ನೇರ ರೈಲು ಮಾರ್ಗದ ಮೂಲಕ 2 ಗಂಟೆಗಳಲ್ಲೇ ಜನರು ಬೆಂಗಳೂರು ಸೇರಬಹುದು.
ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಕಾಮಗಾರಿ ನಡೆಯುತ್ತಿದೆ. ದಾವಣಗೆರೆ – ಭರಮಸಾಗರ – ಚಿತ್ರದುರ್ಗ ಮಧ್ಯದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಜಮೀನಿನಲ್ಲಿ ರೈತರು ಬೆಳೆಗಳನ್ನು ಬೆಳೆದಿದ್ದು, ಅವರಿಗೆ ತೊಂದರೆಯಾಗದಂತೆ, ಕಟಾವಿನ ಬಳಿಕವೇ ರೈಲ್ವೆ ಕಾಮಗಾರಿ ಆರಂಭಿಸುವಂತೆ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಈ ಹಿಂದೆಯೇ ಸೂಚನೆ ನೀಡಿದ್ದರು.