ಶ್ರೀ ಶಾರದಾ ವಿದ್ಯಾನಿಕೇತನ್ ಶಾಲೆ ಸಮಸ್ಯೆ ಬಗೆಹರಿಸಲು ಡಿಸಿ, ಡಿಡಿಪಿಐಗೆ DCM D.K. Shivakumar ಸೂಚನೆ

ಶ್ರೀ ಶಾರದಾ ವಿದ್ಯಾನಿಕೇತನ್ ಶಾಲೆ ಸಮಸ್ಯೆ ಬಗೆಹರಿಸಲು ಡಿಸಿ, ಡಿಡಿಪಿಐಗೆ DCM D.K. Shivakumar ಸೂಚನೆ

ಬೆಂಗಳೂರು: “ವಿದ್ಯಾರಣ್ಯಪುರದ ಶ್ರೀ ಶಾರದಾ ವಿದ್ಯಾನಿಕೇತನ ಶಾಲೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಗೆ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಶಾಲೆ ಸುಗಮವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಉತ್ತರ ಡಿಡಿಪಿಐಗೆ ಸೂಚನೆ ನೀಡಿದರು.

ಬೆಂಗಳೂರಿನ ವಿದ್ಯಾರಣ್ಯಪುರದ ಎಂ ಎಸ್ ಪಾಳ್ಯದಲ್ಲಿರುವ ಶ್ರೀ ಶಾರದಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿ, ಧನಂಜಯ ಎಂಬುವರು ಅಕ್ರಮವಾಗಿ ಶಾಲೆಯನ್ನು ಕಬ್ಜ ಮಾಡಿಕೊಂಡು ಗೂಂಡಾಗಳ ನೆರವಿನಿಂದ ಶಾಲೆ ಆವರಣದಿಂದ ತಮ್ಮನ್ನು ಹೊರಗೆ ಹಾಕಿದ್ದಾರೆಂದು ದೂರಿದರು. ಈ ವೇಳೆ ಡಿಸಿಎಂ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಹಾಗೂ ಬೆಂಗಳೂರು ಉತ್ತರ ಡಿಡಿಪಿಐ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

“ಧನಂಜಯ ಎಂಬಾತ 2022ರ ಏಪ್ರಿಲ್ ತಿಂಗಳಿಂದ ನಮಗೆ ತೊಂದರೆ ನೀಡುತ್ತಿದ್ದಾರೆ. ಆಗ ಶಾಲೆ ಮೇಲೆ ದಾಳಿ ಮಾಡಿ ಶಾಲೆ ವಸ್ತುಗಳನ್ನು ಹಾನಿಗೊಳಿಸಿದ್ದರು. ನಂತರ ಮೇ ಹಾಗೂ ಜೂನ್ ತಿಂಗಳಲ್ಲಿ ಬಿಇಓ ಕಚೇರಿಯಿಂದ ನೀವು ಶಾಲೆ ನಡೆಸಲು ಅವಕಾಶ ಇಲ್ಲ ಎಂದು ಪತ್ರ ಕಳುಹಿಸಿ ಶಾಲೆ ನಡೆಸಲು ಅಡ್ಡಿಪಡಿಸಿದರು. ಶಾಲೆಯನ್ನು ಮುಚ್ಚಬೇಕು ಎಂದು ತಿಳಿಸಿದರು. ಶಾಲೆಯ ಸುತ್ತಲೂ ಕಾಪೌಂಡ್ ಗೋಡೆ ನಿರ್ಮಿಸಲು ಮುಂದಾದಾಗ ಅದನ್ನು ಕೆಡವಿದರು. ಅಷ್ಟೇ ಅಲ್ಲದೆ ಶಾಲೆ ಆವರಣದಲ್ಲಿ ಕಟ್ಟಡ ತ್ಯಾಜ್ಯ ತಂದು ಹಾಕಲು ಮುಂದಾದರು. ಇತ್ತೀಚೆಗೆ ಸುಮಾರು 50-60 ಜನರನ್ನು  ಕರೆತಂದು ದಬ್ಬಾಳಿಕೆ ನಡೆಸಿದರು. ಸಂಜೆ 5 ಗಂಟೆ ಸುಮಾರಿಗೆ ಶಾಲೆ ಗೇಟ್ ಲಾಕ್ ಮಾಡಿ ಎಲ್ಲಾ ಮಹಿಳೆಯರ ಬ್ಯಾಗ್ ಪರಿಶೀಲಿಸುವಂತೆ ತನ್ನ ಜೊತೆಯಲ್ಲಿದ್ದವರಿಗೆ ಸೂಚಿಸಿದರು. ಇದೇ ಸಮಯದಲ್ಲಿ ಶಾಲೆಯಲ್ಲಿದ್ದ ಸಿಐಟಿವಿ ಕ್ಯಾಮೆರಾ ನಾಶಮಾಡಿ, ವೈಫೈ ಸಂಪರ್ಕವನ್ನು ಕಿತ್ತು ಹಾಕಿ ನಾಶ ಮಾಡಿದರು. ಅಷ್ಟೇ ಅಲ್ಲದೆ ನಮ್ಮ ಪ್ರಮಾಣಪತ್ರಗಳನ್ನು ಹರಿದು ಹಾಕಿದರು. ನಂತರ ಪೋಲೀಸರು ಬಂದು ನಮಗೆ ರಕ್ಷಣೆ ನೀಡಿದರು. ಮೇ 29 ರಂದು ಬಂದು ಮತ್ತೆ ಶಾಲೆ ಮೇಲೆ ದಾಳಿ ಮಾಡಿ ಶಾಲೆಯ ಆಸ್ತಿ ನಾಶ ಮಾಡಿದ್ದಾರೆ” ಎಂದು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಪರಿಸ್ಥಿತಿಯನ್ನು ವಿವರಿಸಿದರು.

ಈ ವೇಳೆ ಬೆಂಗಳೂರು ಉತ್ತರ ಡಿಡಿಪಿಐ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಶಿವಕುಮಾರ್ ಅವರು, “ನಿಮ್ಮ ವ್ಯಾಪ್ತಿಯಲ್ಲಿ ಧನಂಜಯ ಎಂಬಾತ ಶಾರದಾ ವಿದ್ಯಾನಿಕೇತನ್ ಶಾಲೆ ಮೇಲೆ ದಾಳಿ ಮಾಡುತ್ತಿದ್ದಾನೆ. ನೀವು ಏನು ಮಾಡುತ್ತಿದ್ದೀರಿ? ನಿಮ್ಮ ಗಮನಕ್ಕೆ ಬಂದಿಲ್ಲ ಎಂದರೆ ಹೇಗೆ. ನನ್ನ ಬಳಿ 200ಕ್ಕೂ ಹೆಚ್ಚು ಜನ ಪೋಷಕರು, ಶಿಕ್ಷಕರು ಬಂದು ದೂರು ನೀಡುತ್ತಿದ್ದಾರೆ. ಈ ತಕ್ಷಣವೇ ಅಲ್ಲಿಗೆ ಹೋಗಿ ಸಮಸ್ಯೆ ಬಗೆಹರಿಸಿ. ನಾನು ಮಧ್ಯಾಹ್ನ ಸಮಯ ಸಿಕ್ಕರೆ ಶಾಲೆಯ ಜಾಗಕ್ಕೆ ಬಂದು ಪರಿಶೀಲನೆ ಮಾಡುತ್ತೇನೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಶಾಲೆಗೆ ಈ ರೀತಿ ಕಿರುಕುಳ ನೀಡುವುದು ಸರಿಯಲ್ಲ. ಸ್ಥಳಕ್ಕೆ ನೀವೇ ಹೋಗಿ. ಪೊಲೀಸರು ಏನಾದರೂ ಕುತಂತ್ರ ಮಾಡುತ್ತಿದ್ದಾರಾ ಎಂದು ನೋಡಿ. ಈ ಪ್ರಕರಣದ ಬಗ್ಗೆ ನನಗೆ ವರದಿ ನೀಡಬೇಕು.

 ಶಾಲೆಯವರು ಒಪ್ಪಂದ ಮಾಡಿಕೊಂಡಿರುವಂತೆ ಶಾಲೆ ನಡೆಸಲು ಅವಕಾಶ ನೀಡಬೇಕು. ತೊಂದರೆ ನೀಡುತ್ತಿರುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಸೂಚಿಸಿದರು.

“ಆತ ನಮ್ಮ ಪಕ್ಷದವನೇ ಆಗಿರಲಿ, ನಮ್ಮ ಹೆಸರು ಹೇಳಿದರೂ ಸರಿ. ಇಲ್ಲಿ ಮಕ್ಕಳ ಭವಿಷ್ಯ ಮುಖ್ಯ. ಬಿಇಓ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಆತನನ್ನು ಅಮಾನತು ಮಾಡಿ. ಶಾಲೆ ಶಾಂತಿಯುತವಾಗಿ ಯಾವುದೇ ತೊಂದರೆ ಇಲ್ಲದೆ ನಡೆಯುವಂತೆ ಮಾಡಿ” ಎಂದು ನಿರ್ದೇಶನ ನೀಡಿದರು.

ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಇಲ್ಲ:

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಯಾರೂ ಕೂಡ ಕಾನೂನು ಕೈಗೆತ್ತಿಕೊಂಡು ಶಾಲೆಯನ್ನು ಕಬ್ಜ ಮಾಡಲು ಸಾಧ್ಯವಿಲ್ಲ. ಮಕ್ಕಳ ಭವಿಷ್ಯ ಮುಖ್ಯ. ಈ ರೀತಿ ಮಾಡುವವರು ಕಾಂಗ್ರೆಸ್ ನಾಯಕರೇ ಆಗಿರಲಿ ಅಥವಾ ಬೇರೆಯವರೇ ಆಗಿರಲಿ ಯಾರನ್ನೂ ಬಿಡಬಾರದು. ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿಸಿ, ಡಿಡಿಪಿಐ ಹಾಗೂ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ” ಎಂದರು.

“ಖಾಸಗಿ ಶಾಲೆಯಾದರೂ ಅದು ಸಾರ್ವಜನಿಕ ಸಂಸ್ಥೆ. ನಾನು ಶಾಲೆಗಳನ್ನು ನಡೆಸುತ್ತಿದ್ದೇನೆ. ನಾನು ಅದರ ವಾರಸುದಾರನಾಗಿರಬಹುದು, ಆದರೆ ಮಾಲೀಕನಾಗಲು ಆಗುವುದಿಲ್ಲ. ಎಂತಹುದೇ  ಪರಿಸ್ಥಿತಿ ಬಂದರೂ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಹಿತ ಕಾಪಾಡುತ್ತೇವೆ. ಪ್ರತಿಯೊಬ್ಬರೂ ಕಾನೂನಿಗೆ ಗೌರವ ನೀಡಬೇಕು. ಇಲ್ಲಿ ಯಾರೂ ಶಾಶ್ವತ ಅಲ್ಲ” ಎಂದು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡುತ್ತೀರಾ ಎಂದು ಕೇಳಿದಾಗ, “ಈ ಸಮಸ್ಯೆ ಬಗೆಹರಿಯದಿದ್ದರೆ, ಅಗತ್ಯಬಿದ್ದರೆ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ನೂರಾರು ಸಂಖ್ಯೆಯಲ್ಲಿ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಬಂದು ಮನವಿ ಮಾಡಿದಾಗ ಜಿಲ್ಲಾ ಮಂತ್ರಿಯಾಗಿ ನಾನು ಭೇಟಿ ಮಾಡಬೇಕಾಗುತ್ತದೆ” ಎಂದು ತಿಳಿಸಿದರು.

Leave a Reply

Your email address will not be published. Required fields are marked *