ಧಾರವಾಡ || ಯತ್ನಾಳ್ ಉಚ್ಚಾಟನೆ ಹಿಂಪಡೆಯುವಂತೆ ಮೃತ್ಯುಂಜಯ ಸ್ವಾಮೀಜಿ ಒತ್ತಾಯ

ಧಾರವಾಡ || ಯತ್ನಾಳ್ ಉಚ್ಚಾಟನೆ ಹಿಂಪಡೆಯುವಂತೆ ಮೃತ್ಯುಂಜಯ ಸ್ವಾಮೀಜಿ ಒತ್ತಾಯ

ಧಾರವಾಡ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ವಿಚಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಗೊತ್ತಿಲ್ಲ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಉಚ್ಚಾಟನೆ ಕುರಿತು ಧಾರವಾಡದಲ್ಲಿ ಮಾತನಾಡಿದ ಅವರು, ಯತ್ನಾಳ್ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕಾಣದ ಕೈಗಳು ಅವರನ್ನು ಉಚ್ಚಾಟನೆ ಮಾಡುವಂತೆ ಮಾಡಿವೆ. ಯತ್ನಾಳ್ ಅವರೇ ಮುಂದೆ ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಕಾರಣದಿಂದ ಹೀಗೆ ಮಾಡಿದ್ದಾರೆ. ನಿಮ್ಮ ಕಾಲಿನ ಮೇಲೆ ನೀವೆ ಕಲ್ಲು ಹಾಕಿಕೊಳ್ಳುವ ಕೆಲಸ ಮಾಡಿದ್ದೀರಿ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದವರೇ ಹೀಗೆ ಮಾಡಿರಬಹುದು. ಇದನ್ನು ಲಿಂಗಾಯತ ಪಂಚಮಸಾಲಿ ಸಮಾಜ ಖಂಡಿಸುತ್ತದೆ ಎಂದರು.

ಯತ್ನಾಳ್ ಮೀಸಲಾತಿ ಹೋರಾಟಕ್ಕೆ ಪಕ್ಷದ ಒಳಗೆ ಹಾಗೂ ಹೊರಗಡೆ ಇದ್ದು ಹೋರಾಟ ಮಾಡಿದ್ದಾರೆ. ಉಚ್ಚಾಟನೆಯಿಂದ ಅವರು ಧೃತಿಗೆಡುವ ಅವಶ್ಯಕತೆ ಇಲ್ಲ. ಇಡೀ ಪಂಚಮಸಾಲಿ ಸಮುದಾಯ ಅವರ ಜೊತೆಗೆ ಇದೆ. ಕೂಡಲೇ ಬಿಜೆಪಿ ನಾಯಕರು ಈ ಉಚ್ಚಾಟನೆಯನ್ನು ವಾಪಸ್ ಪಡೆಯಬೇಕು. ಹಿಂಪಡೆಯದೇ ಹೋದರೆ ಎಲ್ಲ ಲಿಂಗಾಯತ ಶಾಸಕರು ಬಿಜೆಪಿ ಬಿಟ್ಟು ಹೊರ ಬನ್ನಿ ಎಂದು ಕರೆ ನೀಡಿದ ಅವರು, ಇದೇ ವಿಚಾರವಾಗಿ ನಾಳೆ (ಗುರುವಾರ) ಮಧ್ಯಾಹ್ನ 1 ಗಂಟೆಗೆ ಬೆಳಗಾವಿಯ ಗಾಂಧಿ ಭವನದಲ್ಲಿ ಸಭೆ ನಡೆಸಲಾಗುತ್ತದೆ. ಈ ಸಭೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಬಗ್ಗೆ ತಿಳಿಸಲಾಗುವುದು ಎಂದರು.

ಇದು ಪ್ರಧಾನಮಂತ್ರಿ ಹಾಗೂ ಅಮಿತ್ ಶಾ ವಿರುದ್ಧ ಪ್ರತಿಭಟನೆ ಅಲ್ಲಾ, ಪಂಚಮಸಾಲಿ ನಾಯಕತ್ವ ತುಳಿಯುವವರ ವಿರುದ್ಧ ಈ ಪ್ರತಿಭಟನೆ ನಡೆಯಲಿದೆ. ಇದಕ್ಕೆಲ್ಲ ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬವೇ ಕಾರಣ. ಬಿಜೆಪಿ ವರಿಷ್ಠರು ಕೂಡಲೇ ಉಚ್ಚಾಟನೆ ವಾಪಸ್ ಪಡೆದು ಸೂಕ್ತ ಸ್ಥಾನ ಮಾನ ನೀಡಬೇಕು. ಒಂದು ವೇಳೆ ಉಚ್ಚಾಟನೆ ವಾಪಸ್ ಪಡೆಯದೇ ಹೋದಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಹಿನ್ನಡೆ ಆಗಲಿದೆ. ಯತ್ನಾಳ್ ಪ್ರಾಮಾಣಿಕ ರಾಜಕಾರಣಿ, ನೇರ, ನಿಷ್ಠುರವಾದಿ. ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇದ್ದವರು. ನೇರವಾಗಿ ಮಾತನಾಡುವ ಏಕೈಕ ವ್ಯಕ್ತಿ ಆಗಿರುವ ಯತ್ನಾಳ್ ಅವರನ್ನು ದಿಢೀರ್ ಉಚ್ಚಾಟನೆ ಮಾಡಿದ್ದಾರೆ. ಇದನ್ನು ಲಿಂಗಾಯತ ಸಮಾಜ ಮತ್ತು ಉತ್ತರ ಕರ್ನಾಟಕ ಜನ ಖಂಡಿಸುತ್ತದೆ ಎಂದರು.

ಪಕ್ಷದ ಶಿಸ್ತು ಉಲ್ಲಂಘನೆ ಆರೋಪದಲ್ಲಿ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಪಿ ಪಕ್ಷ ಹೇಳಿದೆ. ಆದರೆ, ಪ್ರಧಾನಿ ಮತ್ತು ಪಕ್ಷದ ವರಿಷ್ಠರ ಬಗ್ಗೆ ಅವರು ಎಲ್ಲಿಯೂ ತಪ್ಪು ಹೇಳಿಕೆ ಕೊಟ್ಟಿಲ್ಲ. ಪಕ್ಷದ ಸಿದ್ಧಾಂತಗಳ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ. ಭವಿಷ್ಯದಲ್ಲಿ ನಾಯಕತ್ವಕ್ಕೆ ಏರುತ್ತಾರೆ ಅಂತಾ ಹೀಗೆ ಮಾಡಿದ್ದಾರೆ. ಕಾಣದ ದುಷ್ಟ ವ್ಯಕ್ತಿಗಳು ಇದಕ್ಕೆ ಪರೋಕ್ಷ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *