ಆಯುರ್ವೇದ ತಜ್ಞರು ಹೇಳುವ ಪ್ರಕಾರ, ಶಂಖಪುಷ್ಪ ಹೂವುಗಳನ್ನು ವಿವಿಧ ಕಾಯಿಲೆಗಳಿಂದ ಮುಕ್ತಿ ಪಡೆಯಲು ಬಳಸಲಾಗುತ್ತದೆ. ಈ ಹೂವಿನ ಚಹಾ ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿರುವುದರಿಂದ ಇದನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ಪ್ರಸ್ತುತ ಇದನ್ನು ಬ್ಲೂ ಟೀ ಎಂದು ಕರೆಯಲಾಗುತ್ತದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ . ಹಾಗಾದರೆ ಈ ಸ್ಟೋರಿ ಮೂಲಕ ಬ್ಲೂ ಟೀ ಯಿಂದ ಸಿಗುವಂತಹ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.

ಶಂಖಪುಷ್ಪ ಹೂವಿನ ಬಗ್ಗೆ ಕೇಳಿರಬಹುದು ಸಾಮಾನ್ಯವಾಗಿ ಇವುಗಳನ್ನು ದೇವರ ಪೂಜೆಯಲ್ಲಿ ಬಳಸಲಾಗುತ್ತದೆ. ಶಂಖಪುಷ್ಪವನ್ನು ಬೇರೆ ಬೇರೆ ಭಾಗದಲ್ಲಿ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಇದಕ್ಕೆ ಅಪರಾಜಿತ ಹೂವು, ಗಿರಿಕಾರ್ಣಿಕ ಮತ್ತು ಡಿಂಟೆನ್ ಎಂದೂ ಕೂಡ ಕರೆಯುತ್ತಾರೆ. ಆಯುರ್ವೇದದಲ್ಲಿ ಈ ಹೂವಿನ ಬಳಕೆಯನ್ನು ಯಥೇಚ್ಛವಾಗಿ ಮಾಡಲಾಗುತ್ತದೆ, ಅನೇಕ ಕಾಯಿಲೆಗಳಿಗೆ ಮುಕ್ತಿ ನೀಡಲು ಬಳಸಲಾಗುತ್ತದೆ. ಆದರೆ ಈ ಹೂವುಗಳಿಂದ ಕಷಾಯ ಅಥವಾ ಚಹಾ ಮಾಡುತ್ತಾರೆ ಎಂದರೆ ನಂಬುತ್ತೀರಾ? ಹೌದು. ಇತ್ತೀಚಿಗೆ ಈ ಟ್ರೆಂಡ್ ಬಹಳ ಜಾಸ್ತಿಯಾಗಿದ್ದು ಜನ ಪ್ರತಿನಿತ್ಯ ಈ ಹೂವುಗಳಿಂದ ತಯಾರಾಗುವ ಚಹಾವನ್ನು ಕುಡಿಯುತ್ತಿದ್ದಾರೆ. ಪ್ರಸ್ತುತ ಇದನ್ನು ಬ್ಲೂ ಟೀ (blue tea) ಎಂದು ಕರೆಯಲಾಗುತ್ತದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ವಿವಿಧ ರೀತಿಯ ಆರೋಗ್ಯ (Health) ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ಸ್ಟೋರಿ ಮೂಲಕ ಬ್ಲೂ ಟೀ ಯಿಂದ ಸಿಗುವಂತಹ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.
ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ
ಶಂಖಪುಷ್ಪ ಹೂವುಗಳಿಂದ ಆರೋಗ್ಯಕರವಾದ ಚಹಾವನ್ನು ತಯಾರಿಸಬಹುದು. ಇದು ವಿಶಿಷ್ಟವಾದ ನೀಲಿ ಬಣ್ಣದಿಂದ ಕೂಡಿರುವುದರಿಂದ ಇದನ್ನು ಬ್ಲೂ ಟೀ ಎನ್ನಲಾಗುತ್ತದೆ. ಈ ಚಹಾ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಕಪ್ ಬ್ಲೂ ಟೀ ಕುಡಿಯುವುದರಿಂದ ಜೀರ್ಣಕ್ರಿಯೆಯಲ್ಲಿ ಸಂಗ್ರಹವಾದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ, ಆಮ್ಲೀಯತೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಕೂಡ ಸುಲಭವಾಗಿ ಕಡಿಮೆಯಾಗುತ್ತವೆ.
ತೂಕ ಕಡಿಮೆ ಮಾಡುತ್ತದೆ
ಬ್ಲೂ ಟೀ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಬಹಳ ಒಳ್ಳೆಯದು. ಅದಲ್ಲದೆ ಈ ಚಹಾದಲ್ಲಿ ಕೆಫೀನ್ ಇರುವುದಿಲ್ಲ. ಇದರಲ್ಲಿ ಕಾರ್ಬೋಹೈಡ್ರೇಟ್ಗಳು, ಕೊಬ್ಬುಗಳು ಅಥವಾ ಕೊಲೆಸ್ಟ್ರಾಲ್ ಕೂಡ ಇರುವುದಿಲ್ಲ. ಹಾಗಾಗಿ ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಆಗಾಗ ತಿಂಡಿ ತಿನ್ನುವ ಬಯಕೆಯನ್ನು ಕೂಡ ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಪ್ರತಿದಿನ ಶಂಖಪುಷ್ಪ ಹೂವಿನ ಚಹಾವನ್ನು ಕುಡಿಯುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ತನೆ ಹೆಚ್ಚಾಗುವುದನ್ನು ತಡೆಯುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.