ದಸರಾ 2024 || ಗಜಪಡೆಗೆ ಸಿಡಿಮದ್ದು ತಾಲೀಮು : ಭಾರೀ ಶಬ್ದಕ್ಕೆ ಬೆದರಿದ ಆನೆಗಳು

ದಸರಾ 2024 || ಗಜಪಡೆಗೆ ಸಿಡಿಮದ್ದು ತಾಲೀಮು : ಭಾರೀ ಶಬ್ದಕ್ಕೆ ಬೆದರಿದ ಆನೆಗಳು

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಕುಶಾಲತೋಪು ಸಿಡಿಸಲು ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

ಪ್ರಾಣಿಗಳನ್ನ ಒಗ್ಗಿಸಲು ಮೊದಲ ಹಂತದ ತಾಲೀಮು ಗುರುವಾರ ನಡೆಯಿತು. ನಗರದ ವಸ್ತು ಪ್ರದರ್ಶನ ಆವರಣದ ಪಾರ್ಕಿಂಗ್‌ ಸ್ಥಳದಲ್ಲಿ ದಸರಾ ಗಜಪಡೆ ಹಾಗೂ ಅಶ್ವದಳಕ್ಕೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು.

ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು 21 ಬಾರಿ ಕುಶಾಲತೋಪು ಸಿಡಿಸುವ ಅಭ್ಯಾಸ ಮಾಡಲಾಯಿತು. 7 ಪಿರಂಗಿಗಳ ಮೂಲಕ ಮೂರು ಸುತ್ತಿನ ತಾಲೀಮು ನಡೆದಿದ್ದು, ತಾಲೀಮಿನಲ್ಲಿ 35 ಕುದುರೆಗಳು, ಚಿನ್ನದ ಅಂಬಾರಿ ಹೊರುವ ಅಭಿಮನ್ಯು ನೇತೃತ್ವದ 14 ಆನೆಗಳು ಭಾಗಿಯಾಗಿದ್ವು. ಕುಶಾಲತೋಪು ಸಿಡಿಸುತ್ತಿದ್ದಂತೆ ಕುದುರೆಗಳು ಬೆಚ್ಚಿ ಬಿದ್ದವು. ಕುದುರೆ ಅಡ್ಡಾದಿಡ್ಡಿ ಓಡಾಡಿದ್ದರಿಂದ ಆನೆಗಳು ಗಲಿಬಿಲಿಗೊಂಡಿತು.

ಕುಶಾಲ ತೋಪು ಸಿಡಿಸುವ ತಾಲೀಮು ಒಂದು ಗಂಟೆಗಳ ಕಾಲ ನೆರವೇರಿತು. ಪೋಲಿಸರು, ಅಶ್ವಾರೋಹಿ ದಳ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.

ಕುಶಾಲತೋಪು ಸಿಡಿಸಿದ ವೇಳೆ 14 ಆನೆಗಳಲ್ಲಿ ಒಂದಾದ ರೋಹಿತ್ ಮತ್ತು ಕೆಲವು ಕುದುರೆಗಳು ವಿಚಲಿತಗೊಂಡವು. ಕುಶಾಲತೋಪು ಸಿಡಿಸಿದ ವೇಳೆ ಹೊರಹೊಮ್ಮಿದ ಕಿವಿಗಡಚ್ಚಿಕ್ಕುವ ಸದ್ದಿಗೆ ಆನೆ ರೋಹಿತ್ ಮತ್ತು ಕುದುರೆಗಳು ಗಾಬರಿಯಾದವು. ಇನ್ನುಳಿದ ಮಹೇಂದ್ರ, ಪ್ರಶಾಂತ್, ಭೀಮಾ, ಧನಂಜಯ, ಗೋಪಿ ಹಾಗೂ ಇತರೆ ಆನೆಗಳು ಯಾವುದೇ ಅಳುಕಿಲ್ಲದೇ ಭಾಗಿಯಾಗುವ ಮೂಲಕ ಆತ್ಮಸ್ಥೈರ್ಯ ಪ್ರದರ್ಶನ ಮಾಡಿದವು.

Leave a Reply

Your email address will not be published. Required fields are marked *