ಬಂಡೀಪುರದಲ್ಲಿ ಹೆಣ್ಣಾನೆ ಸಾವು; ಆಂಥ್ರಾಕ್ಸ್​ ರೋಗ ಬಾಧಿಸಿರುವ ಶಂಕೆ

ಬಂಡೀಪುರದಲ್ಲಿ ಹೆಣ್ಣಾನೆ ಸಾವು; ಆಂಥ್ರಾಕ್ಸ್ ರೋಗ ಬಾಧಿಸಿರುವ ಶಂಕೆ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಬಾಚಹಳ್ಳಿಯಲ್ಲಿ ಹೆಣ್ಣಾನೆಯೊಂದರ ಮೃತದೇಹ ದೊರೆತಿದೆ. ಆನೆ ಆಂಥ್ರಾಕ್ಸ್ (Anthrax-ನೆರಡಿ) ಕಾಯಿಲೆಯಿಂದ ಮೃತಪಟ್ಟಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಆನೆಗೆ ಅಂದಾಜು 30 ವರ್ಷ ವಯಸ್ಸಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಹಾಗೂ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಪರಿಶೀಲನೆ ನಡೆಸಿದ್ದಾರೆ.

ಆನೆಯ ಬಾಯಿ, ಗುದದ್ವಾರ, ಕಿವಿ, ಬಾಲದಲ್ಲಿ ರಕ್ತ ಸೋರಿಕೆಯಾಗಿರುವುದು ಕಂಡು ಬಂದಿದೆ. ಪರಿಶೀಲನೆಯ ಸಮಯದಲ್ಲಿ ಪಶು ವೈದ್ಯ ಡಾ.ಮಿರ್ಜಾ ವಾಸೀಂ ಅಂಥ್ರಾಕ್ಸ್‌ ರೋಗದ ಗುಣ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬಂದಿವೆ ಎಂದಿದ್ದಾರೆ.

ಆನೆಯ ಅಂಗಾಂಗಗಳ ಮಾದರಿಗಳನ್ನು ಸಂಗ್ರಹಿಸಿ, ಬೆಂಗಳೂರಿನ ವಿಜ್ಞಾನ ಪ್ರಯೋಗ ಶಾಲೆಗೆ ಕಳುಹಿಸಲಾಗಿದೆ. ಮೃತದೇಹವನ್ನು ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ನೆರಡಿ ರೋಗ ಎಂದು ಕರೆಯುವ ಈ ಖಾಯಿಲೆ ಭಯಾನಕವಾಗಿದ್ದು, ಸಾಂಕ್ರಾಮಿಕವಾಗಿದೆ. ಜಾನುವಾರುಗಳಿಗಷ್ಟೇ ಅಲ್ಲದೇ, ಕಾಡು ಪ್ರಾಣಿಗಳಿಗೂ ಇದು ಬಾಧಿಸುತ್ತದೆ.

Leave a Reply

Your email address will not be published. Required fields are marked *