ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ದೇವ ಸ್ವರೂಪಿ ಎಂದು ನಂಬಲಾಗಿರುವ ಬಸವ( ಎತ್ತು) ನನ್ನು ಅಯೋಧ್ಯೆ ರಾಮನ ದರ್ಶನಕ್ಕಾಗಿ ಕರೆದುಕೊಂಡು ಹೋಗಲಾಗುತ್ತಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿರುವ ರಾಮನ ದರ್ಶನಕ್ಕಾಗಿ ಲಕ್ಷಾಂತರ ಜನರು ದಿನನಿತ್ಯ ಭೇಟಿ ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಸಪ್ಪನ ತೀರ್ಥಯಾತ್ರೆಗೆ ಕೈ ಹಾಕಿದ್ದು ಸುಮಾರು 30 ಲಕ್ಷದ ವೆಚ್ಚದ ವಿಶೇಷ ಬಸ್ಸನ್ನು ವಿನ್ಯಾಸ ಮಾಡಲಾಗಿದೆ. ದೊಡ್ಡಬಳ್ಳಾಪುರ ತಾಲೂಕು ಪರಮಗೊಂಡನಹಳ್ಳಿಯಲ್ಲಿರುವ ದಿನ್ನೆ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ವಾಸುದೇವ ಆಚಾರ್ ಅವರು ಈ ವಿಶೇಷ ಸಾಹಸಕ್ಕೆ ಮುಂದಾಗಿದ್ದಾರೆ. ರಾಮನ ಭಕ್ತರಾಗಿರುವ ಅವರು ಕಳೆದ ಒಂದುವರೆ ವರ್ಷದಿಂದ ಬಸಪ್ಪ ಎಂಬ ಎತ್ತನ್ನು ಸಾಕುತ್ತಿದ್ದು ಹನುಮಂತ ದೇವರು ಎಂಬ ಹೆಸರಿಟ್ಟಿರುವ ಅವರು ಬಸಪ್ಪನಿಗೆ ದೇವರ ಪಟ್ಟ ನೀಡಿದ್ದಾರೆ ಈಗ ಹನುಮಂತನಿಗೆ ರಾಮನ ದರ್ಶನ ಮಾಡಿಸಲು ಹೊರಟಿದ್ದಾರೆ. ಈ ವಿಶೇಷ ಬಸ್ಸಿನಲ್ಲಿ ಒಂದು ಭಾಗದಲ್ಲಿ ಬಸಪ್ಪನಿಗೆ ಬೇಕಾದ ಮೇವು ನೀರು ಇಡಲು ಮತ್ತು ಮತ್ತೊಂದು ಭಾಗದಲ್ಲಿ ಬಸಪ್ಪನಿಗಾಗಿ ಮೆತ್ತನೆಯ ಹಾಸಿಗೆ ವ್ಯವಸ್ಥೆಯನ್ನು ಮಾಡಲಾಗಿದೆ.
ಅಯೋಧ್ಯೆ ರಾಮನ ದರ್ಶನಕ್ಕೆ ಹೊರಟ ಹನುಮಂತ ದೇವರು!
