ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ ಮನೆಮನೆಗೂ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ. ಇದರ ಜೊತೆಗೆ ನಗರ ಪುಲಕೇಶಿನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಬರೋಬ್ಬರಿ ಎಂಎಲ್ಡಿ ಸಾಮರ್ಥ್ಯದ ಜಲಾಗಾರಕ್ಕೆ ಶಂಕುಸ್ಥಾಪನೆ ನೆರೆವೇರಿಸಿದ್ದಾರೆ. ಈ ಯೋಜನೆಯ ಬಗ್ಗೆ ಅವರು ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಪುಲಕೇಶಿನಗರದ ಪಿಳ್ಳಣ್ಣ ಗಾರ್ಡನ್ನಲ್ಲಿ 4 ಎಂಎಲ್ಡಿ ಸಾಮರ್ಥ್ಯದ ಜಲಾಗಾರಕ್ಕೆ ಶಂಕುಸ್ಥಾಪನೆ ನೆರೆವೇರಿಸಿದ್ದೇನೆ. ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬುದನ್ನು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಮನೆ ಮನೆಗೆ ಕಾವೇರಿ ನೀರು ಒದಗಿಸುವ ಈ ಜಲಾಗಾರ ಯೋಜನೆ ಈ ಪುಲಕೇಶಿನಗರ ಕ್ಷೇತ್ರದ ಇತಿಹಾಸ ಎಂದು ಶ್ಲಾಘಿಸಿದ್ದಾರೆ.
ಸುಮಾರು 30,000 ಮನೆಗಳ 2.50 ಲಕ್ಷ ಜನರಿಗೆ ಈ ಜಲಾಗಾರ ಯೋಜನೆಯಿಂದ ಕುಡಿಯುವ ನೀರು ಲಭ್ಯವಾಗಲಿದೆ. ಈಗಾಗಲೇ ಈ ಪುಲಕೇಶಿನಗರ ಕ್ಷೇತ್ರಕ್ಕೆ 1,055 ಕೋಟಿ ರೂಪಾಯಿಗಳ ಅನುದಾನಗಳ ಕಾಮಗಾರಿಗೆ ಮಂಜೂರಾತಿ ನೀಡಿದ್ದೇವೆ. ಕ್ಷೇತ್ರದ ಶಾಸಕರಾದ ಎ.ಸಿ.ಶ್ರೀನಿವಾಸ್ ಅವರ ಕೋರಿಕೆಯಂತೆಯೇ ಪುಲಕೇಶಿನಗರದಲ್ಲಿ ನೂತನ ಶಾಲೆ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟಲ್ಲಿ, ಅದನ್ನು ಕಟ್ಟಿಸಿಕೊಡಲು ನಾನು ಸಿದ್ಧ. ಬಿಬಿಎಂಪಿ ವತಿಯಿಂದ ಈ ಕ್ಷೇತ್ರದಲ್ಲಿ ಒಂದು ಆಸ್ಪತ್ರೆ ನಿರ್ಮಿಸಲು ಕೂಡ ಈಗಾಗಲೇ ಯೋಜನೆ ತಯಾರಾಗಿದೆ ಎಂದು ಸಿಹಿಸುದ್ದಿ ನೀಡಿದ್ದಾರೆ.
ಮನೆ ಕಟ್ಟುವವರು ಯಾರಿಗೂ ಲಂಚ ಕೊಡಬೇಡಿ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಆರಂಭಿಸುತ್ತಿದ್ದೇವೆ. ಮನೆ ಕಟ್ಟುವವರು ಯಾರಿಗೂ ಲಂಚ ಕೊಡುವಂತಿಲ್ಲ. “ನಂಬಿಕೆ ನಕ್ಷೆ”ಯ ಮೂಲಕ ನಿಮ್ಮ ಮನೆಯಲ್ಲೇ ಕುಳಿತು ನಕ್ಷೆಗಳಿಗೆ ಅನುಮೋದನೆ ಪಡೆಯುವಂತಹ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಇಡೀ ಬೆಂಗಳೂರಿನ ತ್ಯಾಜ್ಯ (ಕಸ) ನಿರ್ವಹಣೆಗೆ ಒಂದು ವ್ಯವಸ್ಥಿತ “ಸ್ವಚ್ಛ ಬೆಂಗಳೂರು” ಎನ್ನುವ ಸಹಾಯವಾಣಿ ಸಂಖ್ಯೆಯನ್ನು ಕೂಡ ಆರಂಭಿಸುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಇಂದು ಬೆಂಗಳೂರು ನಗರದಾದ್ಯಂತ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಅದಕ್ಕೂ ಮೊದಲು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ನಮಿಸಿ ಇಂದಿನ ದಿನವನ್ನು ಆರಂಭಿಸೋಣ ಎಂದು ಟ್ಯಾನರಿ ರಸ್ತೆಯ ಪೆರಿಯಾರ್ ಸರ್ಕಲ್ನಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದೆ ಎಂದಿದ್ದಾರೆ.
ಕಾಂಗ್ರೆಸ್ನಿಂದ ಪೋಸ್ಟರ್ ಎಡವಟ್ಟು ಕರ್ನಾಟಕ ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಿದ್ದು ಎನ್ನುವ ರೀತಿ ನಕ್ಷೆ ಇರುವ ಫೋಟೋ ಹಂಚಿಕೊಂಡು ಎಡವಟ್ಟು ಮಾಡಿಕೊಂಡಿತ್ತು. ಇದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾದ ಹಿನ್ನೆಲೆ ತಕ್ಷಣವೇ ಆ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಕೆ ಶಿವಕುಮಾರ್, ಪಕ್ಷದ ರಾಷ್ಟ್ರೀಯ ನಾಯಕರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುತ್ತಾರೆ. ಕರ್ನಾಟಕ ಕಾಂಗ್ರೆಸ್ನ ಇತ್ತೀಚಿನ ಟ್ವೀಟ್ಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ತೆಗೆದುಹಾಕಿದ್ದೇವೆ ಎಂದು ಹೇಳಿದ್ದಾರೆ.