ಬೆಂಗಳೂರು: ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಸಾವಿರಾರು ನೌಕರರು ಕೆಲಸ ಮಾಡುತ್ತಿದ್ದಾರೆ. ಅವರ ಉದ್ಯೋಗ ಭದ್ರತೆ ಕಲ್ಪಿಸಬೇಕಾದ ರಾಜ್ಯ ಸರ್ಕಾರ ಎರಡು ತಿಂಗಳಿನಿಂದ ವೇತನವನ್ನೇ ನೀಡಿಲ್ಲ. ಹೀಗಾಗಿ ಸಂಘ ಮನವಿ ಮಾಡಿದೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಒತ್ತಾಯಿಸಿದ್ದಾರೆ. ದಪ್ಪ ಚರ್ಮದ ಸರ್ಕಾರ ವೇತನ ವಿತರಣೆ ಮಾಡದೇ ನೌಕರರು ಕೆಲಸ ಕಳೆದುಕೊಳ್ಳುವಂತ ಸ್ಥಿತಿಗೆ ತಂದಿಟ್ಟಿದೆ ಎಂದು ದೂರಿದ್ದಾರೆ.

ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿ.ವೈ. ವಿಜಯೇಂದ್ರ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ”ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ NHM ನೌಕರರ ಹಿಡಿಶಾಪ” ಹಾಕುತ್ತಿದ್ದಾರೆ. ಅವರಿಗೆ ವೇತನ ನೀಡದೇ ಸರ್ಕಾರ ದುಡಿಸಿಕೊಳ್ಳುತ್ತಿದೆ. ರಾಜ್ಯ ಆರೋಗ್ಯ ಇಲಾಖೆಯ NHM ನೌಕರರಿಗೆ ಕಳೆದ 2 ತಿಂಗಳಿಂದಲೂ ವೇತನ ನೀಡದೇ ಸತಾಯಿಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾವಿರಾರು ನೌಕರರು ಆಕ್ರೋಶಗೊಂಡಿದ್ದಾರೆ. ವೇತನ ಇಲ್ಲದೇ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಹೇಳಿದರು.
ಒಪ್ಪಂದ ನವೀಕರಿಸಿಲ್ಲ, ಜೀತದಾಳು ರೀತಿ ಕೆಲಸ 2025-26 ನೇ ಸಾಲಿನ ಸಿಬ್ಬಂದಿಗಳ ಒಪ್ಪಂದದ ಅವಧಿ ನವೀಕರಿಸದೇ ಜೂನ್ ವರೆಗೆ ವಿಸ್ತರಿಸುವ ಮೂಲಕ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವ ಆತಂಕದ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ನಿರ್ಮಿಸಿದೆ. NHM ನೌಕರರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ NHM ನೌಕರರನ್ನು ಖಾಯಂಗೊಳಿಸುವ ವಾಗ್ದಾನ ನೀಡಿತ್ತು, ವಾಗ್ದಾನ ಈಡೇರಿಸುವುದಿರಲಿ ಸದ್ಯ ಸಂಬಳವನ್ನೂ ನೀಡದೇ, ಉದ್ಯೋಗ ಅಭದ್ರತೆ ಸೃಷ್ಟಿಸಿದೆ. ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ದುಡಿಯುವ ಸಾವಿರಾರು ನೌಕರರು ನಿತ್ಯವೂ ನರಳುವಂತೆ ಮಾಡಿರುವ ಈ ದಪ್ಪಚರ್ಮದ ಸರ್ಕಾರದ ತಾತ್ಸಾರ ಧೋರಣೆ ಖಂಡನೀಯ ಎಂದರು.
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯನ್ನೂ ಹಾಗೂ ಇಲಾಖೆಯ ನೌಕರರನ್ನು ಈ ಪರಿಯಾಗಿ ನಿರ್ಲಕ್ಷಿಸುವುದನ್ನು ಗಮನಿಸಿದರೆ ಆರೋಗ್ಯ ಕ್ಷೇತ್ರದ ಕುರಿತು ಈ ಸರ್ಕಾರಕ್ಕಿರುವ ತಾತ್ಸಾರ ಧೋರಣೆಯನ್ನು ಸಾಕ್ಷೀಕರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೂ ಟಾಂಗ್ ಕೊಟ್ಟಿದ್ದಾರೆ.
ನೌಕರರ ಸಂಘದ ಮನವಿ ಏನು? ಎರಡು ತಿಂಗಳು ಕಳೆದರೂ ಎನ್ಎಚ್ಎಂ ನೌಕರರಿಗೆ ವೇತನ ನೀಡಿಲ್ಲದ ಕಾರಣ ‘ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘ’ವು ಸರ್ಕಾರಕ್ಕೆ ಆಗ್ರಹಿಸಿದೆ. ಈ ಸಂಬಂಧ ಸಂಘದ ಅಧ್ಯಕ್ಷರಾದ ಶ್ರೀಕಾಂತ್ ಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ. ವೇತನ ಪಾವತಿಯಾಗದೇ ನೌಕರರ ಜೀವನ ದುಸ್ತರವಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಶೀಘ್ರವೇ ಬಾಕಿ ಉಳಿಸಿಕೊಂಡ ವೇತನವನ್ನು ಒಟ್ಟಿಗೆ ನೀಡುವಂತೆ ಕೋರಿದ್ದಾರೆ.