ಹಾಸನ: ತಾಯಿಯೊಬ್ಬಳು ತನ್ನ ಆರು ವರ್ಷದ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಲೆಗೈದಿರುವ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದ ಸಾನ್ವಿ (6) ಮೃತ ಬಾಲಕಿ. ತಾಯಿ ಶ್ವೇತಾ ಮಗಳನ್ನು ಕೊಂದ ನಂತರ ತಾನೂ ಸಾಯುವುದಾಗಿ ಕಿರುಚಾಡುತ್ತಿದ್ದಳು. ಆಗ ಆಕೆಯನ್ನು ಸ್ಥಳೀಯರು ರಕ್ಷಿಸಿ, ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಶ್ವೇತಾ ಅವರ ತಂದೆ-ತಾಯಿ ಇಬ್ಬರೂ ನಿಧನರಾಗಿದ್ದು, ಅವರ ಏಳು ಸಹೋದರಿಯರು ಎಲ್ಲರೂ ಮದುವೆಯಾಗಿದ್ದಾರೆ. ಆಗಾಗ್ಗೆ ತವರು ಮನೆಗೆ ಬಂದು, ಇವರಿಗಿರುವ ಅಲ್ಪ ಜಮೀನನ್ನು ಉಳುಮೆ ಮಾಡಿಸಿ ಬೆಳೆ ಬೆಳೆಯುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಅಕ್ಕತಂಗಿಯರು ಬಂದು ಹೋಗುತ್ತಿದ್ದರು. ತಂದೆ-ತಾಯಿ ನಿಧನ, ಗಂಡನ ಮನೆಯಲ್ಲಿ ಮನಸ್ತಾಪ. ಹೀಗೆ ನಾನಾ ಕಾರಣಗಳಿಂದ ಶ್ವೇತಾ ಗಂಡನಿಂದ ದೂರವಾಗಿ, ಕಳೆದ ಐದು ವರ್ಷಗಳಿಂದ ಶಿವಮೊಗ್ಗ ಬಿಟ್ಟು ತವರು ಮನೆಯಲ್ಲೇ ಇದ್ದರು. ಜತೆಗೆ ಗಂಡ ರಘುನಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕುಟುಂಬಸ್ಥರು ಕಳೆದ ನಾಲ್ಕು ತಿಂಗಳ ಹಿಂದೆ ಗ್ರಾಮದ ಹಿರಿಯರು ಸೇರಿ ರಾಜಿ ಸಂಧಾನದ ಮೂಲಕ ಆಕೆಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಶಿವಮೊಗ್ಗದಲ್ಲಿ ಇರಲು ಸಾಧ್ಯವಾಗದೆ ಶನಿವಾರ ಮಗುವಿನೊಂದಿಗೆ ತವರಿಗೆ ಬಂದಿದ್ದಳು. ಮಗುವನ್ನು ಆಕೆ ನೀರಿನಲ್ಲಿ ಮುಳುಗಿಸುತ್ತಿರುವುದನ್ನು ಕಂಡ ಸ್ಥಳೀಯರು ನೀರಿಗಿಳಿದು ಮಗುವನ್ನು ಆಚೆಗೆ ಎಳೆದು ತಂದು, ಪ್ರಥಮ ಚಿಕಿತ್ಸೆ ನೀಡಿ ಮಗುವನ್ನು ಬದುಕಿಸಲು ಯತ್ನಿಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ