ಹಾವೇರಿ: “ಏಲಕ್ಕಿ ಓಣಿಯಲ್ಲಿ ಬಂಗಾರಪ್ಪ ದಾನಪ್ಪ ಹಂದ್ರಾಳ ಎಂಬುವರು ಅಂಗಡಿ ಇಟ್ಟುಕೊಂಡಿದ್ದು, ಇತರೆ ಧಾನ್ಯಗಳ ಜೊತೆಗೆ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರು. ನಮ್ಮ ಬಳಿ ಅಕ್ಕಿ ಖರೀದಿ ಮಾಡಿ ತೆಗೆದುಕೊಂಡು ಹೋಗಿದ್ದಾರೆ ಎಂದು ಪಡಿತರ ಅಕ್ಕಿ ಫಲಾನುಭವಿಗಳು ತಿಳಿಸಿದರು. 21 ಕ್ವಿಂಟಾಲ್ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ. ಅಂಗಡಿ ಮೇಲೆ ದಾಳಿ ಮಾಡಿದ್ದೇವೆ, ಎಫ್ಐಆರ್ ದಾಖಲು ಮಾಡುತ್ತೇವೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ” ಎಂದು ಸಹಾಯಕ ಆಹಾರ ನಿರೀಕ್ಷಕ ವಿಜಯಕುಮಾರ್ ಗುಡಗೇರಿ ತಿಳಿಸಿದರು.

ಹಾವೇರಿ ಸಹಾಯಕ ಆಹಾರ ನಿರೀಕ್ಷಕ ವಿಜಯಕುಮಾರ್ ಗುಡಗೇರಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನಭಾಗ್ಯ ಅಕ್ಕಿ ಸೀಜ್ ಮಾಡಿ ಹಾವೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಏಲಕ್ಕಿ ಓಣಿಯ ಅಂಗಡಿಯೊಂದರಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಆರೋಪ ಕೇಳಿಬಂದ ಹಿನ್ನೆಲೆ ವರದಿ ಮಾಡಲು ಹೋಗಿದ್ದ ಮಾಧ್ಯಮದವರ ಮೇಲೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ವ್ಯಕ್ತಿಯೊಬ್ಬ ಹಲ್ಲೆಗೆ ಯತ್ನಿಸಿ, ಕ್ಯಾಮರಾ ಧ್ವಂಸ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಖಾಸಗಿ ವಾಹಿನಿಯ ವರದಿಗಾರರೊಬ್ಬರು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.